ಚಿತ್ರದುರ್ಗ: ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದ ಭೂ ದಾಖಲಾತಿ ಅಧಿಕಾರಿಗಳು
ಚಿತ್ರದುರ್ಗದಲ್ಲಿ ಎಸಿಬಿ ರೈಡ್. ಭೂ ದಾಖಲೆಗಳ ಇಲಾಖೆಯ ಇಬ್ಬರು ಅಧಿಕಾರಿಗಳ ಬಂಧನ. ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ದಾಳಿ ನಡೆಸಿ ಬಂಧಿಸಿದ ಎಸಿಬಿ ಅಧಿಕಾರಿಗಳು.
ಚಿತ್ರದುರ್ಗ, ಜೂನ್ 15: ಇಲ್ಲಿನ ಭೂ ದಾಖಲಾತಿಗಳ ಕಚೇರಿಯಲ್ಲಿ ನಾಗರಿಕರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ನಡೆದ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ನಡೆಸಿದ ದಾಳಿಯಲ್ಲಿ ಭೂ ದಾಖಲಾತಿಗಳ ಉಪ ನಿರ್ದೇಶಕ ಡಾ. ಬಿ. ರಾಜಣ್ಣ ಹಾಗೂ ಜಿಲ್ಲೇ ಸರ್ವೇ ಕಚೇರಿಯಲ್ಲಿ ಸರ್ವೇಯರ್ ಆಗಿ ಸೇವೆ ಸಲ್ಲಿಸುತ್ತಿರುವ ಎಚ್.ಜೆ. ನಾಗರಾಜ್ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ನಗರದ ಜೋಗಿಮಟ್ಟಿ ರಸ್ತೆಯ ನಿವಾಸಿಯೊಬ್ಬರು ತಮ್ಮ ಹೆಸರಿನಲ್ಲಿರುವ ತಾಳವಟ್ಟಿ ಗ್ರಾಮದ 4 ಎಕರೆ 17 ಗುಂಟೆ ಜಮೀನಿನ 11-ಇ ಸರ್ವೆ ಸ್ಕೇಚ್ಗಾಗಿ ಜಿಲ್ಲಾ ಸರ್ವೆ ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿದಾರರ 4 ಎಕರೆ 17 ಗುಂಟೆ ಜಮೀನಿನ 11-ಇ ಸರ್ವೆ ಸ್ಕೆಚ್ ಮಾಡಿಕೊಡಲು ಅರ್ಜಿದಾರರಿಂದ 3 ಸಾವಿರ ರು.ಗಳಿಗೆ ಲಂಚದ ಬೇಡಿಕೆಯಿಟ್ಟು ಆನಂತರ, 2 ಸಾವಿರ ರು.ಗಳಿಗೆ ಕೆಲಸ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದರು. ಈ ಬಗ್ಗೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನು ಸಲ್ಲಿಸಿದ್ದರು.
ಈ ದೂರಿನನ್ವಯ ನಾಗರಾಜ್ ಅವರಿಂದ ರಾಜಣ್ಣ ಅವರು ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ಎಸಿಬಿ ಚಿತ್ರದುರ್ಗ ಜಿಲ್ಲೆ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರೆದಿದೆ.