ನವ ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪತ್ತು ಬಯಲಿಗೆ ಎಳೆದ ಎಸಿಬಿ
ಬೆಂಗಳೂರು, ಮಾರ್ಚ್ 10: ರಾಜ್ಯದ ವಿವಿಧ ಇಲಾಖೆಗಳ 9 ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪತ್ತನ್ನು ಭ್ರಷ್ಟಾಚಾರ ನಿಗ್ರಹ ದಳ ಬಯಲಿಗೆ ಎಳೆದಿದೆ. ಹನ್ನೊಂದು ಜಿಲ್ಲೆಗಳಲ್ಲಿ 28 ಕಡೆ ದಾಳಿ ನಡೆಸಿದ ಎಸಿಬಿ ತಂಡಗಳು ಆದಾಯಕ್ಕಿಂತೂ ಹೆಚ್ಚು ಆಸ್ತಿ ಗಳಿಸಿದವರ ಅಕ್ರಮ ಸಂಪತ್ತು ಸಾಮ್ರಾಜ್ಯವನ್ನು ಬಟಾ ಬಯಲು ಮಾಡಿದೆ. ಕೋಟಿ ವೀರರ ಅಕ್ರಮ ಸಂಪತ್ತು ವಿವರ ಇಲ್ಲಿದೆ.
ವಿಕ್ಟರ್ ಸೈಮನ್, ಪೊಲೀಸ್ ಇನ್ಸ್ಪೆಕ್ಟರ್ , ಬಿಎಂಟಿಎಫ್
ಬಿಎಂಟಿಎಫ್ ಪೊಲೀಸ್ ಇನ್ಸ್ಪೆಕ್ಟರ್ ವಿಕ್ಟರ್ ಸೈಮನ್ ಆದಾಯಕ್ಕಿಂತಲೂ ಶೇ. 257 ರಷ್ಟು ಆಸ್ತಿ ಗಳಿಸಿರುವುದು ಎಸಿಬಿ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ. ನ್ಯಾಷನಲ್ ಗೇಮ್ಸ್ ವಿಲೇಜ್ನಲ್ಲಿ ಒಂದು ಫ್ಲ್ಯಾಟ್, ಮೈಸೂರಿನಲ್ಲಿ 129 ಚದರ ಅಡಿಯಲ್ಲಿ ಐಷಾರಾಮಿ ಬಂಗಲೆ, ಮೈಸೂರಿನಲ್ಲಿ 2 ನಿವೇಶನ, 10 ಎಕರೆ ಕೃಷಿ ಜಮೀನು, ₹1 ಕೋಟಿ ಬೆಲೆಯ ಬಾಂಡ್ ಪೇಪರ್ ಹೊಂದಿದ್ದಾರೆ. ಜತೆಗೆ, ಬ್ಯಾಂಕ್ ಲಾಕರ್ ನಲ್ಲಿದ್ದ 500 ಗ್ರಾಂ ಚಿನ್ನಾಭರಣ, ಮನೆಯಲ್ಲಿ 7.26 ಲಕ್ಷ ನಗದು, 22.36 ಲೀಟರ್ ದುಬಾರಿ ಮದ್ಯದ ಬಾಟಲಿ, 21 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಹಲವು ಬಾರಿ ವಿದೇಶ ಪ್ರವಾಸ ಮಾಡಿರುವ ದಾಖಲೆಗಳು ದೊರೆತಿವೆ.
9 ಭ್ರಷ್ಟರಿಗೆ ಬೆಳ್ಳಂಬೆಳಿಗ್ಗೆ ಎಸಿಬಿ ಶಾಕ್: ರಾಜ್ಯದ ಅನೇಕ ಕಡೆ ದಾಳಿ
ಬಿಬಿಎಂಪಿ ಇಂಜಿನಿಯರ್ ಕೆ. ಸುಬ್ರಮಣ್ಯ
ಬಿಬಿಎಂಪಿ ಯಶವಂತಪುರ ವಲಯದ ಕಿರಿಯ ಇಂಜಿನಿಯರ್ ಕೆ. ಸುಬ್ರಮಣ್ಯಂ ಆದಾಯಕ್ಕಿಂತಲು ಶೇ. 364 ರಷ್ಟು ಅಕ್ರಮ ಆಸ್ತಿ ಗಳಿಸಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇಂಜಿನಿಯರ್ ಕೆಲಸದ ಜತೆಗೆ ಅಕ್ರಮ ದುಡಿಮೆಗಾಗಿ ವೈಟ್ಫೀಲ್ಡ್ ಬಳಿ 33 ಕೊಠಡಿಯುಳ್ಳ ಪಿಜಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಸುಬ್ರಹ್ಮಣ್ಯಂಗೆ ಸೇರಿದ ಸಹಕಾರ ನಗರದಲ್ಲಿ ವಾಸದ ಮನೆ, ಬೆಂಗಳೂರಿನ ವಿವಿಧೆಡೆ 4 ನಿವೇಶನ ಪತ್ತೆಯಾಗಿದೆ. ಇನ್ನೋವಾ ಕಾರು, ಫಿಯೆಟ್ ಪುಂಟೋ, ಐ10 ಕಾರು, 531 ಗ್ರಾಂ ಚಿನ್ನ, 8 ಕೆ.ಜಿ ಬೆಳ್ಳಿ ಆಭರಣ, ವಿವಿಧ ಬ್ಯಾಂಕ್ಗಳಲ್ಲಿ 1 ಕೋಟಿ ಠೇವಣಿ, ₹31.90 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ದಾಳಿಯಲ್ಲಿ ಸಿಕ್ಕಿವೆ. ಅಲ್ಲದೇ ವಿದೇಶ ಪ್ರವಾಸದ ದಾಖಲೆಗಳು ಪತ್ತೆಯಾಗಿವೆ.
ಯಾದಗಿರಿ ಜೆಸ್ಕಾಂ ಲೆಕ್ಕಾಧಿಕಾರಿ ರಾಜು ಪತ್ತಾರ್
ಯಾದಗಿರಿ ಜೆಸ್ಕಾಂ ಕಚೇರಿ ಲೆಕ್ಕಾಧಿಕಾರಿ ರಾಜು ಪತ್ತಾರ್ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಶೇ. 233 ಪಟ್ಟು ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ಯಾದಗಿರಿಯಲ್ಲಿ ವಾಸದ ಮನೆ, , 676 ಗ್ರಾಂ ಚಿನ್ನ, 1 ಕೆ.ಜಿ 362 ಗ್ರಾಂ ಬೆಳ್ಳಿ ವಸ್ತು, ಒಂದು ಕಾರು, ₹1.71 ಲಕ್ಷ ನಗದು, ಮುಂಡರಗಿಯಲ್ಲಿ ನಿವೇಶನ, ಯಾದಗರಿಯಲ್ಲಿ 7 ನಿವೇಶನ, ಶಾರದಾಗಿರಿಯಲ್ಲಿ 2 ನಿವೇಶನ, 3 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಬ್ಯಾಂಕ್ ಖಾತೆಗಳಲ್ಲಿ ₹31.75 ಲಕ್ಷ ಠೇವಣಿ ಇಟ್ಟಿರುವುದು ದಾಳಿಯಲ್ಲಿ ಬೆಳಕಿಗೆ ಬಂದಿದೆ.
ವಿವಿಧ ಜಿಲ್ಲೆಯಲ್ಲಿ ಎಸಿಬಿ ದಾಳಿ; ನಗದು, ಚಿನ್ನಾಭರಣಗಳು ಪತ್ತೆ
ಕೃಷ್ಣೇಗೌಡ, ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ ಚಿಕ್ಕಬಳ್ಳಾಪುರ
ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೃಷ್ಣೇಗೌಡ ಆದಾಯಕ್ಕಿಂತೂ ಮೀರಿ 295 ರಷ್ಟು ಅಕ್ರಮ ಆಸ್ತಿ ಹೊಂದಿರುವುದು ಎಸಿಬಿ ದಾಳಿಯ ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ. ನಿವೇಶನ ಪ್ರಿಯ ಕೃಷ್ಣೇಗೌಡ, ಕೋಲಾರ, ಚಿಕ್ಕಬಳ್ಳಾಪುರ ಚಿಂತಾಮಣಿಯಲ್ಲಿ 19 ನಿವೇಶನ ಹೊಂದಿದ್ದಾರೆ. ಮಾತ್ರವಲ್ಲ 24 ಎಕರೆ ಕೃಷಿ ಭೂಮಿ, ಶಿಡ್ಲಘಟ್ಟ ಸಮೀಪ ಫೌಲ್ಟ್ರಿ ಫಾರಂ ಹೊಂದಿದ್ದಾರೆ. ಇದರ ಜತೆಗೆ ವಾಸಕ್ಕಾಗಿ ಎರಡು ಮನೆ ನಿರ್ಮಾಣ ಮಾಡಿದ್ದು, ಎಲ್ಲಾ ದಾಖಲೆಗಳನ್ನು ಎಸಿಬಿ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದೆ.
ಮುನಿಗೋಪಾಲ್ ರಾಜ್, ಸೂಪರಿಟೆಂಡಿಂಗ್ ಇಂಜಿನಿಯರ್ ಮೈಸೂರು ಚೆಸ್ಕಾಂ
ಮೈಸೂರು ಚೆಸ್ಕಾಂ ಸೂಪರಿಂಟೆಂಡಿಂಗ್ ಎಂಜಿನಿಯರ್ ಮುನಿಗೋಪಾಲರಾಜ್ ಗಳಿಸಿರುವ ಶೇ. 196 ರಷ್ಟು ಅಕ್ರಮ ಆಸ್ತಿಯನ್ನು ಮೈಸೂರು ಜಿಲ್ಲಾ ಎಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮುನಿ ಗೋಪಾಲ್ ರಾಜ್ ಮನೆಯಲ್ಲಿ 50ಕ್ಕೂ ಹೆಚ್ಚು ಕಡತಗಳು ಮತ್ತು ಅದರಲ್ಲಿ ಬಚ್ಚಿಟ್ಟಿದ್ದ 2.45 ಲಕ್ಷ ನಗದು ಸಿಕ್ಕಿದೆ. ಮೈಸೂರಿನ ಗೋಕುಲಂನಲ್ಲಿ 1 ಮನೆ, ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಫ್ಲಾಟ್, ಮೈಸೂರಿನ ವಿವಿಧೆಡೆ 6 ನಿವೇಶನ, ಕೆಂಗೇರಿಯಲ್ಲಿ 1 ಫ್ಲ್ಯಾಟ್, 6 ಎಕರೆ ಕೃಷಿ ಜಮೀನು, 3 ಕಾರು, 717 ಗ್ರಾಂ ಚಿನ್ನ, 16 ಕೆ.ಜಿ ಬೆಳ್ಳಿ ವಸ್ತು, 20 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಹೊಂದಿದ್ದಾರೆ ಎಂದು ಎಸಿಬಿ ಪ್ರಕಟಣೆ ತಿಳಿಸಿದೆ.
Recommended Video
ಉಳಿದ ನಾಲ್ವರ ಸಂಪತ್ತು
ಹಾವೇರಿ ಜಿಲ್ಲೆಯ ಫ್ಯಾಕ್ಟರೀಸ್ ಮತ್ತು ಬಾಯ್ಲರ್ ವಿಭಾಗದ ಉಪನಿರ್ದೇಶಕ ಕೆ.ಎಂ. ಪ್ರಥಮ್ ಆದಾಯಕ್ಕಿಂತ ಶೇ 118ರಷ್ಟು ಹೆಚ್ಚು ಆಸ್ತಿ ಹೊಂದಿರುವುದು ದಾಳಿಯಲ್ಲಿ ಗೊತ್ತಾಗಿದೆ. ಬೆಂಗಳೂರಿನ ಸಂಜಯನಗರದಲ್ಲಿ ಒಂದು ಮನೆ, 400 ಗ್ರಾಂ ಚಿನ್ನ, 69 ಗ್ರಾಂ ಬೆಳ್ಳಿ, 25 ಲಕ್ಷ ಬೆಲೆ ಬಾಳುವ ಗೃಹೋಪಯೋಗಿ ವಸ್ತು ಪತ್ತೆಯಾಗಿದೆ. ಮೈಸೂರಿನ ನಗರ ಯೋಜನೆಗಳ ಜಂಟಿ ನಿರ್ದೇಶಕ ಸುಬ್ರಮಣ್ಯ ಕೆ.ವಡ್ಡರ್ ಅವರು ಪುತ್ತೂರಿನಲ್ಲಿ 1 ಮನೆ, 206 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ, 1.35 ಲಕ್ಷ ನಗದು, 15 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಹೊಂದಿದ್ದಾರೆ. ಶೇ 88.33ರಷ್ಟು ಅಸಮತೋಲನ ಆಸ್ತಿ ಪತ್ತೆಯಾಗಿದೆ.
ಬೆಳಗಾವಿ ಉಪ ಮುಖ್ಯ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಹನಮಂತ ಶಿವಪ್ಪ ಚಿಕ್ಕಣ್ಣ ಬೆಳಗಾವಿಯಲ್ಲಿ ಮನೆ, 2 ಫ್ಲಾಟ್, 1 ಪೆಂಟಾ ಹೌಸ್, 4 ವಾಣಿಜ್ಯ ಮಳಿಗೆ ಹೊಂದಿದ್ದಾರೆ. ಈ ಮಳಿಗೆಗಳಲ್ಲಿ 71.75 ಲಕ್ಷ ಮೌಲ್ಯದ ವಸ್ತುಗಳು, 816 ಗ್ರಾಂ ಚಿನ್ನ, 6 ಕೆ.ಜಿ ಬೆಳ್ಳಿ ವಸ್ತುಗಳು, 1.88 ಲಕ್ಷ ನಗದು ಪತ್ತೆಯಾಗಿದೆ. ಮೈಸೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಕಚೇರಿ ಪ್ರಥಮ ದರ್ಜೆ ಸಹಾಯಕ ಚನ್ನವೀರಪ್ಪ ಅವರು ಮಂಡ್ಯದಲ್ಲಿ ಮನೆ, ಪತ್ನಿ ಹೆಸರಿನಲ್ಲಿ ಕೆರಗೋಡಿನಲ್ಲಿ ಮನೆ, 2 ನಿವೇಶನ, 34 ಗುಂಟೆ ಕೃಷಿ ಜಮೀನು, ಹೋಂಡಾ ಸಿಟಿ ಕಾರು, 5 ಲಕ್ಷ ಮೌಲ್ಯದ
ವಿಮಾ ಪಾಲಿಸಿ, 13.50 ಲಕ್ಷ ಬೆಲೆ ಬಾಳುವ ವಸ್ತು ಪತ್ತೆ ಮಾಡಿದ್ದಾರೆ. 9 ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.