21 ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪತ್ತು ಮೀರಿಸಿದ ನಿವೃತ್ತ ಇಂಜಿನಿಯರ್ ಆಸ್ತಿ
ಬೆಂಗಳೂರು, ಜೂ. 18: ಶುಕ್ರವಾರ ಎಸಿಬಿ ದಾಳಿಗೆ ಒಳಗಾದ 21 ಅಧಿಕಾರಿಗಳ ಪೈಕಿ ಅತಿ ಹೆಚ್ಚು ಅಕ್ರಮ ಆಸ್ತಿ ಗಳಿಸಿರುವುದು ಯಾರು ಗೊತ್ತಾ ? ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಜಿ. ಮಂಜುನಾಥ್. 2018 ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿರುವ ಜಿ. ಮಂಜುನಾಥ್ ಅವರ ಕೊರೊನಾ ಕಾಲದ ಕೋಟಿ ಕೋಟಿ ವಹಿವಾಟು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.
ಶುಕ್ರವಾರ ಎಸಿಬಿ ದಾಳಿಗೆ ಒಳಗಾಗಿದ್ದ ಜಿ. ಮಂಜುನಾಥ್ ಅವರದ್ದು ಐದು ಎಕರೆ ಜಮೀನು, ಎರಡು ವಾಣಿಜ್ಯ ಕಟ್ಟಡ, ಎರಡು ಮನೆ ಹಾಗೂ ಎರಡು ಪ್ಲಾಟ್ ನ ದಾಖಲೆಗಳು ಪತ್ತೆಯಾಗಿದ್ದವು. ಮಂಜುನಾಥ್ ಅವರ ಸೇವಾವಧಿ ಆದಾಯ ಮತ್ತು ವೆಚ್ಚವನ್ನು ಸರಿದೂಗಿಸಿ ಲೆಕ್ಕ ಹಾಕಿದಾಗ ಶೇ. 635 ರಷ್ಟು ಅಕ್ರಮ ಆಸ್ತಿ ಹೊಂದಿರುವುದು ಪ್ರಾಥಮಿಕ ತನಿಖೆಯಿಂದ ಹೊರ ಬಂದಿದೆ.
ಎಸಿಬಿ ದಾಳಿ: ಕಂತೆ ಕಂತೆ ಹಣ ಗಂಟು! ಚಿನ್ನಾಭರಣದ ಸಂಪತ್ತು!
ಮಂಜುನಾಥ್ ಅವರು ಇತ್ತೀಚೆಗೆ ತಮ್ಮ ಮಗಳು ವರ್ಷ ಅವರ ನಿಶ್ಚಿತಾರ್ಥ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಮಾಡಿದ್ದರು. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದು, ಅದರ ಬಗ್ಗೆಯೂ ಎಸಿಬಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಕಂದಾಯ ಇಲಾಖೆಯ ಸರ್ವೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಅವರ ಮೇಲೆ ಇತ್ತೀಚೆಗೆ ನಾನಾ ಆರೋಪಗಳು ಕೇಳಿ ಬಂದಿದ್ದವು. ಈ ಕುರಿತು ಎಸಿಬಿ ಹಾಗೂ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಹ ಸಲ್ಲಿಕೆಯಾಗಿತ್ತು. ದೂರಿನ ಬೆನ್ನಲ್ಲೇ ಎಸಿಬಿ ಅಧಿಕಾರಿಗಳ ಶುಕ್ರವಾರ ಮಂಜುನಾಥ್ ಜಿ. ಅವರ ಶಾರದಾ ಕಾಲೋನಿ ನಿವಾಸದ ಮೇಲೆ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಉಪ ನೋಂದಣಾಧಿಕಾರಿಗಳ ಅಕ್ರಮಗಳ ಬಗ್ಗೆ ಮಾಹಿತಿ ಪಡೆದು ಅವರಿಂದ ಈಗಲು ವಸೂಲಿ ಮಾಡುತ್ತಾರೆ. ಅಲ್ಲದೇ ವರ್ಗಾವಣೆ ದಂಧೆ ಮಾಡುತ್ತಿದ್ದ ಆರೋಪದ ಬಗ್ಗೆ ದೂರುಗಳು ದಾಖಲಾಗಿದ್ದವು.
ನಿವೃತ್ತಿ ಬಳಿಕ ತನ್ನ ಪತ್ನಿ ಉಮಾದೇವಿ ಹೆಸರಿನಲ್ಲಿ ಜಯನಗರದಲ್ಲಿ ಸುಮಾರು 20 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡವನ್ನು ಕೊರೊನಾ ಸಂಕಷ್ಟ ಕಾಲದಲ್ಲಿಯೇ ಖರೀದಿ ಮಾಡಿದ್ದ. ವಯೋವೃದ್ಧ ತಾಯಿ ಹೆಸರಿನಲ್ಲಿ ಹಲವು ಆಸ್ತಿಗಳನ್ನು ಖರೀದಿ ಮಾಡಿರುವುದು ಎಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇನ್ನು ಮಂಜುನಾಥ್ ಅವರು ಶಾಸಕರ ಭವನದಲ್ಲಿರುವ ಸಹಕಾರ ಬ್ಯಾಂಕ್ ನಲ್ಲಿ ಕೋಟಿ ಕೋಟಿ ಮೌಲ್ಯದ ವಹಿವಾಟು ನಡೆಸಿದ್ದರು. ಒಬ್ಬ ಸರ್ಕಾರಿ ಅಧಿಕಾರಿ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ ಬಿಟ್ಟು ಸಹಕಾರ ಬ್ಯಾಂಕ್ ಗಳಲ್ಲಿ ವಹಿವಾಟು ನಡೆಸಿದ್ದ ಬಗ್ಗೆ ಮಂಜುನಾಥ್ ವಿರುದ್ಧ ಸಲ್ಲಿಸಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ದಾಖಲೆಗಳ ಸತ್ಯಾ ಸತ್ಯತೆ ಪರಿಶೀಲಿಸಿದ ಬಳಿಕ ಇದೀಗ ದಾಳಿಗೆ ಒಳಗಾಗಿದ್ದು, ಕೋಟ್ಯಂತರ ಅಕ್ರಮ ಆಸ್ತಿ ಬಯಲಿಗೆ ಬಂದಿದೆ.
ಯಾರದ್ದು ಎಷ್ಟು ಅಕ್ರಮ ಆಸ್ತಿ:
1. ಜಿ. ಮಂಜುನಾಥ್, ಲೋಕೋಪಯೋಗಿ ಇಲಾಖೆ ನಿವೃತ್ತ ಇಂಜಿನಿಯರ್ ,
ಅಕ್ರಮ ಆಸ್ತಿ ಪ್ರಮಾಣ: ಶೇ. 635
2. ಶ್ರೀಧರ್ , ಜಿಲ್ಲಾ ಉಪ ನೋಂದಣಾಧಿಕಾರಿ, ಕಾರವಾರ,
ಅಕ್ರಮ ಆಸ್ತಿ: ಶೇ. 202
3. ಎ. ಮೋಹನ್ ಕುಮಾರ್, ಕಾರ್ಯಪಾಲಕ ಅಭಿಯಂತರ, ನೀರಾವರಿ ಇಲಾಖೆ, ಚಿಕ್ಕಬಳ್ಳಾಪುರ
ಅಕ್ರಮ ಆಸ್ತಿ: ಶೇ. 129
4. ತಿಪ್ಪಣ್ಣ ಸಿರಸಗಿ, ಜಿಲ್ಲಾ ಯೋಜನಾ ಅಧಿಕಾರಿ, ಮ. ಮ ಕಲ್ಯಾಣ ಇಲಾಖೆ, ಬೀದರ್,
ಅಕ್ರಮ ಆಸ್ತಿ: ಶೇ. 182
5. ಮೃತ್ಯಂಜಯ ಸಿ. ತಿರಾಣಿ, ಹಿರಿಯ ಸಹಾಯಕ, ಪಶು ವಿಶ್ವ ವಿದ್ಯಾಲಯ, ಬೀದರ್,
ಅಕ್ರಮ ಆಸ್ತಿ ಶೇ. 306
6. ಉದಯರವಿ ಪೊಲೀಸ್ ಇನ್ಸ್ಪೆಕ್ಟರ್ ಕೊಪ್ಪಳ,
ಅಕ್ರಮ ಆಸ್ತಿ ಶೇ. 150 ರಷ್ಟು
07. ವಿ. ಪರಮೇಶ್ವರಪ್ಪ, ಸಹಾಯಕ ಅಭಿಯಂತರ, ನೀರಾವರಿ ಇಲಾಖೆ, ವಿಜಯನಗರ ಜಿಲ್ಲೆ,
ಅಕ್ರಮ ಅಸ್ತಿ: ಶೇ. 245
08. ಜನಾರ್ಧನ್ ಕೆ. ರಿಜಿಸ್ಟ್ರಾರ್ ಮೌಲ್ಯಮಾಪನ ನಿವೃತ್ತ, ಬೆಂಗಳೂರು ಉತ್ತರ ವಿವಿ,
ಅಕ್ರಮ ಆಸ್ತಿ: ಶೇ. 56
09. ಶಿವಲಿಂಗಯ್ಯ, ಗಾರ್ಡನರ್, ಬಿಡಿಎ,
ಅಕ್ರಮ ಅಸ್ತಿ: ಶೇ. 294
10. ಮಧುಸೂಧನ್ ಸಹಾಯಕ ಮಹಾ ನಿರೀಕ್ಷಕ, ಐಜಿಆರ್ ಕಚೇರಿ, ಕಂದಾಯ ಭವನ,
ಅಕ್ರಮ ಆಸ್ತಿ. ಶೇ. 230
ಇನ್ನೂ ಹನ್ನೊಂದು ಅಧಿಕಾರಿಗಳ ಅಕ್ರಮ ಆಸ್ತಿ ಗಳಿಕೆ ಸಂಬಂಧ ಎಸಿಬಿ ಅಧಿಕಾರಿಗಳು ಅಸಮತೋಲನ ಆಸ್ತಿ ವಿವರ ಸಂಗ್ರಹಿಸಿದ್ದಾರೆ. ಸರಾಸರಿ 100 ಕ್ಕಿಂತಲೂ ಹೆಚ್ಚು ಅಸ್ತಿ ಗಳಿಕೆ ಮಾಡಿರುವುದು ಕಂಡು ಬಂದಿದೆ. ಇನ್ನೂ ಕೆಲವು ಅಧಿಕಾರಿಗಳ ಬ್ಯಾಂಕ್ ದಾಖಲೆ, ಆಸ್ತಿ ವಿವರಗಳನ್ನು ಎಸಿಬಿ ಅಧಿಕಾರಿಗಳು ಪಡೆದು ತನಿಖೆ ನಡೆಸುತ್ತಿದ್ದಾರೆ. ಎಸಿಬಿ ತನಿಖೆ ಮುಗಿದ ಬಳಿಕ ಪೂರ್ಣ ಚಿತ್ರಣ ಲಭ್ಯವಾಗಲಿದೆ.