ಎಸಿಬಿ ಗಾಳಕ್ಕೆ ಬಿದ್ದ ಏಳು ಭ್ರಷ್ಟರ ಅಕ್ರಮ ಆಸ್ತಿ Rank ಪಟ್ಟಿ ಬಿಡುಗಡೆ !
ಬೆಂಗಳೂರು, ಫೆಬ್ರವರಿ 03: ಸಂಬಳ ಬಿಟ್ಟು ಒಂದು ರೂಪಾಯಿ ಹೆಚ್ಚುವರಿ ಗಳಿಸಬೇಕೆಂದರೆ ನಾನಾ ಕಷ್ಟ ಪಡಬೇಕು. ಆದರೆ ಸರ್ಕಾರಿ ಅಧಿಕಾರಿಗಳು ತಮ್ಮ ಸಂಬಳಕ್ಕಿಂತಲೂ ಎರಡು ಪಟ್ಟು ಹೆಚ್ಚಾಗಿ ಗಿಂಬಳವೇ ಮಾಡಿರುವ ಸಂಗತಿ ಎಸಿಬಿ ತನಿಖೆಯಲ್ಲಿ ಬಯಲಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ದಾಳಿಗೆ ತುತ್ತಾಗಿರುವ ಏಳು ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿಯ ಅಂಕಿ ಅಂಶಗಳು ಈ ಸತ್ಯವನ್ನು ಹೊರ ಹಾಕಿವೆ. ಕಾನೂನು ಬದ್ಧ ಆದಾಯಕ್ಕಿಂತೂ ಮೂರು ಪಟ್ಟು ಜಾಸ್ತಿ ಅಕ್ರಮ ಆಸ್ತಿ ಗಳಿಸಿರುವುದು ಎಸಿಬಿ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಏಳು ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿಯ ಪ್ರಮಾಣದ ವಿವರಗಳು ಈ ಕೆಳಗಿನಂತಿದೆ.
ಅಕ್ರಮ ಗಳಿಕೆಯಲ್ಲಿ ಡಾಕ್ಟರ್ ನಂಬರ್ ಒನ್
ಏಳು ಭ್ರಷ್ಟರ ಪೈಕಿ ಅತಿ ಹೆಚ್ಚು ಅಕ್ರಮ ಆಸ್ತಿಯನ್ನು ಗಳಿಸುವ ಮೂಲಕ ಕೋಲಾರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್.ಎನ್. ವಿಜಯ್ ಕುಮಾರ್ ಮೊದಲ ಸ್ಥಾನ ಪಡೆದಿದ್ದಾರೆ. ಎಸಿಬಿ ಪ್ರಾಥಮಿಕ ತನಿಖೆಯಲ್ಲಿ ವಿಜಯ್ ಕುಮಾರ್ ತನ್ನ ಆದಾಯಕ್ಕಿಂತಲೂ ಹೆಚ್ಚಾಗಿ ಶೇ. 343 ಪಟ್ಟು ಹೆಚ್ಚು ಅಕ್ರಮ ಆಸ್ತಿ ಗಳಿಸಿರುವುದು ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲಾ ಆರೋಗ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್. ಎನ್. ವಿಜಯ್ ಕುಮಾರ್ ಎಸಿಬಿ ದಾಳಿ ವೇಳೆ ಮೂರು ವಾಸದ ಮನೆ, ಮೂರು ಪ್ಲಾಟ್, ಮೂರು ನಿವೇಶನ, ಒಂದು ಖಾಸಗಿ ಆಸ್ಪತ್ರೆ, ಎರಡು ಆರು, ಒಂದು ದ್ವಿಚಕ್ರ ವಾಹನ, ಬ್ಯಾಂಕ್ ಖಾತೆಯಲ್ಲಿ 61 ಲಕ್ಷ ರೂಪಾಯಿ ನಗದು, ಒಂದೂವರೆ ಕೆರೆ ಕೃಷಿ ಜಮೀನು ಪತ್ತೆಯಾಗಿತ್ತು. ಎಲ್ಲಾ ಕಾನೂನು ಬದ್ಧ ಆದಾಯ ಮೂಲ ಹೊರತು ಪಡಿಸಿ ಸಂಬಳಕ್ಕಿಂತಲೂ ಗಿಂಬಳವೇ ಮೂರುವರೆ ಪಟ್ಟು ಜಾಸ್ತಿ ಮಾಡಿರುವುದು ಈಗ ಹೊರ ಬಿದ್ದಿದೆ. ತನಿಖೆಯಲ್ಲಿ ಈ ಪ್ರಮಾಣ ಜಾಸ್ತಿಯಾಗಬಹುದು, ಇಲ್ಲವೇ ಕಡಿಮೆಯಾಗಬಹುದು.
ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದ ಎಸಿಬಿ ಅಧಿಕಾರಿಗಳು
2ನೇ ಅಕ್ರಮ ಆಸ್ತಿ ವಂತ ಸಣ್ಣ ನೀರು !
ಧಾರವಾಡದ ಸಣ್ಣ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ದೇವರಾಜ್ ಕಲ್ಲೇಶ್ ತನ್ನ ಆದಾಯಕ್ಕಿಂತಲೂ ಎರಡೂ ಕಾಲು ಪಟ್ಟು ಅಕ್ರಮ ಆಸ್ತಿ ಗಳಿಸಿದ್ದಾರೆ. ಸಂಬಳಕ್ಕಿಂತಲೂ ಗಿಂಬಳ ಪ್ರಮಾಣ ಶೇ. 223 ರಷ್ಟು ಗಳಿಸುವ ಮೂಲಕ ಎರಡನೇ ಸ್ಥಾನ ಗಳಿಸಿದ್ದಾರೆ. ದೇವರಾಜ್ ಕಲ್ಲೇಶ್ ಅವರ ಮನೆ ಮೇಲೆ ದಾಳಿ ನಡೆಸಿದಾಗ 59 ಲಕ್ಷ ರೂಪಾಯಿ ನಗದು ಪತ್ತೆಯಾಗಿತ್ತು. ಬ್ಯಾಂಕ್ ಖಾತೆಯಲ್ಲಿ 30 ಲಕ್ಷ ರೂಪಾಯಿ ಠೇವಣಿ, ಅರ್ಧ ಕೆ.ಜಿ. ಚಿನ್ನ, ನಾಲ್ಕು ಕೆ.ಜಿ. ಬೆಳ್ಳಿ, ಎರಡು ವಾಸದ ಮನೆ, ಎರಡು ನಿವೇಶನ ಹಾಗೂ 26 ಎಕರೆ ಕೃಷಿ ಜಮೀನು ದಾಖಲೆ ಎಸಿಬಿ ಸಂಗ್ರಹಿಸಿತ್ತು.
ನಂಬರ್ - 3 ಪಿಡಬ್ಲೂಡಿ ಇಂಜಿನಿಯರ್
ತನ್ನ ಆದಾಯಕ್ಕಿಂತಲೂ ಶೇ. 220 ರಷ್ಟು ಅಕ್ರಮ ಆಸ್ತಿ ಗಳಿಸುವ ಮೂಲಕ ರಾಮನಗರ ಜಿಲ್ಲೆ ಮಾಗಡಿ ವಿಭಾಗದ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಚನ್ನಬಸಪ್ಪ ಅಕ್ರಮ ಆಸ್ತಿ ಗಳಿಕೆಯಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ. ಚನ್ನಬಸಪ್ಪ ಮನೆ ಮೇಲೆ ದಾಳಿ ನಡೆಸಿದಾಗ 8 ಫ್ಲಾಟ್ ಗಳು, ಒಂದು ಸೂಪರ್ ಮಾರ್ಟ್, ಫಾರ್ಮ್ ಹೌಸ್, ಎರಡು ಕಾರು, ಎರಡು ದ್ವಿಚಕ್ರ ವಾಹನ ಹಾಗೂ 1. 02 ಲಕ್ಷ ರೂ. ನಗದು ಹಣ, 125 ಗ್ರಾಂ ಚಿನ್ನದ ಒಡವೆ, 650 ಗ್ರಾಂ ಬೆಳ್ಳಿ ಸಾಮಾನು ಪತ್ತೆಯಾಗಿತ್ತು.
ಭ್ರಷ್ಟರ ಸಂಪತ್ತು ಬಚ್ಚಿಡಲು ಎಸಿಬಿ ಬಳಿ ಲಾಕರ್ ಇಲ್ಲ !
Recommended Video
ಅರಣ್ಯ ರಕ್ಷಕನಿಗೆ ನಾಲ್ಕನೇ ಸ್ಥಾನ !
ಧಾರವಾಡ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ತನ್ನ ಸಂಬಳಕ್ಕಿಂತಲೂ ಒಂದೂವರೆ ಪಟ್ಟು ಅಂದರೆ ಶೇ. 143 ರಷ್ಟು ಅಕ್ರಮ ಆಸ್ತಿ ಗಳಿಸುವ ಮೂಲಕ ನಾಲ್ಕನೇ ಸ್ಥಾನವನ್ನು ಗಳಿಸಿದ್ದಾರೆ. ಇದು ಎಸಿಬಿ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಎಸಿಬಿ ದಾಳಿಯಲ್ಲಿ ಶ್ರೀನಿವಾಸ್ ಅವರಿಗೆ ಸೇರಿದ ಎರಡು ವಾಸದ ಮನೆ, ಒಂದು ಫಾರ್ಮ್ ಹೌಸ್, ಎರಡು ನಿವೇಶನ, ಎರಡು ಕಾರು ಒಂದು ಟ್ರ್ಯಾಕ್ಟರ್, ಒಂದು ಕೆ.ಜಿ. ಚಿನ್ನ, ಮೂರು ಕೆ.ಜಿ ಬೆಳ್ಳಿ, 4.87 ಲಕ್ಷ ರೂ. ನಗದು, ಬ್ಯಾಂಕ್ ಖಾತೆಯಲ್ಲಿ ಐದು ಲಕ್ಷ ರೂ. ನಗದು. 63 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತು ಪತ್ತೆಯಾಗಿತ್ತು.
ಉಳಿದಂತೆ ಮಂಗಳೂರು ಮಹಾನಗರ ಪಾಲಿಕೆ ನಗರ ಯೋಜನೆ ವಿಭಾಗದ ಜಂಟಿ ನಿರ್ದೇಶಕ ಜಯರಾಜ್ , ಸಹಕಾರ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿರುವ ಪಾಂಡುರಂಗ ಗರಗ್ ಆಜುಬಾಜು ಆದಾಯಕ್ಕಿಂತೂ ಒಂದು ಪಟ್ಟು ಜಾಸ್ತಿ ಅಕ್ರಮ ಆಸ್ತಿ ಗಳಿಸಿದರೆ, ಆದಾಯಕ್ಕಿಂತಲೂ ಶೇ. 50 ರಷ್ಟು ಅಕ್ರಮ ಆಸ್ತಿ ಗಳಿಸಿ ಕಡಿಮೆ ಗಿಂಬಳ ಮಾಡಿದ ಕೀರ್ತಿ ಕೊಪ್ಪಳದ ಕಿಮ್ಸ್ ವೈದ್ಯ ಶ್ರೀನಿವಾಸ್ ಅವರದ್ದು.