ಬೊಮ್ಮಾಯಿ ಸರ್ಕಾರದ ದ್ವಂದ ನಡೆ: ಕರ್ನಾಟಕದಲ್ಲಿ ಭ್ರಷ್ಟಾಚಾರಕ್ಕೆ "ಸುವರ್ಣ ಕಾಲ"
ಬೆಂಗಳೂರು, ಆ. 16: ಲಂಚ ಸ್ವೀಕಾರ, ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಎಸಿಬಿಗೆ ದೂರು ಕೊಟ್ರೆ ' ಎಸಿಬಿ ರದ್ದಾಗಿದೆ ಇಲ್ಲಿ ದೂರು ಸ್ವೀಕರಿಸಲ್ಲ' ಎಂದು ಹೇಳಿ ಎಸಿಬಿ ಸಿಬ್ಬಂದಿ ವಾಪಸು ಕಳಿಸುತ್ತಿದ್ದಾರೆ. ' ನೀವಾದ್ರೂ ಕೇಸು ತಗೊಳ್ಳಿ ಎಂದು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ರೆ, ಎಸಿಬಿ ಲೋಕಾಯುಕ್ತದೊಳಗೆ ಇನ್ನೂ ವಿಲೀನ ಆಗಿಲ್ಲ. ಸರ್ಕಾರ ಅದೇಶ ನೀಡುವವರೆಗೂ ದೂರು ಸ್ವೀಕರಿಸೋಕೆ ನಮಗೆ ಅಧಿಕಾರ ಇಲ್ಲ ಅಂತ ಅವರು ಹೇಳಿ ವಾಪಸು ಕಳಿಸುತ್ತಿದ್ದಾರೆ. ಭ್ರಷ್ಟಾಚಾರ, ಲಂಚ ಸ್ವೀಕಾರದ ಬಗ್ಗೆ ದೂರು ನೀಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿ ಹೈಕೋರ್ಟ್ ತೀರ್ಪು ನೀಡಿ ಐದು ದಿನ ಕಳೆದಿದೆ. ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಎಸಿಬಿ ಭ್ರಷ್ಟಾಚಾರ ಸಂಬಂಧ ದೂರುಗಳನ್ನು ಸ್ವೀಕರಿಸುತ್ತಿಲ್ಲ. ಅತ್ತ ಲೋಕಾಯುಕ್ತ ಸಂಸ್ಥೆ ಕೂಡ ಭ್ರಷ್ಟಾಚಾರ, ಲಂಚಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸುತ್ತಿಲ್ಲ. ಬೊಮ್ಮಾಯಿ ಸರ್ಕಾರದ ದ್ವಂದ ನೀತಿಯಿಂದಾಗಿ ರಾಜ್ಯದಲ್ಲಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದಂತಾಗಿದೆ. ರಾಜ್ಯ ಸರ್ಕಾರದ ಜಾಣ ನಡೆಯಿಂದಾಗಿ ಭ್ರಷ್ಟರು ರಾಜಾರೋಷವಾಗಿ ಲಂಚ ಸ್ವೀಕರಿಸಲು ಮುಕ್ತ ಅವಕಾಶ ಕಲ್ಪಿಸಿದಂತಾಗಿದೆ.
Breaking: ಜಾಹೀರಾತಲ್ಲಿ ನೆಹರು ಹೆಸರು ಕೈ ಬಿಟ್ಟ ಕರ್ನಾಟಕ ಸರ್ಕಾರ
ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಮಾನ್ಯತೆ
ಗೊಂದಲದಲ್ಲಿ ಜನರು: ಆ. 11 ರಂದು ಹೈಕೋರ್ಟ್ ವಿಭಾಗೀಯ ಪೀಠ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿ ಲೋಕಾಯುಕ್ತಕ್ಕೆ ವಿಲೀನಗೊಳಿಸಿ ಮಹತ್ವದ ಆದೇಶ ನೀಡಿದೆ. ಹೈಕೋರ್ಟ್ ಆದೇಶದ ಬಳಿಕ ಬೊಮ್ಮಾಯಿ ಸರ್ಕಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸಬೇಕಿತ್ತು. ಇಲ್ಲವೇ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕಿತ್ತು. ಇದ್ಯಾವ ಪ್ರಕ್ರಿಯೆಗೂ ಚಾಲನೆ ಸಿಕ್ಕಿಲ್ಲ. ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ದೂರುಗಳನ್ನು ಸ್ವೀಕರಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈಗಾಗಲೇ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು ಸಹ ನಿಲ್ಲಿಸಲು ಎಸಿಬಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೀಗಾಗಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಲಂಚ ಸ್ವೀಕಾರ ಪ್ರಕರಣ, ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರು ನೀಡುತ್ತಿರುವ ದೂರುಗಳನ್ನು ಎಸಿಬಿ ಸ್ವೀಕರಿಸುತ್ತಿಲ್ಲ.
ಲೋಕಾಯುಕ್ತ ಭ್ರಷ್ಟಾಚಾರ ದೂರು ಸ್ವೀಕರಿಸುತ್ತಿಲ್ಲ
ಅತ್ತ ಎಸಿಬಿದ್ದು ಒಂದು ಕಥೆಯಾದರೆ, ಲೋಕಾಯುಕ್ತದ್ದು ಇನ್ನೊಂದು ಕಥೆ. ಹೈಕೋರ್ಟ್ ತೀರ್ಪಿನ ಬಳಿಕ ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ ರದ್ದು ಪಡಿಸಿ ಎಸಿಬಿಗೆ ವಿಲೀನಗೊಳಿಸಿ ಆದೇಶ ಮಾಡಬೇಕು. ಅಲ್ಲಿಯವರೆಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳನ್ನು ಲೋಕಾಯುಕ್ತ ಪೊಲೀಸರು ಸ್ವೀಕರಿಸಲು ಸಾಧ್ಯವಿಲ್ಲ. ಒಂದು ವೇಳೆ ಸ್ವೀಕರಿಸಿ ದೂರು ದಾಖಲಿಸಿಕೊಂಡು ಕ್ರಮ ವಹಿಸಿದರೂ ಆ ಪ್ರಕರಣಗಳಿಗೆ ಕಾನೂನಿನ ಮಾನ್ಯತೆ ಸಿಗುವುದಿಲ್ಲ. ಹೀಗಾಗಿ ಭ್ರಷ್ಟಾಚಾರ ಪ್ರಕರಣಗಳು ರದ್ದಾಗುತ್ತವೆ. ಮಿಗಿಲಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವ ದೂರುಗಳು ಬಂದರೆ ಅವನ್ನು ಸ್ವೀಕರಿಸಿ ಕಾರ್ಯಾಚರಣೆ ನಡೆಸುವ ಪೊಲೀಸ್ ಸಿಬ್ಬಂದಿಯೂ ಲೋಕಾಯುಕ್ತದಲ್ಲಿ ಇಲ್ಲ. ಹೀಗಾಗಿ ಭ್ರಷ್ಟಾಚಾರಕ್ಕೆ ಸಂಬಂಧಿಸದಿಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರೂ ಅಲ್ಲಿಯೂ ಸ್ವೀಕರಿಸುತ್ತಿಲ್ಲ. ಒಂದು ವೇಳೆ ಸ್ವೀಕರಿಸಿದರು ಕಾರ್ಯಾಚರಣೆ ನಡೆಸುವ ಯಾವ ನಂಬಿಕೆಯೂ ಇಲ್ಲ. ರಾಜ್ಯದಲ್ಲಿರುವ ಎರಡೂ ತನಿಖಾ ಸಂಸ್ಥೆಗಳ ಕಾರ್ಯ ಸ್ಥಗಿತಗೊಂಡಿದೆ.
ಭ್ರಷ್ಟಾಚಾರ ಸಂಬಂಧ ದೂರು ಎಲ್ಲಿ ಕೊಡಬೇಕು?
ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳವೂ ಕಾರ್ಯ ನಿರ್ವಹಿಸುತ್ತಿಲ್ಲ. ಇತ್ತ ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ವಿಲೀನ ಕಾರ್ಯವೂ ಆಗದೇ ಲೋಕಾಯುಕ್ತ ಸಂಸ್ಥೆಯೂ ಕೈ ಕಟ್ಟಿ ಕೂತಿದೆ. ಇದನ್ನ ಅರಿತ ಭ್ರಷ್ಟ ಅಧಿಕಾರಿಗಳು ಲಂಚಾವತಾರದಲ್ಲಿ ತೊಡಗಿದ್ದಾರೆ. ಬಹಿರಂಗವಾಗಿ ಲಂಚ ಸ್ವೀಕರಿಸಿದರು ಅವರನ್ನು ಕೇಳುವರೇ ಇಲ್ಲದಂತಾಗಿದೆ. ಭ್ರಷ್ಟಾಚಾರ ಸಂಬಂಧ ದೂರುಗಳನ್ನು ಸ್ವೀಕರಿಸಿ ಕಾರ್ಯಚರಣೆ ನಡೆಸುವವರೇ ಇಲ್ಲದಂತಾಗಿದೆ. ಹೀಗಾಗಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೂರು ಕೊಡಲಾಗದ ಕಾಲ ಒದಗಿ ಬಂದಿದೆ.
ಬೊಮ್ಮಾಯಿ ಸರ್ಕಾರದ ಗೊಂದಲದ ಗೂಡು
ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರ ವಿಚಾರದಲ್ಲಿ ಈಗಾಗಲೇ 40 ಪರ್ಸೆಂಟ್ ಗೌರ್ನಮೆಂಟ್ ಎಂದೇ ಖ್ಯಾತಿ ಪಡೆದಿದೆ. ಹೈಕೋರ್ಟ್ ತೀರ್ಪಿನ ಬಳಿಕ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ಬಸವರಾಜ ಬೊಮ್ಮಾಯಿ ಸ್ಪಷ್ಟ ತೀರ್ಮಾನ ಪ್ರಕಟಿಸಬೇಕಿತ್ತು. ಹೈಕೋರ್ಟ್ ತೀರ್ಪು ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ ಎಂದಾದರೂ ಹೇಳಬೇಕಿತ್ತು. ಇಲ್ಲವೇ ಎಸಿಬಿಯನ್ನು ಲೋಕಾಯುಕ್ತದೊಳಗೆ ವಿಲೀನಗೊಳಿಸಿ ಅಧಿಸೂಚನೆ ಹೊರಡಿಸುವ ಬಗ್ಗೆಯಾದರೂ ಸ್ಪಷ್ಟನೆ ನೀಡಬೇಕಿತ್ತು. ಇದ್ಯಾವುದರ ಬಗ್ಗೆ ಚಕಾರ ಎತ್ತದೇ ಬಸವರಾಜ ಬೊಮ್ಮಾಯಿ ಅವರು ಎಸಿಬಿ ವಿಚಾರದಲ್ಲಿ ಮೌನ ವೃತ ಆಚರಿಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಭ್ರಷ್ಟಾಚಾರ ವಿಚಾರದಲ್ಲಿ ಸುವರ್ಣ ಕಾಲ ಸೃಷ್ಟಿಯಾಗಿದೆ. ಯಾರು ಎಷ್ಟು ಲಂಚ ಕೇಳಿ ಪಡೆದರೂ ಕೇಳುವರು ಇಲ್ಲದಂತಾಗಿದೆ.
Recommended Video