ಹರಿದ್ವಾರ: ಸುಧೀಂದ್ರ ತೀರ್ಥರ ವೈಭವದ ಆರಾಧನಾ ಮಹೋತ್ಸವ
ಕಾಶೀಮಠ ಸಂಸ್ಥಾನದ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪ್ರಥಮ ಪುಣ್ಯ ತಿಥಿಯ ಅಂಗವಾಗಿ ಶ್ರೀಗಳವರ ಆರಾಧನಾ ಮಹೋತ್ಸವ ಗುರುವಾರ (ಜ 6) ಹರಿದ್ವಾರದ ವ್ಯಾಸ ಮಂದಿರದ ಆವರಣದಲ್ಲಿರುವ ಶ್ರೀಗಳವರ ವೃಂದಾವನದಲ್ಲಿ ವೈಭವದಿಂದ ನೆರವೇರಿತು.
ಮಂಗಳೂರು, ಜ 6: ಕಾಶೀಮಠ ಸಂಸ್ಥಾನದ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪ್ರಥಮ ಪುಣ್ಯ ತಿಥಿಯ ಅಂಗವಾಗಿ ಶ್ರೀಗಳವರ ಆರಾಧನಾ ಮಹೋತ್ಸವ ಗುರುವಾರ (ಜ 6) ಹರಿದ್ವಾರದ ವ್ಯಾಸ ಮಂದಿರದ ಆವರಣದಲ್ಲಿರುವ ಶ್ರೀಗಳವರ ವೃಂದಾವನದಲ್ಲಿ ವೈಭವದಿಂದ ನೆರವೇರಿತು.
ಕಾಶೀಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ವೃಂದಾವನದಲ್ಲಿ ವಿಶೇಷ ಅಭಿಷೇಕ, ಸರ್ವಾಲಂಕಾರದೊಂದಿಗೆ ಮಹಾಮಂಗಳಾರತಿ ನೆರವೇರಿತು.
ದೇಶದ ವಿವಿದೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಹರಿದ್ವಾರದಲ್ಲಿ ಸೇರಿದ ಶಿಷ್ಯವರ್ಗ ಈ ವೈಭವದ ಕ್ಷಣಗಳನ್ನು ಕೃತಾರ್ಥ ಭಾವದಿಂದ ಕಣ್ತುಂಬಿಕೊಂಡು ಧನ್ಯತೆಯನ್ನು ಅನುಭವಿಸಿತು. (ಕಾಶೀ ಮಠದಲ್ಲಿ ಹನುಮ ವಿಗ್ರಹ ಪ್ರತಿಷ್ಠೆ)
ಪ್ರಾತಃಕಾಲ ನಾಲ್ಕೂವರೆಯಿಂದ ಮಠದಲ್ಲಿ ಶ್ರೀಗಳವರು ಮಹೋತ್ಸವ ದಿನದ ಧಾರ್ಮಿಕ ಪ್ರಕ್ರಿಯೆಗಳನ್ನು ಆರಂಭಿಸಿದ್ದರು. ಮಠದಲ್ಲಿ ಸಂಸ್ಥಾನದ ದೇವರುಗಳ ನೈರ್ಮಲ್ಯ ವಿಸರ್ಜನೆ, ಪಂಚಾಮೃತ, ಪವಮಾನ, ಕನಕಾಭಿಷೇಕ ನೂತನ ಶಿಲಾಮಯ ವೃಂದಾವನದಲ್ಲಿ ಪವಮಾನ, ಕನಕಾಭಿಷೇಕ, ಲಘುವಿಷ್ಣು ಅಭಿಷೇಕ ಶ್ರೀಗಳವರಿಂದ ನೆರವೇರಿತು.
ಅಪರಾಹ್ನ ಸಂಸ್ಥಾನದ ದೇವರುಗಳಿಗೆ ಶ್ರೀಗಳವರಿಂದ ಮಹಾಪೂಜೆ, ವೃಂದಾವನದಲ್ಲಿ ತಮ್ಮ ಗುರುಗಳ ಭಾವಚಿತ್ರಕ್ಕೆ ಶ್ರೀಗಳವರಿಂದ ಭಾವಪೂರ್ಣ ಅರ್ಚನೆ, ಅಲಂಕೃತ ಮುಖ್ಯಪ್ರಾಣ ವಿಗ್ರಹಕ್ಕೆ ಮಹಾಮಂಗಳಾರತಿ ನಡೆಯಿತು.
ಆರಾಧನಾ ಮಹೋತ್ಸವದ ಅಂಗವಾಗಿ ಸೇರಿದ್ದ ಶಿಷ್ಯವರ್ಗ ಪಟ್ಟಕಾಣಿಕೆ ಸಲ್ಲಿಸಿ ಶ್ರೀಗಳವರಿಂದ ವೃಂದಾವನದಲ್ಲಿ ವಿಶೇಷ ಪ್ರಸಾದ, ಮಂತ್ರಾಕ್ಷತೆಯನ್ನು ಸ್ವೀಕರಿಸಿದರು.
ಶಿಷ್ಯವರ್ಗದಿಂದ ವಾಯುಸ್ತುತಿ ಪಠಣ ಸಹಿತ ಪ್ರದಕ್ಷಿಣಾ ನಮಸ್ಕಾರ, ವ್ಯಾಸ ಮಂದಿರದ ಪ್ರಾಂಗಣದಲ್ಲಿ ಉದ್ಧಂಡ ಉರುಳು ಸೇವೆ ನಡೆಯಿತು. ವ್ಯಾಸಮಂದಿರದ ಎದುರಿನ ವ್ಯಾಸ ಘಾಟ್ ನಲ್ಲಿ ಸುಮಂಗಲಿಯರಿಗೆ ಸುವಾಸಿನಿ ಪೂಜೆ, ವಟು ಆರಾಧನೆ, ನಡೆಯಿತು.
ಪ್ರಧಾನ ಸಭಾಂಗಣ ಸುಕೃತೀಂದ್ರ ಸಭಾ ಮಂಟಪದಲ್ಲಿ ಸಮಾಜದ ಪ್ರಸಿದ್ಧ ಸಂಗೀತ ಕಲಾವಿದರಾದ ಪುತ್ತೂರು ನರಸಿಂಹ ನಾಯಕ್, ಪಂಡಿತ್ ಉಪೇಂದ್ರ ಭಟ್, ಶಂಕರ್ ಶ್ಯಾನುಭಾಗ್, ಪುತ್ತೂರು ಪಾಂಡುರಂಗ ನಾಯಕ್, ಕು. ಮಹಾಲಕ್ಷ್ಮಿ ಶೆಣೈ ಸೇರಿಂದಂತೆ ಹಲವರು ಪ್ರಸಿದ್ಧ ಹಿಮ್ಮೇಳ ಕಲಾವಿದರುಗಳಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.
ಇನ್ನೊಂದೆಡೆ ಹಲವೆಡೆಯ ಉತ್ಸಾಹೀ ಭಜನಾ ಮಂಡಳಿ, ಕೀರ್ತನಕಾರರಿಂದ ಭಜನಾಸೇವೆ ನಡೆದಿತ್ತು. ಅಪರಾಹ್ನದ ಪ್ರಧಾನ ಕಾರ್ಯಕ್ರಮಗಳ ಬಳಿಕ ಮಹಾ ಸಮಾರಾಧನೆ ನಡೆಯಿತು. ರಾತ್ರಿ ಸಂಸ್ಥಾನದ ದೇವರುಗಳಿಗೆ ವಿಶೇಷ ಸ್ವರ್ಣಗರುಢವಾಹನ ಪೂಜೆ, ಬಳಿಕ ಮಹಾಸಭೆ, ಶ್ರೀಗಳವರಿಂದ ಆಶೀರ್ವಚನ ನಡೆಯಿತು.
ಬೆಳಗ್ಗೆ ಮತ್ತು ಸಂಜೆಯ ಕೊರೆಯುವ ಚಳಿಯ ನಡುವೆಯೂ ಏಳರಿಂದ ಎಂಟು ಸಾವಿರಕ್ಕೂ ಅಧಿಕ ಶಿಷ್ಯವರ್ಗ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಮಹೋತ್ಸವದಲ್ಲಿ ಪಾಲ್ಗೊಂಡು ಧನ್ಯತೆಯನ್ನು ಅನುಭವಿಸಿತು.
ವಿಶೇಷವಾಗಿ ಪುಷ್ಪಾಲಂಕಾರ, ಒಳಾಂಗಣ ಅಲಂಕಾರ ವ್ಯವಸ್ಥೆ, ನಿರಂತರ ಆತಿಥ್ಯ, ಉಪಹಾರ ವ್ಯವಸ್ಥೆಗಳಿಗಾಗಿ ದೆಹಲಿ ಜಿ.ಎಸ್.ಬಿ.ಸಮಾಜ ಗಮನ ಸೆಳೆಯಿತು.
ಸೇರಿದ್ದ ಎಲ್ಲರಿಗೂ ಕಾರ್ಯಕ್ರಮಗಳ ವೀಕ್ಷಣೆಗಾಗಿ ಅಲ್ಲಲ್ಲಿ ಡಿಜಿಟಲ್ ಪರದೆಗಳನ್ನು ಅಳವಡಿಸಿ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ವೃಂದಾವನದಲ್ಲಿ ಬಿಡುಗಡೆಗೊಂಡಿರುವ ಬಾಗೇಮಂಡಲದ ಭುವನೇಂದ್ರ ಆಯುರ್ವೇದ ವೃಕ್ಷ ವಾಟಿಕಾದ ಸಾಕ್ಷ್ಯಚಿತ್ರ ಸೇರಿದಂತೆ ಮಹೋತ್ಸವಕ್ಕೆ ಸಂಬಂಧಿಸಿದ ಘಟನಾವಳಿಗಳನ್ನು ಪ್ರದರ್ಶಿಸಲಾಗಿತ್ತು.
ಆರಾಧನಾ ಮಹೋತ್ಸವದ ಅಂಗವಾಗಿ ವೃಂದಾವನದಲ್ಲಿ ಶ್ರೀಗಳವರಿಂದ ಮುಖ್ಯಪ್ರಾಣ ವಿಗ್ರಹಕ್ಕೆ ವಿಶೇಷ ಅಭಿಷೇಕಾದಿಗಳು ನಡೆಯುತ್ತಿದ್ದ ವೇಳೆಗೆ ವೃಂದಾವನದ ಮಂಟಪದ ಒಳಭಾಗದಲ್ಲಿ ವಾನರ ಆಗಮನವಾದದ್ದು ಗಮನ ಸೆಳೆಯಿತು.
ಭಜಕರಿಂದ ತುಂಬಿಕೊಂಡಿದ್ದ ವೃಂದಾವನದ ಆವರಣದಲ್ಲಿ ಐದು ನಿಮಿಷಗಳ ಕಾಲ ವಿರಮಿಸಿದ್ದ ವಾನರ ಮಹೋತ್ಸವ ಪ್ರಧಾನ ಪ್ರಕ್ರಿಯೆಗಳನ್ನು ಗಮನಿಸಿ ಅಲ್ಲಿಂದ ನಿರ್ಗಮಿಸಿತು.
ಐದು ದಿನಗಳ ಹಿಂದಷ್ಟೇ ವೃಂದಾವನದಲ್ಲಿ ಹನುಮ ವಿಗ್ರಹ ಪ್ರತಿಷ್ಠಾಪನೆಯ ದಿನದಂದೇ ಮಠದಗೋಶಾಲೆಯಲ್ಲಿ ಹಸುವೊಂದು ಕರುವಿಗೆ ಜನನ ನೀಡಿ ಗಮನ ಸೆಳೆದಿತ್ತು. (ಚಿತ್ರ: ಮಂಜು ನೀರೇಶ್ವಾಲ್ಯ)