ಎಸಿಬಿ ರದ್ದು: ಲೋಕಾಯುಕ್ತ ಕಚೇರಿ ಮುಂದೆ ಎಎಪಿ ಸಿಹಿ ಹಂಚಿ ಸಂಭ್ರಮ
ಬೆಂಗಳೂರು, ಆಗಸ್ಟ್ 12: ಎಸಿಬಿಯನ್ನು ರದ್ದು ಪಡಿಸಿ ಅಲ್ಲಿನ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿದ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿ ಆಮ್ ಆದ್ಮಿ ಪಾರ್ಟಿ ನಾಯಕರು ಹಾಗೂ ಕಾರ್ಯಕರ್ತರು ಲೋಕಾಯುಕ್ತ ಕಚೇರಿ ಮುಂಭಾಗ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಎಸಿಬಿಯ ರಚನೆಯನ್ನು ರದ್ದು ಮಾಡಿರುವುದಕ್ಕೆ ಆಮ್ ಆದ್ಮಿ ಪಕ್ಷ ಸಂತಸವನ್ನು ವ್ಯಕ್ತಪಡಿಸಿದೆ. ಭ್ರಷ್ಟಾಚಾರದ ವಿರುದ್ದ ಸೆಣೆಸಲು ಲೋಕಾಯುಕ್ತ ಸಂಸ್ಥೆಗೆ ಸಂಪೂರ್ಣ ಅಧಿಕಾರವನ್ನು ನೀಡುವ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷವು ನಿರಂತರವಾಗಿ ದನಿಎತ್ತವ ಕೆಲಸವನ್ನು ಮಾಡಿತ್ತು.
ಲೋಕಾಯುಕ್ತದಲ್ಲಿ ಎಸಿಬಿ ವಿಲೀನ: ಎಷ್ಟು ಶಾಸಕರ ವಿರುದ್ಧ ಎಸಿಬಿ ಕೇಸು ದಾಖಲಿಸಿತ್ತು ?
ಇದಕ್ಕಾಗಿ ಹೈಕೋರ್ಟ್ ಆದೇಶವನ್ನು ಆಮ್ ಆದ್ಮಿ ಸ್ವಾಗತಿಸಿತ್ತು. ಕಾನೂನು ಹೋರಾಟದಲ್ಲಿ ಲೋಕಾಯುಕ್ತ ಸಂಸ್ಥೆಗೆ ಸಂದ ಜಯಕ್ಕೆ ಆಮ್ ಆದ್ಮಿ ಪಕ್ಷದ ಕೆಲವು ಪದಾಧಿಕಾರಿಗಳು ಮುಖಂಡರು ಕೇಕ್ ಕತ್ತರಿಸಿ ಸಂತೋಷ ಹಂಚಿಕೊಂಡರು.
"ಎಸಿಬಿ ಸಂಸ್ಥೆಯ ಮೂಲಕ ಭ್ರಷ್ಟ ಸಚಿವರಿಗೆ ರಕ್ಷಣೆ ನೀಡಿತು. ಬಿಜೆಪಿ ಹಾಗೂ ಜೆಡಿಎಸ್ನಲ್ಲೂ ಭ್ರಷ್ಟ ನಾಯಕರು ಇದ್ದಿದ್ದರಿಂದ ಅವು ಕೂಡ ಈ ನಿರ್ಧಾರದಿಂದ ಸಂತೋಷಗೊಂಡವು. ನ್ಯಾಯಾಲಯದ ಆದೇಶದಿಂದಾಗಿ ಆ ಮೂರು ಪಕ್ಷಗಳಿಗೆ ಹಿನ್ನಡೆಯಾಗಿದೆ" ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಆಮ್ ಆದ್ಮಿ ಪಾರ್ಟಿ ಜನ್ಮತಾಳಲು ಕಾರಣ
ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಮಾತನಾಡಿ, "2010 ಹಾಗೂ 2011ರಲ್ಲಿ ಕರ್ನಾಟಕದ ಸಾಮಾಜಿಕ ಹೋರಾಟಗಾರರು ಲೋಕಾಯುಕ್ತ ಸಂಸ್ಥೆಯನ್ನು ಬೆಂಬಲಿಸಿ 'ಭ್ರಷ್ಟಾಚಾರ ಸಾಕು' ಹೋರಾಟವನ್ನು ಆರಂಭಿಸಿದರು. ಅರವಿಂದ್ ಕೇಜ್ರಿವಾಲ್ರವರು ಕೂಡ ಈ ಹೋರಾಟದಲ್ಲಿ ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಈ ಹೋರಾಟವು 'ಭ್ರಷ್ಟಾಚಾರ ವಿರೋಧಿ ಭಾರತ' ಹೆಸರಿನಲ್ಲಿ ದೇಶವ್ಯಾಪಿ ಹರಡಿ, ಆಮ್ ಆದ್ಮಿ ಪಾರ್ಟಿ ಜನ್ಮತಾಳಲು ಕಾರಣವಾಯಿತು. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಕಂಡು ಬೇಸತ್ತಿದ್ದ ಪ್ರಜೆಗಳು ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಲು ಶುರುಮಾಡಿದರು" ಎಂದು ಹೇಳಿದರು.
ರಾಜ್ಯ ಸರ್ಕಾರವು ಲೋಕಾಯುಕ್ತ ಅಧಿಕಾರ ನೀಡಲಿ
"ಎಸಿಬಿಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳ ತನಿಖೆಯನ್ನು ಲೋಕಾಯುಕ್ತ ಸಂಸ್ಥೆಯು ತ್ವರಿತಗತಿಯಲ್ಲಿ ನಡೆಸಬೇಕು. ಅದೇ ರೀತಿ, ಎಸಿಬಿಯು ಮುಚ್ಚಿಹಾಕಿರುವ ಪ್ರಕರಣಗಳ ತನಿಖೆಯನ್ನು ಲೋಕಾಯುಕ್ತವು ಪುನರಾರಂಭಿಸಬೇಕು. ಹಲವು ಪ್ರಭಾವಿ ವ್ಯಕ್ತಿಗಳಿಗೆ ಎಸಿಬಿಯಿಂದ ಕ್ಲೀನ್ಚಿಟ್ ಸಿಕ್ಕಿದ್ದು, ಈಗ ಲೋಕಾಯುಕ್ತವು ಆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ಕೈಗೆತ್ತಿಕೊಂಡರೆ ಅಪರಾಧಿಗಳು ಹೊರಬರುತ್ತಾರೆ. ರಾಜ್ಯ ಸರ್ಕಾರವು ಲೋಕಾಯುಕ್ತ ಸಂಸ್ಥೆಗೆ ಪರಮಾಧಿಕಾರ ನೀಡುವ ಮೂಲಕ ಇದಕ್ಕೆ ಅವಕಾಶ ಮಾಡಿಕೊಡಲಿ" ಎಂದು ಪೃಥ್ವಿರೆಡ್ಡಿ ಆಗ್ರಹಿಸಿದರು.
ಎಸಿಬಿ ಸಂಸ್ಥೆ ಭ್ರಷ್ಟ ಸಚಿವರಿಗೆ ರಕ್ಷಣೆ ನೀಡಿತು
ಆಮ್ ಆದ್ಮಿ ಪಾರ್ಟಿಯ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, "ಲೋಕಾಯುಕ್ತ ಸಂಸ್ಥೆಗೆ ಶಕ್ತಿಯಿದ್ದರೆ ಹಲವು ನಾಯಕರು ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೆದರಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 2016ರಲ್ಲಿ ಎಸಿಬಿ ಎಂಬ ನಾಟಕೀಯ ಸಂಸ್ಥೆಯನ್ನು ರಚಿಸಿತು. ಲೋಕಾಯುಕ್ತ ಸಂಸ್ಥೆಗಿದ್ದ ಅಧಿಕಾರವನ್ನು ಕಿತ್ತುಕೊಂಡು ಅದನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿತು. ಸರ್ಕಾರವೇ ನಿಯಂತ್ರಿಸುವಂತಹ ಎಸಿಬಿ ಸಂಸ್ಥೆಯ ಮೂಲಕ ಭ್ರಷ್ಟ ಸಚಿವರಿಗೆ ರಕ್ಷಣೆ ನೀಡಿತು. ಬಿಜೆಪಿ ಹಾಗೂ ಜೆಡಿಎಸ್ನಲ್ಲೂ ಭ್ರಷ್ಟ ನಾಯಕರು ಇದ್ದಿದ್ದರಿಂದ ಅವು ಕೂಡ ಈ ನಿರ್ಧಾರದಿಂದ ಸಂತೋಷಗೊಂಡವು. ನ್ಯಾಯಾಲಯದ ಆದೇಶದಿಂದಾಗಿ ಆ ಮೂರು ಪಕ್ಷಗಳಿಗೆ ಹಿನ್ನಡೆಯಾಗಿದೆ" ಎಂದು ಹೇಳಿದರು.
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹ
ಪಕ್ಷದ ನಾಯಕರುಗಳು ಲೋಕಾಯುಕ್ತರನ್ನು ಭೇಟಿ ಮಾಡಿ ಶೀಘ್ರ ಗತಿಯಲ್ಲಿ ಪ್ರಕರಣಗಳನ್ನು ಮುಗಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು. ನಿಯೋಗದಲ್ಲಿ ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಮಾಧ್ಯಮ ವಕ್ತಾರ ಕೆ. ಮಥಾಯಿ , ಹಿರಿಯ ಮುಖಂಡರುಗಳಾದ ಲಕ್ಷ್ಮೀಕಾಂತ ರಾವ್ , ಚನ್ನಪ್ಪಗೌಡ ನೆಲ್ಲೂರ, ಕುಶಲ ಸ್ವಾಮಿ , ರಾಜಶೇಖರ್ ದೊಡ್ಡಣ್ಣ, ಉಷಾ ಮೋಹನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.