ಮಾನಹಾನಿ ಪ್ರಕರಣದಲ್ಲಿ ಮಂಡ್ಯದ ಮಿಮ್ಸ್ ಪ್ರಾಧ್ಯಾಪಕ ಪರಮೇಶ್
ಮಂಡ್ಯ,ಜನವರಿ,21: ಮಂಡ್ಯ ಮಿಮ್ಸ್ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಆರಂಭವಾದಾಗಿನಿಂದಲೂ ಇಲ್ಲಿ ನಡೆಯುತ್ತಿರುವ ಎಡವಟ್ಟುಗಳು ಸುದ್ದಿಗೆ ಗ್ರಾಸವಾಗುತ್ತಲೇ ಇದೆ. ಇದೀಗ ಮಹಿಳಾ ತೇಜೋವಧೆ ಮತ್ತು ಮಾನಹಾನಿ ಪ್ರಕರಣಕ್ಕೆ ಮಿಮ್ಸ್ ತುತ್ತಾಗಿದೆ.
ಕೆಲ ತಿಂಗಳಿನಿಂದ ಮಿಮ್ಸ್ ನ ಮಾಜಿ ನಿರ್ದೇಶಕಿ ಡಾ. ಪುಷ್ಪಾ ಸರ್ಕಾರ್ ಮೇಲೆ ತೇಜೋವಧೆ ಮಾಡಿದ್ದಾರೆ. ಮಾನಹಾನಿಗೆ ಪ್ರಯತ್ನಿಸಿದ್ದಾರೆ ಎಂಬ ಆರೋಪವನ್ನು ಮಂಡ್ಯ ಮಿಮ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಪರಮೇಶ್ ಎದುರಿಸುತ್ತಿದ್ದಾರೆ. ಐಪಿಸಿ ಸೆಕ್ಷನ್ 509 (ಮಹಿಳೆಯರ ಮಾನ ಹಾನಿ ಕಾಯ್ದೆ) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.[ಮಹಿಳಾ ದೌರ್ಜನ್ಯ ವಿರುದ್ದ ದನಿಯಾದ ವಾಮಾ ಬಲ್ದೋಟ]
ಮಿಮ್ಸ್ ನ ಗೋಡೆಗಳ ಮೇಲೆ ಕೆಲ ತಿಂಗಳ ಹಿಂದೆ ನಿಗೂಢವಾಗಿ ತನ್ನ ವಿರುದ್ಧ ಕಾಣಿಸಿಕೊಂಡಿದ್ದ ಅಶ್ಲೀಲ ಭಿತ್ತಿಪತ್ರಗಳ ಹಿಂದೆ ಡಾ. ಪರಮೇಶ್ ಕೈವಾಡವಿದೆ. ಮಿಮ್ಸ್ ನ ಮುಖ್ಯಸ್ಥರು ಮತ್ತು ಮೈಸೂರಿನಲ್ಲಿನ ತನ್ನ ನಿವಾಸಕ್ಕೂ ಅಶ್ಲೀಲ ಮತ್ತು ಅಸಂವಿಧಾನಿಕ ಪದಗಳ ಲಕೋಟೆಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿ ಡಾ. ಪುಷ್ಪಾ ಸರ್ಕಾರ್ ಮಂಗಳವಾರ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪರಮೇಶ್ ವ್ಯಕ್ತಿತ್ವ ಹೇಗಿದೆ?
ಡಾ. ಪರಮೇಶ್ ಈ ಹಿಂದಿನಿಂದಲೂ ಆಸ್ಪತ್ರೆಯಲ್ಲಿ ಸಮಸ್ಯೆಗಳನ್ನು ತಂದೊಡುತ್ತಿರುವ ವ್ಯಕ್ತಿ. ಆತ ಕೆಲಸಕ್ಕೂ ಸರಿಯಾಗಿ ಹಾಜರಾಗುತ್ತಿರಲಿಲ್ಲ. 2010ರಲ್ಲಿ ಆತನನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಅಲ್ಲದೆ, ಅವರ ವಿರುದ್ಧ ಇಲಾಖೆ ವಿಚಾರಣೆ ನಡೆಸಲಾಗಿತ್ತು.
2014ರಲ್ಲಿ ಮಹಿಳಾ ತರಬೇತಿ ವೈದ್ಯರನ್ನು ಮೈಸೂರಿಗೆ ಪಾರ್ಟಿಯೊಂದಕ್ಕೆ ಕರೆದುಕೊಂಡ ಹೋದ ಕಾರಣಕ್ಕಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಅವರು ಬರುತ್ತಿದ್ದ ಕಾರು ಅಪಘಾತಕ್ಕೀಡಾಗಿ ಅನೇಕರು ಗಾಯಗೊಂಡಿದ್ದರು. ಅಲ್ಲದೆ, ಡರ್ಮಿಟಾಲಜಿ ವಿಭಾಗದ ಹಿಂದಿನ ಮುಖ್ಯಸ್ಥರಾದ ಡಾ. ಹರೀಶ್ ಸಹ ಇವರ ವಿರುದ್ಧ ದುರ್ನಡತೆಯ ಆರೋಪದಡಿ ದೂರು ನೀಡಿದ್ದರು.[ಮಹಿಳೆ ಮೇಲಿನ ದೌರ್ಜನ್ಯ ತಡೆಗೆ ಹೊಸ ಮೊಬೈಲ್ ಆಪ್]
ಇನ್ನು ಒಂದು ಕಾರಣ ಎಂದರೆ ಅವರ ಶೈಕ್ಷಣಿಕ ಅಸಮರ್ಥತೆ. 2006ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿದ ಅವರು ಇದುವರೆಗೂ ಸಹಪ್ರಾಧ್ಯಾಪಕ ಸ್ಥಾನಕ್ಕೆ ಬಡ್ತಿ ಪಡೆದಿಲ್ಲ. ಈ ಸಂಬಂಧ ಕೋರಿ ಸಲ್ಲಿಸಿದ್ದ ಮನವಿಯನ್ನು ಅನರ್ಹತೆ ಕಾರಣಕ್ಕೆ 'ಪಧೋನ್ನತಿ ಸಮಿತಿ' ತಿರಸ್ಕರಿಸಿತ್ತು. ಬಳಿಕ ಅವರು ಹೈಕೊರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಅವರ ಮನವಿಯನ್ನು ವಜಾ ಮಾಡಿ ನೇರ ನೇಮಕಾತಿ ಮೂಲಕ ಹುದ್ದೆಯನ್ನು ಭರ್ತಿ ಮಾಡುವಂತೆ ಸೂಚಿಸಿತ್ತು.[ಆತ್ಮರಕ್ಷಕ ಕೈಗಡಿಯಾರ, ಇನ್ಮುಂದೆ ನಿಮ್ಮ ಮಕ್ಕಳು ಸೇಫ್]
ಈ ಎಲ್ಲವೂಗಳಿಗೆ 'ನಾನೇ ಕಾರಣ ಎಂದು ಭ್ರಮಿಸಿ ಅವರು ನನ್ನ ವಿರುದ್ಧ ಮಾನಹಾನಿ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ' ಎಂದು ಪುಷ್ಪಾ ಸರ್ಕಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ತನಿಖೆಗೆ ಮುಂದಾದ ಪೊಲೀಸರು ಮಿಮ್ಸ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಕಲೆ ಹಾಕುವ ಸಾಧ್ಯತೆಯಿದೆ. ಅಗತ್ಯವಿದ್ದರೆ ವೈಜ್ಞಾನಿಕ ಪರೀಕ್ಷೆ ನಡೆಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.