ರಾಮನಗರದಲ್ಲಿ ಮಹಿಳೆಯನ್ನು ಹತ್ಯೆಗೈದಿದ್ದ ಸುಪಾರಿ ಹಂತಕರ ಬಂಧನ
ರಾಮನಗರದ ಮಹಿಳೆಯೊಬ್ಬರನ್ನು ಹತ್ಯಗೈದಿದ್ದ ಏಳು ಸುಪಾರಿ ಹಂತಕರು ಮತ್ತು ಸುಪಾರಿ ನೀಡಿದ್ದ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿಯನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.
ರಾಮನಗರ, ಏಪ್ರಿಲ್ 14: ರಿಯಲ್ ಎಸ್ಟೇಟ್ ಉದ್ಯಮಿಯಿಂದ ಹಣ ಪಡೆದು ರಾಮನಗರದ ಮಹಿಳೆಯೊಬ್ಬರನ್ನು ಹತ್ಯೆಗೈದಿದ್ದ ಸುಪಾರಿ ಹಂತಕರು ಮತ್ತು ಸುಪಾರಿ ನೀಡಿದ ಉದ್ಯಮಿಯನ್ನು ಬಂಧಿಸುವಲ್ಲಿ ರಾಮನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಬನಶಂಕರಿ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಆರ್.ಕೇಶವಮೂರ್ತಿ(68) ಬೆಂಗಳೂರು ಉಪ್ಪಾರಹಳ್ಳಿ ನಿವಾಸಿ ಬಿ.ವಿ.ಆದರ್ಶ್, ಆನೆಕಲ್ ಟೌನ್ ಮರಿಯಪ್ಪ ಲೇಔಟ್ ನ ಜಿ.ಕೆ.ಮನೋಜ್ ಕುಮಾರ್, ಬನಶಂಕರಿ 3ನೇ ಹಂತದ ನಿವಾಸಿ ಆರ್.ಕೇಶವಮೂರ್ತಿ, ಅತ್ತಿಬೆಲೆ ಹೋಬಳಿ, ಬೊಮ್ಮಸಂದ್ರ ಗ್ರಾಮದ ಪಿ.ಜಗದೀಶ್, ಆನೇಕಲ್ ಟೌನ್ ಗೋಪಿ ಲೇಔಟ್ ನ ಕೆ.ವಿನಯ್, ಜೆ.ಪಿ.ನಗರ 1ನೇ ಫೇಸ್ ನಿವಾಸಿ ಎ.ರಾಜೇಶ್, ಬಿದರಹಳ್ಳಿ ಹೋಬಳಿ ಚಿಕ್ಕಗುಚ್ಚ ಗ್ರಾಮದ ಸಿ.ಆರ್.ಮುರಳಿಧರ್ ಎಂಬ ಏಳು ಮಂದಿ ಬಂಧಿತರಾಗಿದ್ದಾರೆ.[ಒಂಟಿ ಗಂಡಸರೇ ಎಚ್ಚರ, ಇದು ಹೆಣ್ಮಕ್ಕಳ ಗ್ಯಾಂಗ್ ವಂಚನೆ ಸ್ಕೀಮು]
ರಾಮನಗರದ ಹಾರೋಹಳ್ಳಿಯ ರಂಗನಾಥ ಬಡಾವಣೆಯ ನಿವಾಸಿಯಾಗಿದ್ದ ರತ್ನಮ್ಮ(45) ಎಂಬುವವರೇ ಕೊಲೆಯಾದ ಮಹಿಳೆ. ಪತಿಯನ್ನು ತೊರೆದಿದ್ದ ಇವರಿಗೆ ರಿಯಲ್ ಎಸ್ಟೇಟ್ ಉದ್ಯಮಿ ಕೇಶವಮೂರ್ತಿ ಎಂಬುವವರೊಂದಿಗೆ 15 ವರ್ಷಗಳಿಂದ ಅನೈತಿಕ ಸಂಬಂಧವಿತ್ತು.
ಕೇಶವಮೂರ್ತಿ ಅವರ ಬಳಿ ಹಣವಿರುವುದನ್ನು ತಿಳಿದಿದ್ದ ಈಗ ಅವರಿಂದ ಪದೆ ಪದೇ ಹಣಕ್ಕೆ ಬೇಡಿಕೆ ಇಡುತ್ತಿದ್ದಳಲ್ಲದೆ, ಹಣ ನೀಡದಿದ್ದಲ್ಲಿ, ಕೇಶವ ಮೂರ್ತಿಯವರ ಮಗನ ಮದುವೆಗೂ ಬಂದು ತಮ್ಮ ಸಂಬಂಧದ ಬಗ್ಗೆ ಹೇಳಿಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ಆಕೆ ಕೇಳಿದಷ್ಟು ಹಣ ನೀಡಲು ಇಷ್ಟವಿಲ್ಲದ ಕೇಶವಮೂರ್ತಿ ಆಕೆಯನ್ನೇ ಹತ್ಯೆಗೈಯದರೆ ತಲೆಬಿಸಿಯಿಲ್ಲ ಎಂದುಕೊಂಡು ರೌಡಿ ಕವಳ ಗ್ಯಾಂಗ್ ನ ಆದರ್ಶ್ ಎಂಬುವವನನ್ನು ಸಂಪರ್ಕಿಸಿ 10 ಲಕ್ಷ ರೂ.ಗೆ ಸುಪಾರಿ ನೀಡಿದ್ದರು.
ಸುಪಾರಿ ಪಡೆದ ಆದರ್ಶ್ ಮತ್ತವರ ತಂಡ ರತ್ನಮ್ಮಳನ್ನು ಸಂಪರ್ಕಿಸಿ ನಿನಗೆ ಹಣಕೊಡಿಸುವುದಾಗಿ ಹೇಳಿ ಕಳೆದ ಮಾರ್ಚ್ 6 ರಂದು ಕಾರೊಂದರಲ್ಲಿ ಆನೇಕಲ್ಲಿಗೆ ಕರೆದೊಯ್ದು, ಕಾರಿನಲ್ಲೇ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ಶವವನ್ನು ತಮಿಳುನಾಡಿನ ತಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕೋಡಿಹಳ್ಳಿ ಗ್ರಾಮದ ಬಳಿಯ ನಿರ್ಜನ ಪ್ರದೇಶದ ನೀಲಗಿರಿ ತೋಪಿನಲ್ಲಿ ಎಸೆದು ಪರಾರಿಯಾಗಿದ್ದರು.
ಕಾಣೆಯಾದ ರತ್ನಮ್ಮಳ ಬಗ್ಗೆ ಆಕೆಯ ಸಂಬಂಧಿಕರು ಇಲ್ಲಿನ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನನ್ವಯ ಆರೋಪಿಗಳನ್ನು ಮತ್ತು ಅವರು ಕೃತ್ಯಕ್ಕೆ ಬಳಸಿದ್ದ ಒಂದು ಎಸ್ಟಾರ್ ಹಾಗೂ ಇನೋವಾ ಕಾರ್, ಹಗ್ಗ ಮೊದಲಾದವುಗಳನ್ನು ವಶಪಡಿಸಿಕೊಂಡಿದ್ದಾರೆ.