ಶಾಸಕರ ರಾಜೀನಾಮೆ ಪ್ರಹಸನ : ಸ್ಪೀಕರ್ ರಮೇಶ್ ಕುಮಾರ್ಗೆ ಪತ್ರ
ಬೆಂಗಳೂರು, ಜುಲೈ 15 : ಹಿರಿಯ ಬರಹಗಾರ ದೇವನೂರ ಮಹಾದೇವ ಮತ್ತು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಶಾಸಕರ ರಾಜೀನಾಮೆ ಮತ್ತು ಅನರ್ಹತೆ ದೂರುಗಳನ್ನು ಪರಿಶೀಲಿಸುತ್ತಿರುವ ಸ್ಪೀಕರ್ಗೆ ಪತ್ರವೊಂದನ್ನು ಬರೆದಿದ್ದಾರೆ.
ಜುಲೈ 6ರಂದು 9 ಕಾಂಗ್ರೆಸ್ ಮತ್ತು 3 ಜೆಡಿಎಸ್ ಶಾಸಕರ ರಾಜೀನಾಮೆಯಿಂದ ಆರಂಭವಾದ ಕರ್ನಾಟಕದ ರಾಜಕೀಯದ ಬೆಳವಣಿಗೆಗಳು ವಿಶ್ವಾಸಮತದ ತನಕ ಬಂದು ನಿಂತಿದೆ. ಜುಲೈ 18ರ ಗುರುವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸದನದಲ್ಲಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ.
ರಾಜ್ಯ ರಾಜಕೀಯ ; ರಾಜೀನಾಮೆಯಿಂದ ವಿಶ್ವಾಸಮತದ ತನಕ
ಶಾಸಕರು ತಮ್ಮ ಆತ್ಮವನ್ನೂ ನಮ್ಮ ಮತವನ್ನೂ ಮಾರುತ್ತಿರುವ ಹೊತ್ತಿನಲ್ಲಿ ರಾಜ್ಯದ ಹಾಗೂ ರಾಜಕಾರಣದ ಘನತೆಯನ್ನುಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸ್ಫೀಕರ್ ರಮೇಶ್ ಕುಮಾರ್ಗೆ ಬರೆದ ಪತ್ರದಲ್ಲಿ ಮನವಿ ಮಾಡಲಾಗಿದೆ.
ಶಾಸಕರ ರಾಜೀನಾಮೆ: ಸುಪ್ರೀಂಕೋರ್ಟ್ನಲ್ಲಿ ಮಂಗಳವಾರ ಏನಾಗಲಿದೆ?
ಪತ್ರದಲ್ಲಿ ಏನಿದೆ?
ಈ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಅತ್ಯಂತ ಆಘಾತಕಾರಿಯಾಗಿವೆ. ಪಕ್ಷಾಂತರಗಳು ಎಲ್ಲಿಂದ ಎಲ್ಲಿಗೆ ಆಗುತ್ತಿದ್ದರೂ ಇದಕ್ಕೆ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳೂ ಕಾರಣವೆಂದೇ ನಾವು ಭಾವಿಸುತ್ತೇವೆ.
ಎಚ್ಡಿಕೆ ವಿಶ್ವಾಸಮತ ಯಾಚನೆಗೂ ಮುನ್ನ ವಿಧಾನಸಭೆ ಸಂಖ್ಯಾಬಲವೇನು?
ದೇಶದ ಸಂಸದೀಯ ಪ್ರಜಾತಂತ್ರವು ಕೊರತೆಗಳಿಂದ ಕೂಡಿರಬಹುದು. ಆದರೆ ಸಂವಿಧಾನ ನಿರ್ಮಾತೃಗಳು ಮುಂಬರುವ ಪೀಳಿಗೆಗಳ ಮೇಲೆ ವಿಶ್ವಾಸವಿಟ್ಟು ಕೆಲವು ಅವಕಾಶಗಳನ್ನು ನೀಡಿದ್ದರು. ಅವುಗಳ ದುರುಪಯೋಗ ಮಾಡಿಕೊಂಡು ನಡೆದ ಅನೈತಿಕ ಪಕ್ಷಾಂತರಗಳನ್ನು ತಡೆಯುವ ಉದ್ದೇಶದಿಂದ ಪಕ್ಷಾಂತರ ನಿಷೇಧ ಕಾಯ್ದೆಯು 1985ರಲ್ಲಿ ಜಾರಿಗೆ ಬಂದಿತು. ನಂತರದಲ್ಲಿ 2003ರಲ್ಲಿ ಅದಕ್ಕೆ ತಿದ್ದುಪಡಿಯೂ ಬಂದಿತು.
ಆದರೆ, ಎಲ್ಲಾ ಕಾಯ್ದೆಗಳಿಂದಲೂ ನುಸುಳಿಕೊಳ್ಳುವ ರೀತಿಯಲ್ಲಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನೂ ಹೆಚ್ಚಿನ ಅಧಿಕಾರ ಪಡೆದುಕೊಂಡು ಇನ್ನೊಂದು ಪಕ್ಷದಿಂದ ಸ್ಪರ್ಧಿಸುವ ಹೊಸದೊಂದು ಪ್ರಕ್ರಿಯೆಗೆ ನಮ್ಮ ರಾಜ್ಯ ಕರ್ನಾಟಕವೇ ಮಂಲ್ಪಂಕ್ತಿ ಹಾಕಿಕೊಟ್ಟಿದ್ದು ನಾವು ತಲೆಗ್ಗಿಸುವ ವಿಚಾರವಾಗಿದೆ. ಇಂದು ಅಂತಹ ಇನ್ನೊಂದು ಸಂದರ್ಭ ನಮ್ಮ ರಾಜ್ಯದಲ್ಲಿ ಈಗ ಉಂಟಾಗಿದೆ. ಮೇಲೆ ಹೇಳಿರುವಂತೆ ಇದರ ಹೊಣೆಯನ್ನು ಮೂರು ರಾಜಕೀಯ ಪಕ್ಷಗಳು ಹೊತ್ತುಕೊಳ್ಳಬೇಕಿದೆ.
ಈಗಾಗಲೇ ಸಮಾಜದ ಮುಂದೆ ಪಾತಾಳಕ್ಕಿಳಿದಿರುವ ರಾಜಕೀಯ ವ್ಯವಸ್ಥೆಯ ಆತ್ಮವೇ ದಾಳಿಗೊಳಗಾಗುತ್ತಿದೆ. ಆದ್ದರಿಂದ, ಇದನ್ನು ಸರಿಪಡಿಸಲು ಬೇಕಾದ ಕ್ರಮಗಳನ್ನು ನೀವು ತೆಗೆದುಕೊಳ್ಳಲೇಬೇಕೆಂದು ಒತ್ತಾಯಿಸುತ್ತಿದ್ದೇವೆ. ಅಂತಹ ಜವಾಬ್ದಾರಿ ಸ್ಥಾನದಲ್ಲಿ ಕುಳಿತಿರುವ ತಾವು, ತಮ್ಮ ವ್ಯಕ್ತಿಗತ ನಿಲುವುಗಳು ಏನೇ ಇದ್ದರೂ ತಪ್ಪಾದ ಮತ್ತು ಆತುರದ ನಿರ್ಧಾರಕ್ಕೆ ಬರಬಾರದೆಂಬುದು ನಮ್ಮ ಆಗ್ರಹವಾಗಿದೆ. ಇದನ್ನೇ ನೀವು ನಮ್ಮ ದೂರು ಎಂದು ಪರಿಗಣಿಬೇಕು ಎಂದು ಕೋರುತ್ತೇವೆ.
ಅಗತ್ಯವಿದ್ದರೆ ಉನ್ನತ ನ್ಯಾಯಾಲಯಗಳಿಗೂ ಹೋಗುವ ಮೂಲಕ ಸಂವಿಧಾನವನ್ನು ಕಾಪಾಡುವ ಹೊಣೆ ಹಾಗೂ ಅಧಿಕಾರ ಹೊಂದಿರುವ ನ್ಯಾಯಾಧೀಶರಲ್ಲೂ ಮನವಿ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಅಂತಹ ಪರಿಸ್ಥಿತಿ ಬಾರದಂತೆ ಸಂವಿಧಾನಬದ್ಧ ಅಧಿಕಾರ ಹೊಂದಿರುವ ತಾವು ಪರಿಣಾಮಕಾರಿಯಾದ ಕ್ರಮ ತೆಗೆದುಕೊಳ್ಳುತ್ತೀರೆಂದು ಆಶಿಸುತ್ತೇವೆ.