ಮಗಳ ಮದುವೆಗೆ ಕೂಡಿಟ್ಟಿದ್ದ 50 ಲಕ್ಷ ಪ್ರವಾಹ ಸಂತ್ರಸ್ತರಿಗೆ ಕೊಟ್ಟ ವೈದ್ಯೆ?
ಬೆಂಗಳೂರು, ಆಗಸ್ಟ್ 12: ಮಗಳ ಮದುವೆಗೆಂದು ಕೂಡಿಟ್ಟಿದ್ದ 50 ಲಕ್ಷ ರೂಪಾಯಿ ಹಣವನ್ನು ಪ್ರವಾಹ ಸಂತ್ರಸ್ತರಿಗೆ ನೀಡಿದ್ದಾರೆ ಕರ್ನಾಟಕ ಮೂಲಕ ವೈದ್ಯೆಯೊಬ್ಬರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.
ಸುಮನಾ ರಾವ್ ಎಂಬುವರು ತಮ್ಮ ಮಗಳ ಮದುವೆಗೆಂದು ಕೂಡಿಟ್ಟಿದ್ದ 50 ಲಕ್ಷ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಈ ಬಗ್ಗೆ ಫೇಸ್ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಈ ಪೋಸ್ಟ್ ಅನ್ನು ಆ ನಂತರ ಅಳಿಸಿ ಹಾಕಿದ್ದಾರೆ.
ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?
ಕರ್ನಾಟಕ ಮೂಲದ ಸುಮನಾ ರಾವ್ ಅವರು ಮುಂಬೈನಲ್ಲಿ ನೆಲೆಸಿದ್ದು, ಅಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ನೊಂದು ತಮ್ಮಲ್ಲಿದ್ದ ಉಳಿತಾಯದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ವೈದ್ಯೆ ಸುಮನಾ ರಾವ್ ಅವರನ್ನು ಈ ಬಗ್ಗೆ ಮಾಹಿತಿ ಕೇಳಲು 'ಒನ್ ಇಂಡಿಯಾ ಕನ್ನಡ'ವು ಸಂಪರ್ಕಿಸಲು ಯತ್ನಿಸಿತು, ಆದರೆ ಅವರೊಂದಿಗೆ ಸಂಪರ್ಕ ಸಾಧ್ಯವಾಗಿಲ್ಲ.
ಮಹಾ ಪ್ರವಾಹ : 3 ಸಾವಿರ ಕೋಟಿ ತುರ್ತು ನೆರವಿಗೆ ಕೇಂದ್ರಕ್ಕೆ ಮನವಿ
ಪ್ರಸ್ತುತ ಸುಮನಾ ರಾವ್ ಅವರು ಹಾಕಿದ್ದ ಫೇಸ್ಬುಕ್ ಪೋಸ್ಟ್ನ ಸ್ಕ್ರೀನ್ ಶಾಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸುಮನಾ ರಾವ್ ಅವರ ಮಾನವೀಯತೆಯ ಬಗ್ಗೆ ಹೊಗಳಿಕೆಗಳು ಕೇಳಿ ಬರುತ್ತಿವೆ.
ಆದರೆ ಸುಮನಾ ರಾವ್ ಅವರು ದೇಣಿಗೆ ನೀಡಿದ್ದೇನೆ ಎಂಬ ಪೋಸ್ಟ್ ಹಾಕಿ ಮತ್ತೆ ಡಿಲೀಟ್ ಮಾಡಿರುವುದು ಕೆಲವರ ಅನುಮಾನಕ್ಕೆ ಕಾರಣವಾಗಿದ್ದು, ಸುಮನಾ ರಾವ್ ಅವರು ಹಣ ನೀಡಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಪ್ರಶ್ನೆಗಳೂ ಎದ್ದಿವೆ.