ಕನಕಪುರದಲ್ಲಿ ಅದ್ಧೂರಿ ವಿಜಯದಶಮಿ ದಸರ ಉತ್ಸವ
ರಾಮನಗರ, ಅಕ್ಟೋಬರ್ 14: ನಾಡಹಬ್ಬ ಮೈಸೂರು ದಸರ ಒಂದು ಬೃಹತ್ ಉತ್ಸವವಾಗಿದ್ದರೆ, ಮಿನಿ ದಸರಗಳು ಕೂಡ ಅಲ್ಲಲ್ಲಿ ನಡೆಯುತ್ತವೆ. ಅಂಥ ಮಿನಿ ದಸರಗಳಲ್ಲಿ ಒಂದಾದ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಪ್ರಖ್ಯಾತಿ ಪಡೆದಿರುವ 16 ನೇ ವರ್ಷದ ವಿಜಯದಶಮಿ ದಸರ ಉತ್ಸವವನ್ನು ಹಿಂದೂ ಜಾಗರಣ ವೇದಿಕೆ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
ತಾಲ್ಲೂಕು ಕಚೇರಿ ಹಿಂಭಾಗ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜಿಎಸ್ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಹಾಗೂ ಸ್ವತಂತ್ರ ಶಿವಯೋಗಿ ಸ್ವಾಮೀಜಿ ಉದ್ಘಾಟಿಸಿದ್ರೆ, ಪ್ರಕಾಶ್ ಮಲ್ಪೆಯವರು ವೀರಸಂದೇಶವನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲ ರಾಜುರವರು ಬರಗಾಲ ಬಡಿದೋಡಿಸುವ ನಿಟ್ಟಿನಲ್ಲಿ ಮಳೆರಾಯ ನಾಡಿಗೆ ಕರುಣೆ ತೋರಿದ್ದು ಹೀಗೆ ನಾಡಿನ ಜನ ಸಂತುಷ್ಟಿಯಿಂದ ಇರಲಿ ಎಂದು ಹಾರೈಸಿದರು.
ಕನಕಪುರದಲ್ಲಿ ನಾಡಹಬ್ಬ ದಸರವನ್ನು 2002 ರ ನಂತರ ನಿರಂತರವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. 16 ನೇ ವರ್ಷದ ಅದ್ಧೂರಿ ವಿಜಯ ದಶಮಿಯ ಆಚರಣೆಯಲ್ಲಿ ಸಾವಿರಾರು ಜನ ಕಿಕ್ಕಿರಿದು ತುಂಬಿದ್ದರು. ಅದಿಶಕ್ತಿ ಚಾಮುಂಡೇಶ್ವರಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ ನಗರದಾದ್ಯಂತ ಮೆರವಣಿಗೆ ಮಾಡಲಾಯಿತು.
ತಾಲ್ಲೂಕಿನ ಅನೇಕ ಹಳ್ಳಿಗಳ ದೇವರುಗಳ ಮೂರ್ತಿಯ ಮೆರವಣಿಗೆ, ಪೂಜಾಕುಣಿತ, ಗ್ರಾಮೀಣ ಕ್ರೀಡೆಗಳನ್ನು ಬಿಂಬಿಸುವುದು, ವೀರಗಾಸೆ, ಪಟ್ಟದ ಕುಣಿತ, ಡೊಳ್ಳು ಕುಣಿತ, ವಿವಿಧ ವೇಷಧಾರಿಗಳು, ತಮಟೆ ವಾದ್ಯ, ಹುಲಿ ವೇಷ ಸೇರಿದಂತೆ ಇನ್ನೂ ಅನೇಕ ಸಾಂಸ್ಕೃತಿಕ ಆಚರಣೆಗಳನ್ನು ಉತ್ಸವದಲ್ಲಿ ತೋರ್ಪಡಿಸಲಾಯಿತು. ಕಾರ್ಯಕ್ರಮದ ಸಾವಿರಾರು ವೀಕ್ಷಕರು ಮಿನಿ ದಸರವನ್ನು ವೀಕ್ಷಣೆ ಮಾಡಲು ಕನಕಪುರಕ್ಕೆ ಕಾಲಿಟ್ಟಿದ್ದರು.
ವೀಕ್ಷಕರಿಗಾಗಿ ಬೀದಿ ಬೀದಿಗಳಲ್ಲಿ ಅರವಂಟಿಕೆಗಳನ್ನು ನಿರ್ಮಿಸಿ ಮಜ್ಜಿಗೆ, ಪಾನಕ ಅಲ್ಲದೇ ಊಟೋಪಚಾರಗಳನ್ನು ಸಹ ಏರ್ಪಡಿಸಲಾಗಿತ್ತು. ಒಟ್ಟಾರೆ ಮೈಸೂರು ದಸರದ ಬಳಿಕ ನಡೆದ ಕನಕಪುರದ ವಿಜಯ ದಶಮಿ ಆಚರಣೆಯನ್ನ ವಿಜೃಂಬಣೆಯಿಂದ ನಡೆಸಲಾಯಿತು. ವಿಶೇಷವಾಗಿ ಉತ್ಸವದಲ್ಲಿ ಗೋ ಸಂರಕ್ಷಣೆಗಾಗಿ ನಡೆಸಿದ ಗೋವುಗಳ ಮೆರವಣಿಗೆ ಆಕರ್ಷಕವಾಗಿತ್ತು.