ರಾಮಕೃಷ್ಣ ಹೆಗಡೆ ಬದುಕಿದ್ದಿದ್ದರೆ ಇವತ್ತಿಗೆ 92 ವರ್ಷವಾಗುತ್ತಿತ್ತು!
Recommended Video
ಬೆಂಗಳೂರು, ಆಗಸ್ಟ್ 29: ರಾಮಕೃಷ್ಣ ಹೆಗಡೆಯವರು ಈ ದೇಶಕಂಡ ರಾಜಕೀಯ ಮುತ್ಸದ್ದಿಗಳಲ್ಲಿ ಒಬ್ಬರು. ಇಂದು ಅವರ 92ನೇ ಜನ್ಮದಿನ ಮೌಲ್ಯಾಧಾರಿತ ರಾಜಕಾರಣ ಮುನ್ನೆಲೆಗೆ ತಂದ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಪಂಚಾಯತ್ ರಾಜ್, ಲೋಕಾಯುಕ್ತ ಸ್ಥಾಪನೆ ದೇಶದಲ್ಲೇ ಪ್ರಥಮವೆನಿಸಿದೆ.
ವಿಧವಾ ಪಿಂಚಣಿ ರಾಜ್ಯ ಅಲ್ಪಸಂಖ್ಯಾತರ ಆಯೋಗ-ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃದ್ಧಿ ನಿಗಮಗಳ ಸ್ಥಾಪನೆ, ಪೌರಸಂಸ್ಥೆ ಗಳಲ್ಲಿ ಮಹಿಳೆಯರಿಗೆ ಶೇ.25ರ ಮೀಸಲಾತಿ ಹೀಗೆ ಅನೇಕ ಪ್ರಥಮಗಳು ಅವರ ಅಧಿಕಾರದಲ್ಲಿ ಸಂಭವಿಸಿದೆ.
ರಾಮಕೃಷ್ಣ ಹೆಗಡೆ ಅವರಿಗೇ ಮಣ್ಣು ಮುಕ್ಕಿಸಿದ್ದ ಸಿದ್ದು ನ್ಯಾಮಗೌಡ
ರಾಜ್ಯದ ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದ ಹೆಗಡೆಯವರು 13 ಬಾರಿ ಬಜೆಟ್ ಮಂಡಿಸಿದ್ದರು. ಲೋಕಾಯುಕ್ತರಿಗೆ ಸ್ವ-ಇಚ್ಛೆಯಿಂದ ಮೊಕದ್ದಮೆ ದಾಖಲಿಸುವ ಉನ್ನತ ಅಧಿಕಾರ ನೀಡಿದ್ದೂ ಅವರೇ 1926 ಆ.29ರಂದು ಜನಿಸಿದ ಅವರು 2004ರ ಜನವರಿ 12ರಂದು ನಿಧನರಾದರು.
ಹೆಗಡೆಯವರ ಜನನ, ವೃತ್ತಿ ಜೀವನ, ವಿದ್ಯಾಭ್ಯಾಸ
ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರತಾಲೂಕಿನ ದೊಡ್ಮನೆ ಗ್ರಾಮದಲ್ಲಿ 1926 ಆಗಸ್ಟ್ 29 ರಂದು , ಮಹಾಬಲೇಶ್ವರ ಹೆಗಡೆ ಹಾಗು ಸರಸ್ವತಿ ಹೆಗಡೆ ದಂಪತಿಗಳಿಗೆ ಹವ್ಯಕ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದರು. ಕೃಷಿಕ ಕುಟುಂಬದಿಂದ ಬಂದ ಇವರು ಮುಂದೆ ಇವರು ಕಾಶಿ ವಿದ್ಯಾಪೀಠ, ಬನಾರಸ್ ಹಾಗು ಲಕ್ನೋ ಯುನಿವರ್ಸಿಟಿ ಗಳಲ್ಲಿ ಓದಿ ನ್ಯಾಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಸ್ವಾತಂತ್ರ್ಯ ಚಳವಳಿಯಲ್ಲೂ ಭಾಗವಹಿಸಿದ್ದ ಇವರು 1947ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನೊ ಅನುಭವಿಸಿದ್ದರು. ತನ್ನ 20ನೇ ವಯಸಲ್ಲೇ ರೈತ ಚಳುವಳಿಯನ್ನು ರಾಜ್ಯದಲ್ಲಿ ರೂಪಿಸಿದರು. ರಾಮಕೃಷ್ಣ ಹೆಗಡೆಯವರ ಪತ್ನಿ ಶಕುಂತಲಾ ಹೆಗಡೆ. ಕನ್ನಡದ "ಮರಣ ಮೃದಂಗ" ಹಾಗೂ "ಪ್ರಜಾಶಕ್ತಿ" ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ರಾಮಕೃಷ್ಣ ಹೆಗಡೆ ಅವರು, ರಾಷ್ಟ್ರದಲ್ಲಿ ಪ್ರಬುದ್ಧ ಹಾಗೂ ವಿಚಾರವಂತ ರಾಜಕಾರಣಿಗಳ ಸ್ಥಾನದಲ್ಲಿ ಅಗ್ರಮಾನ್ಯ. ಆಕರ್ಷಕ ಮುಗುಳ್ನಗೆ, ಸರಳ ನಡವಳಿಕೆಯ, ಸಮಯ ಪ್ರಜ್ನೆಯುಳ್ಳ, ಸೂಕ್ಷ್ಮ ಸಂವೇದಿ ನಾಯಕ, ರಾಜ್ಯ ಕಂಡ ಸಮರ್ಥ ಮುಖ್ಯಮಂತ್ರಿ. ಕರ್ನಾಟಕ ರಾಜಕಾರಣದಲ್ಲಿ ಚಿರಸ್ಥಾಯಿ ಮತ್ತು ದೊಡ್ಡ ವ್ಯಕ್ತಿತ್ವ. ಅಂದು ಜಯಪ್ರಕಾಶ್ ನಾರಾಯಣರ ಕನಸಿನ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ವಿರೋಧಿ ಪಕ್ಷವನ್ನು ಸಂಘಟಿಸಿ ಜನತೆಯ ದನಿಯಾದ ಧೀಮಂತ.
ಮೋದಿಯನ್ನು ಸದೆಬಡಿಯಲು ಹೆಗಡೆ ತಂತ್ರಕ್ಕೆ ಕಾಂಗ್ರೆಸ್ ಮೊರೆ!
ರಾಮಕೃಷ್ಣ ಹೆಗಡೆ ರಾಜಕೀಯ ಪ್ರವೇಶ
ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ 1954 ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ ಇವರು 1957ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾದರು. ಇಂದಿರಾ ಗಾಂಧಿ 1975ರಲ್ಲಿ ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ಜೈಲುವಾಸವನ್ನು ಕಂಡು, ಹೊರಬಂದ ನಂತರ ಜನತಾ ಪಾರ್ಟಿಯನ್ನು ಸೇರಿದ್ದರು.
1983ರಲ್ಲಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ
1983ರಲ್ಲಿ ರಾಜ್ಯ ಭಾರತೀಯ ಜನತಾ ಪಕ್ಷದ 18 ಶಾಸಕರ ಬೆಂಬಲದೊಂದಿಗೆ ರಾಜ್ಯದ ಮುಖ್ಯಮಂತ್ರಿಯಾದ ಇವರು ದೇಶದ ಮೊದಲ ಕಾಂಗ್ರೆಸ್ಸ್ಯೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.1985ರಲ್ಲಿ ನಡೆದ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ಗಳಲ್ಲಿ ತನ್ನ ಪಕ್ಷದ ಸಾಮಾನ್ಯ ಗೆಲುವನ್ನು ಕಂಡ ರಾಮಕೃಷ್ಣ ಹೆಗಡೆ ಪಕ್ಷದ ಸೋಲಿನ ನೈತಿಕ ಜವಾಬ್ದಾರಿಯನ್ನು ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.
ರಾಜಿನಾಮೆ ನೀಡಿದ ವರ್ಷವೇ ಮತ್ತೆ ಮುಖ್ಯಮಂತ್ರಿಯಾದರು
ಆ ವರ್ಷ ನಡೆದ ವಿದಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಆರಿಸಿ ಬಂದ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಪಂಚಾಯತ್ ರಾಜ್ ಕಾನೂನಿನಲ್ಲಿ ಹೆಗಡೆಯವರ ಪಾತ್ರ,ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಕ್ಕೆ ಒದಗಿಸಿದ ರಾಮಕೃಷ್ಣ ಹೆಗಡೆಯವರ ಪಾತ್ರ, ರೈತರಿಗೆ ಸಾಲ ಮನ್ನ, ಕಡಿಮೆ ಬಡ್ಡಿ ಸಾಲ ಮುಂತಾದವು ರಾಜಕಾರಣ ಅಂದ ಕೂಡಲೇ ಜನಗಳ ನೆನಪಿಗೆ ಬರುವಂತದ್ದು.
ಸಾಮೂಹಿಕ ನಾಯಕತ್ವದ ಹರಿಕಾರ ರಾಮಕೃಷ್ಣ ಹೆಗಡೆ
ಆರಂಭದಲ್ಲಿಯೇ ಅಂದರೆ 1957ರಲ್ಲಿ ಎಸ್. ನಿಜಲಿಂಗಪ್ಪನವರ ಸಂಪುಟದಲ್ಲಿ ಯೋಜನಾ ಖಾತೆ ಉಪಸಚಿವರಾಗಿ ತಮ್ಮ ಪ್ರತಿಭೆ ಮೆರೆದರು. 1958ರಲ್ಲಿ ಕಾಂಗ್ರೆಸ್ನ ಆಂತರಿಕ ಕಾರಣದಿಂದ ಎಸ್. ನಿಜಲಿಂಗಪ್ಪ ಅಧಿಕಾರ ಕಳೆದುಕೊಂಡಾಗ ಅವರೊಂದಿಗಿದ್ದು 67ರಲ್ಲಿ ಮತ್ತೆ ಮುಖ್ಯಮಂತ್ರಿ ಗಾದಿಗೆ ನಿಜಲಿಂಗಪ್ಪನವರನ್ನು ಏರಿಸಿದರು. ಈ ಪ್ರಯತ್ನದ ಫಲವೇ ನಿಜಲಿಂಗಪ್ಪನವರ ಹಾಗೂ ವೀರಶೈವ ಸಮುದಾಯದವರ ಅಪಾರ ಪ್ರೀತಿ ಗಳಿಸಿಕೊಡಲು ಕಾರಣವಾಗಿ ಸಮುದಾಯದ ನಾಯಕರನ್ನಾಗಿ ರೂಪಿಸಿತು.