ಬಿಜೆಪಿ, ಕಾಂಗ್ರೆಸ್ 100% ಹಂಚ್ಕೊಂಡ್ರೆ ಮಿಕ್ಕವರಿಗೇನು ಇವ್ರು ಬಿಟ್ಟಿಲ್ವಾ?
Recommended Video
ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಎಡಗೈಯಿಂದ ಬಲಗೈ ಹಸ್ತಕ್ಕೆ ಹೊಡೆಯುತ್ತಾ, ಸಿದ್ದರಾಮಯ್ಯನವರದ್ದು ಟೆನ್ ಪರ್ಸೆಂಟ್ ಕಮಿಷನ್ ಸರಕಾರ ಎಂದು ಹೇಳಿಕೆ ನೀಡಿ, ಚುನಾವಣಾ ಪ್ರಚಾರದ ಗೇರನ್ನೇ ಬದಲಾಯಿಸಿ ಹೋದರು.
ರ್ಯಾಲಿಯಲ್ಲಿ ಮೋದಿ ಮಾಡಿದ ಭಾಷಣದ ಇಂಚಿಂಚೂ ಆಲಿಸಿದ ಕಾಂಗ್ರೆಸ್ ಮುಖಂಡರು, ಮೂರ್ಮೂರು ಪತ್ರಿಕಾಗೋಷ್ಠಿ ನಡೆಸಿ, ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿದ್ದರು. ಟೆನ್ ಪರ್ಸೆಂಟ್ ಅಲ್ಲಾ.. ಅದು ಇನ್ನೂ ಜಾಸ್ತಿಯೆಂದು ಮೋದಿ, ಮೈಸೂರು ಭಾಷಣದಲ್ಲಿ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಮತ್ತೆ ತುಪ್ಪಸುರಿದು ಹೋದರು.
ಪ್ರಧಾನಿ ಮೋದಿ ಮೌನಕ್ಕೆ ಟ್ವಿಟ್ಟರ್ ನಲ್ಲಿ ಗುದ್ದು ನೀಡಿದ ಸಿದ್ದು!
ಶುಕ್ರವಾರ (ಫೆ 23) ಕಾಟಾಚಾರದಂತೆ ನಡೆದ ಕರ್ನಾಟಕ ಬಜೆಟ್ ಅಧಿವೇಶನದ ಕೊನೆಯ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನರೇಂದ್ರ ಮೋದಿಯವರದ್ದು 90 ಪರ್ಸೆಂಟ್ ಕಮಿಷನ್ ಸರಕಾರ ಎಂದು ವಿಧಾನಸಭೆಯಲ್ಲಿ ಆಕ್ರೋಶದಿಂದ ಪುನರುಚ್ಚಿಸಿದರು. ಅಲ್ಲಿಗೆ, ಬಿಜೆಪಿಯದ್ದು 90% ಕಾಂಗ್ರೆಸ್ಸಿನ್ದದ್ದು 10% = 100%.
ಬಜೆಟ್ ಅಧಿವೇಶನದ ಕೊನೆಯ ದಿನವಾದರೂ ಜನಮೆಚ್ಚುವ ಚರ್ಚೆ ನಡೆಯದೆ, ಬಿಜೆಪಿ ಮತ್ತು ಕಾಂಗ್ರೆಸ್ಸಿಗರು ಬರೀ ಕಮಿಷನ್ ಬಗ್ಗೆ ಮಾತನಾಡುತ್ತಿದ್ದದ್ದು, ರಾಜಕಾರಣಿಗಳ ಹಣೆಬರಹವೇ ಇಷ್ಟು ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುವಂತೆ ಈ ನಾಯಕರು ಮಾಡಿದ್ದಾರೆ.
ಮೋದಿ, ಅಮಿತ್ ಶಾಗೆ ಸಿದ್ದರಾಮಯ್ಯ 5 ಪ್ರಶ್ನೆಗಳು!
ಶುಕ್ರವಾರ, ಬಿಜೆಪಿ ಮತ್ತು ಮೋದಿಯವರ ವಿರುದ್ದ ಅಕ್ಷರಸ: ಹರಿಹಾಯ್ದ ಸಿದ್ದರಾಮಯ್ಯ, ಬಿಜೆಪಿಯವರು ಸುಳ್ಳರು, ಗೂಂಡಾಗಳು, ಮಾನಗೆಟ್ಟವರು ಎಂದು... ಸಾಧ್ಯವಾದ ಪದಗಳನ್ನೆಲ್ಲಾ ಬಳಸಿ ಬಿಜೆಪಿ ವಿರುದ್ದ ಕಿಡಿಕಾರಿದರು. ಸಿಎಂ ಬಳಸಿದ ಪದಗಳಿಗೆ ಸಿಟ್ಟಾದ ಬಿಜೆಪಿಯವರು, ಬಜೆಟ್ ಪ್ರತಿಯನ್ನು ಚೂರುಚೂರು ಮಾಡಿ ಸಿಎಂ ಮುಂದೆ ಬಿಸಾಕಿದರು.
ರಂಪ ರಾಮಾಯಣವಾಗಲು ಸಿಎಂ ಹೇಳಿಕೆಯೇ ಕಾರಣ
ಬಜೆಟ್ ಅಧಿವೇಶನದ ಕೊನೆಯ ದಿನ ರಂಪ ರಾಮಾಯಣವಾಗಲು ಸಿಎಂ ಹೇಳಿಕೆಯೇ ಕಾರಣ. ಅಸೆಂಬ್ಲಿಯಲ್ಲಿ ಮಾತನಾಡುತ್ತಾ ಸಿಎಂ, 'ಮೊನ್ನೆ ಮೈಸೂರಿಗೆ ಪ್ರಧಾನಿ ಮೋದಿ ಬಂದಿದ್ದಾಗ, ಶಿಷ್ಟಾಚಾರದಂತೆ ಅವರನ್ನು ಸ್ವಾಗತಿಸಲು ಮೈಸೂರು ವಿಮಾನನಿಲ್ದಾಣಕ್ಕೆ ಹೋಗಿದ್ದೆ. ಅವರಿಗೆ ಅಲ್ಲೇ ನಾನು ಹೇಳಿದೆ, ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುವುದು' ಎನ್ನುವ ಸಿದ್ದರಾಮಯ್ಯನವರ ಹೇಳಿಕೆ ಬಿಜೆಪಿಯವರನ್ನು ಕೆರಳಿಸಿತು.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ
ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಹೇಗೆ ಮುಳುಗಿದೆ ಎಂದರೆ, ಕುಕ್ಕರ್, ಸೀರೆ ಹಂಚುತ್ತಿರುವವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಚುನಾವಣೆಗೆ ಇನ್ನೂ ಅಧಿಸೂಚನೆಯೇ ಹೊರಡಿಸಲಿಲ್ಲ, ಆಗಲೇ ನಿಮ್ಮದು ಈ ರೀತಿಯ ಭ್ರಷ್ಟಾಚಾರ. ನೀವು ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದೀರಲ್ಲಾ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಿಎಂಗೆ ತಿರುಗೇಟು ನೀಡಿದರು.
ಮೋದಿಯವರದ್ದು 90% ಕಮಿಷನ್ ಸರಕಾರ
ನಮ್ಮದು ಟೆನ್ ಪರ್ಸೆಂಟ್ ಕಮಿಷನ್ ಸರಕಾರ ಎಂದು ಪ್ರಧಾನಿಯವರು ಹೇಳುತ್ತಾರೆ. ಮೋದಿಯವರದ್ದು 90% ಕಮಿಷನ್ ಸರಕಾರ. ಮೋದಿಯವರು ಭ್ರಷ್ಟಾಚಾರದ ಮಹಾಪೋಷಕರು. ಅವರಿಗೆ ಕರಪ್ಸನ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ನೀವೆಲ್ಲಾ ಮಹಾನ್ ಸುಳ್ಳುಗಾರರು - ಸಿದ್ದರಾಮಯ್ಯ.
ಕೇಂದ್ರದಲ್ಲಿ ಲೋಕಪಾಲ್ ನೇಮಕ ಮಾಡಿಲ್ಲ
ಗುಜರಾತ್ ನಲ್ಲಿ ತಮ್ಮ ಅಧಿಕಾರದ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಮೋದಿ ನೇಮಿಸಿಲ್ಲ, ಕೇಂದ್ರದಲ್ಲಿ ಲೋಕಪಾಲ್ ನೇಮಕ ಮಾಡಿಲ್ಲ. ಮೊದಲು ಅದನ್ನು ಮಾಡಿ, ಆಮೇಲೆ ನನ್ನ ಮೇಲೆ ಗೂಬೆಕೂರಿಸಿ. ಬಿಜೆಪಿಯವರು ಭ್ರಷ್ಟಾಚಾರದ ಗಂಗೋತ್ರಿ. ಇದು ಕೊನೆಯ ಅಧಿವೇಶನ, ಇಲ್ಲದಿದ್ದರೆ ನಿಮ್ಮನ್ನು ಸದನದಿಂದ ಹೊರಗೆ ಹಾಕುತ್ತಿದ್ದೆ - ಸಿದ್ದರಾಮಯ್ಯ.
ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಿಜೆಪಿಯವರ ಪ್ರತಿಭಟನೆ
ನಿಮ್ಮ ನಾಯಕರು ಬರುತ್ತಿದ್ದಾರೆಂದು ಬಜೆಟ್ ಅಧಿವೇಶನವನ್ನು ಮೊಟಕುಗೊಳಿಸಿದ್ದೀರಿ, ಮೇಲ್ಮನೆ ಸದಸ್ಯರ ಹಕ್ಕಿಗೆ ಚ್ಯುತಿ ಬರುವ ಹಾಗೇ ನಿಮ್ಮ ಸರಕಾರ ನಡೆದುಕೊಂಡಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿದ್ದರೂ, ಗದ್ದಲದ ನಡುವೆ ಬಜೆಟ್ ಆಂಗೀಕಾರಿಸಲಾಯಿತು.