ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ ಬಹುತೇಕ ಅಂತಿಮ
ಬೆಂಗಳೂರು, ಜುಲೈ09: ಹಾವೇರಿಯಲ್ಲಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಪರಿಷತ್ತು ನವೆಂಬರ್ 11, 12, 13ಕ್ಕೆ ನಡೆಯುವುದು ಬಹುತೇಕ ಖಚಿತವಾಗಿದೆ. ಸರ್ಕಾರ ಅಧಿಕೃತವಾಗಿ ಪ್ರಕಟಣೆಯಷ್ಟೇ ಬಾಕಿಯಿದೆ.
ಮಹಾಲಯ ಅಮಾವಾಸ್ಯೆ, ಪಿತೃಪಕ್ಷದ ನೆಪವನ್ನು ಹೇಳಿ ಹಾವೇರಿಯಯಲ್ಲಿ ನಡೆಯಲಿರುವ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡುವಂತೆ ಕನ್ನಡಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್ ಜೋಶಿಯವರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಪತ್ರವನ್ನು ಬರೆದಿದ್ದರು. ಇದರಿಂದ ಸಾಹಿತ್ಯ ಸಮ್ಮೇಳನ ನವೆಂಬರ್ನಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ.
ನವೆಂಬರ್ ತಿಂಗಳು ಸಾಹಿತ್ಯ ಸಮ್ಮೇಳವನ್ನು ನಡೆಸಲು ಸೂಕ್ತ ಮಯವಾಗಿದೆ. ನವೆಂಬರ್ನಲ್ಲಿ ಮಳೆಯ ಪ್ರಮಾಣ ಇರುವುದಿಲ್ಲ. ನವೆಂಬರ್ 11 ಕನಕ ಜಯಂತಿ ಇರುವುದರಿಂದಾಗಿ ಸರ್ಕಾರಿ ರಜೆಯಿದೆ. ನವೆಂಬರ್ 12ರಂದು ಎರಡನೇ ಶನಿವಾರವಾಗಿದ್ದರಿಂದ ಸರ್ಕಾರಿ ರಜೆಯಿದೆ. ಇನ್ನು ನವೆಂಬರ್ 13 ರಂದು ಭಾನುವಾರ ಇರುವುದರಿಂದ ಜನತೆ ಸಮ್ಮೇಳನಕ್ಕೆ ಬರಲು ಭಾರಿ ಅನುಕೂಲಾಗುತ್ತದೆ ಎಂದು ಈ ಮೂರು ದಿವನನ್ನೇ ಅಂತಿಮಗೊಳಿಸಲಾಗಿದೆ ಎಂಬದು ತಿಳಿದು ಬಂದಿದೆ.
ನವೆಂಬರ್ನಲ್ಲಿ ಸಮ್ಮೇಳನಕ್ಕೆ ಕಾರಣಗಳೇನು
ಕನ್ನಡ ಸಾಹಿತ್ಯ ಪರಿಷತ್ತು ಸ್ವಾಮೀಜಿಗಳ, ಸಾಹಿತಿಗಳ, ವಿದ್ವಾಂಸರ, ಮಾಧ್ಯಮ ಮಿತ್ರರ ಹಾಗೂ ಸಾರ್ವಜನಿಕರ ಅಪೇಕ್ಷೆಗಳನ್ನು ಹಾಗೂ ಮನವಿಗಳನ್ನು ಗೌರವಿಸುವ ಹಿನ್ನೆಲೆಯಲ್ಲಿ ಹಾಗೂ ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿ ಸಮನ್ವಯ ತರುವಲ್ಲಿ ವಿಶಿಷ್ಟ ಪಾತ್ರವಹಿಸಿದ, ಹಾವೇರಿ ಜಿಲ್ಲೆಯ ಹೆಮ್ಮೆಯ ದಾಸಶ್ರೇಷ್ಠರಾದ ಶ್ರೀ ಕನಕದಾಸರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಸೂಕ್ತ ಗೌರವ ಸಲ್ಲಿಸಲು, ಕನಕ ಜಯಂತಿ ದಿನವಾದ ನವೆಂಬರ್ 11ರಂದು ಸರ್ಕಾರಿ ರಜೆ ಇದ್ದು, ಮರುದಿನಗಳಾದ 12ರಂದು ಎರಡನೆಯ ಶನಿವಾರ ಮತ್ತು 13ರಂದು ಭಾನುವಾರವಾದ್ದರಿಂದ ನಾಡಿನಾದ್ಯಂತ ಭಾಗವಹಿಸುವವರಿಗೆ ಅನುಕೂಲವಾಗುವ ಉದ್ದೇಶದಿಂದ, ಮೊದಲು ನಿರ್ಧರಿಸಿರುವ ದಿನಾಂಕಗಳಿಂದ ಸಮ್ಮೇಳನವನ್ನು ಮುಂದೂಡಿ, 2022ರ ನವೆಂಬರ್ 11, 12 ಹಾಗೂ 13 ರಂದು ಜರುಗಿಸಬೇಕೆಂಬ ಮನವಿಯನ್ನು ಪರಿಗಣಿಸಬೇಕೆಂದು ಹಾಗೂ ನವೆಂಬರ್ ಕನ್ನಡ ರಾಜ್ಯೋತ್ಸವ ತಿಂಗಳಾದುದರಿಂದ ಹಾವೇರಿ ಸಮ್ಮೇಳನವನ್ನು ನವೆಂಬರ್ನಲ್ಲಿ ನಡೆಸುವುದು ಸಂಭ್ರಮಕ್ಕೆ ಇಂಬು ಕೊಡುತ್ತದೆ ಎನ್ನುವ ದೃಷ್ಟಿಯಲ್ಲಿ ಸಮ್ಮೇಳನವನ್ನು ಮುಂದೂಡಿ, ಕೋವಿಡ್-19ರ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನೆರವೇರದ ಈ ಅಕ್ಷರಜಾತ್ರೆಯನ್ನು ಇನ್ಯಾವುದೇ ಕಾರಣಕ್ಕೂ ಮುಂದೂಡದೇ / ಹಿಂದೂಡದೇ 11, 12 ಹಾಗೂ 13 ನವೆಂಬರ್ 2022 ರಂದು ನಡೆಸಲು ಅಂತಿಮವಾಗಿ ದಿನಾಂಕವನ್ನು ನಿಗದಿಮಾಡಲಾಗಿದೆ.
ಗಣ್ಯರ ಮನವಿಗೆ ಸ್ಪಂದನೆ ನವೆಂಬರ್ನಲ್ಲಿ ಸಮ್ಮೇಳನ
ಹಾವೇರಿಯಲ್ಲಿ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗಿಸುವ ಕುರಿತಂತೆ, ಸಮ್ಮೇಳನದ ದಿನಾಂಕಗಳನ್ನು ನಿಗದಿಪಡಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಏಪ್ರಿಲ್ 23ರಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಚರ್ಚಿಸಿ, 2022ರ ಸೆಪ್ಟೆಂಬರ್ 23, 24 ಹಾಗೂ 25 ರಂದು ಮೂರು ದಿನಗಳ ಕಾಲ ನಡೆಸಲು ಒಮ್ಮತದಿಂದ ನಿರ್ಧರಿಸಲಾಗಿತ್ತು. ಈ ದಿನಾಂಕಗಳನ್ನು ಮುಂದೂಡುವಂತೆ ಅನೇಕ ಗಣ್ಯರು, ಸಾಹಿತಿಗಳು, ಸ್ವಾಮೀಜಿಗಳು ಸೇರಿದಂತೆ ಸಾವಿರಾರು ಸಾರ್ವಜನಿಕರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ ಜೋಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರಿಂದ, ಸಮ್ಮೇಳನದ ದಿನಾಂಕಗಳನ್ನು ಮುಂದೂಡುವಂತೆ ಅಧ್ಯಕ್ಷರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಗಣ್ಯರ ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿಗಳು ನವೆಂಬರ್ 11,12.13ಕ್ಕೆ ಸಮ್ಮೇಳನ ನಡೆಸುವುದಕ್ಕೆ ಅಸ್ತು ಎಂದಿದ್ದಾರೆ.
ಮಹಾಲಯ ಅಮಾವಾಸ್ಯೆ, ಪಿತೃಪಕ್ಷ ನೆಪ
ಸಿರಿಗೆರೆಯ ಶ್ರೀ ತರಳುಬಾಳು ಜಗದ್ಗುರು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಪರಿಷತ್ತಿನ ಅಧ್ಯಕ್ಷರಿಗೆ ವೈಯಕ್ತಿಕವಾಗಿ ದೂರವಾಣಿ ಮಾಡಿ ಹಾಗೂ ಪತ್ರ ಕಳಿಸಿ, ಬೃಹನ್ಮಠದ 20ನೆಯ ಜಗದ್ಗುರುಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಶ್ರದ್ಧಾಂಜಲಿ ಸಮಾರಂಭವು ಪ್ರತಿವರ್ಷದಂತೆ ಈ ಬಾರಿಯೂ 2022ರ ಸೆಪ್ಟೆಂಬರ್ 23, 24 ರಂದು ನಡೆಯುವುದರಿಂದ ಹಾವೇರಿ, ರಾಣೆಬೆನ್ನೂರು, ರಟ್ಟಿಹಳ್ಳಿ, ಹಿರೇಕೆರೂರು ಹಾಗೂ ಇತರೆ ಭಾಗಗಳಿಂದ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಅನಾನುಕೂಲವಾಗುವುದರಿಂದ ಸಮ್ಮೇಳನದ ನಿಗದಿತ ದಿನಾಂಕಗಳನ್ನು ಮುಂದೂಡಬೇಕೆಂದು ಕೋರಿರುದ್ದರು. ಸೆಪ್ಟೆಂಬರ್ 25ರಂದು ಮಹಾಲಯ ಅಮಾವಾಸ್ಯೆ ಇರುವುದರಿಂದ ಪಿತೃಪಕ್ಷದಲ್ಲಿ ಸಮ್ಮೇಳನವನ್ನು ನಡೆಸುವುದು ಸೂಕ್ತವಲ್ಲವಾದ್ದರಿಂದ, ನಾಡಿನಾದ್ಯಂತದಿಂದ ಭಾಗವಹಿಸುವ ಕನ್ನಡಿಗರಿಗೆ ಅನಾನುಕೂಲವಾಗುವ ದೃಷ್ಟಿಯಿಂದ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆಯು ನಿಂತಿರುವುದಿಲ್ಲ ಎಂಬ ಕಾರಣಗಳು ನವೆಂಬರ್ನಲ್ಲಿ ಸಮ್ಮೇಳನ ನಿಗದಿಗೆ ಕಾರಣವಾಗಿದೆ.
ಕಸಾಪ ಅಧ್ಯಕ್ಷರಿಗೂ ಹಾವೇರಿ ವಿಶಿಷ್ಠ
ಹಾವೇರಿ ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಈ ಸಾಹಿತ್ಯ ಸಮ್ಮೇಳನ ಬಹಳ ವಿಶಿಷ್ಟವಾದದ್ದು ಆಗಿದೆ. ಇನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಮಹೇಶ್ ಜೋಶಿಯವರ ತವರು ಜಿಲ್ಲೆಯೂ ಹಾವೇರಿಯಾಗಿದೆ. ಇದೇ ಕಾರಣಕ್ಕೆ ಈ ಇಬ್ಬರಿಗೂ ಸಾಹಿತ್ಯ ಸಮ್ಮೇಳನ ಬಹಳ ವಿಶಿಷ್ಠವಾದದ್ದಾಗಿದೆ. ಇದರ ಜೊತೆಗೆ ಹಾವೇರಿ ಜಿಲ್ಲೆಯ ಬಾಡ ಗ್ರಾಮ ಕನಕದಾಸರ ಜನ್ಮ ಸ್ಥಳವಾಗಿದೆ. ನವೆಂಬರ್ 11 ರಂದು ಕನಕಜಯಂತಿಯೂ ಆಗಿರುವುದು ವಿಶೇಷತೆ ಮತ್ತಷ್ಟು ಮೆರಗು ಗೌರವವನ್ನು ನೀಡುವ ಅಂಶವಾಗಿದ್ದೂ ಹಾವೇರಿ ಸಮ್ಮೇಳನಕ್ಕೆ ನವೆಂಬರ್ 11,12,13 ಕನ್ನಡ ಸಾಹಿತ್ಯ ಸಮ್ಮೇಳನ ಬಹುತೇಕ ಖಚಿತವಾಗಿದೆ.