ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 83ನೇ ಕನ್ನಡ ಸಾಹಿತ್ಯ ಸಮ್ಮೇಳನ!
83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನಡೆಯಲಿದೆ. ರಾಯಚೂರಿನ 82ನೇ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಬೆಂಗಳೂರು, ಡಿಸೆಂಬರ್. 04 : ಭತ್ತದ ಕಣಜ ರಾಯಚೂರಿನಲ್ಲಿ ನಡೆಯುತ್ತಿರುವ 83ನೇ ಮೂರು ದಿನಗಳ ಅಕ್ಷರ ಜಾತ್ರೆಗೆ ಭಾನವಾರ ತೆರೆ ಬೀಳಲಿದೆ. 83ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಸಲು ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ.
ಕಸಾಪ ಅಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪರಿಷತ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಮುಂದಿನ 83ನೇ ಸಮ್ಮೇಳನವನ್ನು ತಮ್ಮ ಜಿಲ್ಲೆಯಲ್ಲಿ ನಡೆಸಬೇಕೆಂದು ಮೈಸೂರು, ಧಾರವಾಡ, ಚಿಕ್ಕಮಗಳೂರು, ಉತ್ತರ ಕನ್ನಡ, ಚಿಕ್ಕಬಳ್ಳಾಪುರ ಜಿಲ್ಲೆಯ ನಡೆಸಬೇಕೆಂದು ಆಯಾ ಜಿಲ್ಲಾ ಕಸಾಪ ಅಧ್ಯಕ್ಷರು ಪಟ್ಟು ಹಿಡಿದಿದ್ದರು.
ಇದರಿಂದ ಮತದಾನದ ವಿಷಯ ಪ್ರಸ್ತಾಪವಾಯಿತು. ಆದರೆ, ಮತದಾನಕ್ಕೆ ವಿರೋಧಿಸಿದರು. ಇನ್ನು ಧಾರವಾಡದಲ್ಲಿಯೇ ಮುಂದಿನ ಸಮ್ಮೇಳನ ನಡೆಸಬೇಕು ಎಂದು ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಪಟ್ಟುಹಿಡಿದಿದ್ದರು.
ನಂತರ ಮತದಾನ ಕೈಬಿಟ್ಟು ಕಾರ್ಯಕಾರಿ ಸಮಿತಿ ಸದಸ್ಯರ ವೈಯಕ್ತಿಕ ಅಭಿಪ್ರಾಯ ಕೇಳಲಾಯಿತು.
ಅಭಿಪ್ರಾಯ ಸಮಯದಲ್ಲಿ ಹಲವು ಜಿಲ್ಲೆಗಳ ಹೆಸರು ಪ್ರಸ್ತಾಪಕ್ಕೆ ಬಂದವು. ಮುಕ್ತವಾಗಿ ಚರ್ಚಿಸಲಾಯಿತು. ಅಂತಿಮವಾಗಿ ಮೈಸೂರಿನಲ್ಲಿ ಮುಂದಿನ ಸಮ್ಮೇಳನ ನಡೆಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು' ಎಂದು ಮನು ಬಳಿಗಾರ್ ತಿಳಿಸಿದರು.