ರಾಯಚೂರಿನಲ್ಲಿ ಕನ್ನಡ ಹಬ್ಬ ಸಹೃದಯರಿಗೇನೇನಿದೆ?
ರಾಯಚೂರು ಡಿಸೆಂಬರ್ 2: ರಾಯಚೂನಲ್ಲಿ ಮೂರನೇ ಬಾರಿಗೆ ಕನ್ನಡ ನುಡಿಹಬ್ಬ ಆಚರಣೆಗೆ ಎಲ್ಲ ರೀತಿಯಲ್ಲೂ ಸಜ್ಜುಗೊಂಡಿದ್ದು, ಶುಕ್ರವಾರ ಬೆಳಗ್ಗೆಯಿಂದ ಎಲ್ಲ ಕಾರ್ಯಗಳು ಪ್ರಾರಂಭವಾಗಲಿದೆ.
ಡಿ.2 ಪ್ರಾರಂಭವಾಗಲಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಕೃಷಿ ವಿಶ್ವವಿದ್ಯಾಲಯದ ಆವರಣ ನವವಧುವಿನಂತೆ ಸಿಂಗಾರಗೊಂಡಿದೆ.[ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಕನ್ನಡ ಹಬ್ಬ ಆರಂಭ]
ಸಮ್ಮೇಳನದ ಸರ್ವಾಧ್ಯಕ್ಷ ಡಾ. ಬರಗೂರು ರಾಮಚಂದ್ರಪ್ಪ ಅವರನ್ನು ಕರ್ನಾಟಕ ಸಂಘದಿಂದ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆಯಲ್ಲಿ ಕರೆತರಲು 30 ಕಲಾತಂಡಗಳಿಂದ 300 ಕಲಾವಿದರು, ಕಳಸ ಹೊತ್ತ 82 ಮಹಿಳೆಯರು, ಭುವನೇಶ್ವರಿಯು ತೇರು, 3,500 ಅಡಿ ಉದ್ದ ಕನ್ನಡ ಬಾವುಟಗಳನ್ನು ಹಿಡಿದು ಐದು ಸಾವಿರಕ್ಕೂ ಹೆಚ್ಚು ಜನರು ಸಜ್ಜಾಗಿದ್ದಾರೆ.
ಸಮ್ಮೇಳನಕ್ಕಾಗಿ 20 ಸಾವಿರ ಚದರಡಿಯ ಪಂಡಿತ ತಾರಾನಾಥರ ಹೆಸರಿನ ಮಹಾಮಂಟಪ, 30 ಸಾವಿರದಷ್ಟು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಪ್ರಧಾನ ವೇದಿಕೆಯು 89X40 ಅಡಿ ಉದ್ದಗಲ ಮತ್ತು ಐದು ಅಡಿ ಎತ್ತರವಿದ್ದು, 100 ಜನರು ಕುಳಿತುಕೊಳ್ಳಬಹುದು. ಈ ವೇದಿಕೆಗೆ ರಾಯಚೂರು ತಾಲ್ಲೂಕಿನ ಹೆಂಬೆರಾಳಿನ ಮೇರು ಸಾಹಿತಿ ಶಾಂತರಸರ ಹೆಸರಿಡಲಾಗಿದೆ.
ಪ್ರಧಾನ ವೇದಿಕೆಯ ಪಕ್ಕದಲ್ಲಿ ಸುಮಾರು 200 ಪುಸ್ತಕ ಮಳಿಗೆ, 80 ಕಲಾಕೃತಿಗಳ ಪ್ರದರ್ಶನ ಮಳಿಗೆ ಮತ್ತು ವಾಣಿಜ್ಯ ಮಳಿಗೆ ಸೇರಿದಂತೆ 520 ಮಳಿಗೆಗಳು ಸಿದ್ಧವಾಗಿವೆ.
ನೂರು ಕೌಂಟರ್ಗಳನ್ನು ಒಳಗೊಂಡ ಭೋಜನಶಾಲೆಯಿದ್ದು ಈ ಭಾಗದ ವಿಶೇಷ ಖಾದ್ಯ ಖಡಕ್ ರೊಟ್ಟಿ, ಎಣ್ಣೆಗಾಯಿ ಪಲ್ಯ, ಶೇಂಗಾ, ಗುರೆಳ್ಳು ಚಟ್ನಿ, ಮಾದ್ಲಿ ಸಿಹಿ ಖಾದ್ಯವನ್ನು ಒಳಗೊಂಡ ಸವಿ ರುಚಿಯ ಭೋಜನವನ್ನು ಬಡಿಸಲು 300 ಬಾಣಸಿಗರು ಇದ್ದಾರೆ. ಪ್ರತಿದಿನ ಅಂದಾಜು ಒಂದು ಲಕ್ಷ ಜನರಿಗೆ ಭೋಜನದ ವ್ಯವಸ್ಥೆ ಮಾಡಲಾಗಿದೆ. ನೆರವಿಗೆ ಮೂರು ಸಾವಿರ ಜನರ ಸ್ವಯಂ ಸೇವಕರ ಪಡೆಯೂ ಇದೆ.
ಪ್ರಧಾನ, ಸಮಾನಾಂತರ ವೇದಿಕೆ ಮತ್ತು ರಂಗಮಂದಿರಗಳಲ್ಲಿ ಒಟ್ಟಾರೆ 175 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 1,100 ಕಲಾವಿದರು ಭಾಗಿಯಾಗಲಿದ್ದಾರೆ.
ಸಮ್ಮೇಳನಕ್ಕೆ ಬರುವ 4,500 ನೋಂದಾಯಿತ ಪ್ರತಿನಿಧಿಗಳು, ಗಣ್ಯರಿಗೆ ಸೇರಿದಂತೆ 8 ಸಾವಿರ ಜನರಿಗೆ ಕೃಷಿ ವಿ.ವಿ. ಅತಿಥಿ ಗೃಹ ಹಾಗೂ ಹಾಸ್ಟೆಲ್ ಗಳು, ನಗರದ 30ಕ್ಕೂ ಹೆಚ್ಚು ಹೋಟೆಲ್ಗಳು, ಶಾಲಾ- ಕಾಲೇಜು, ಹಾಸ್ಟೆಲ್ ಗಳು ಸೇರಿದಂತೆ 60ಕ್ಕೂ ಹೆಚ್ಚು ಕಡೆ ವಸತಿ ವ್ಯವಸ್ಥೆ ಮಾಡಲಾಗಿದೆ.