Breaking; 80ನೇ ಹುಟ್ಟು ಹಬ್ಬ, ಕಾರ್ಯಕರ್ತರಿಗೆ ಖರ್ಗೆ ಮನವಿ ಏನು?
ಬೆಂಗಳೂರು, ಜುಲೈ 19: ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ 80ನೇ ಹುಟ್ಟುಹಬ್ಬ ಹಾಗೂ ರಾಜಕೀಯ ಸೇವೆಯ ಸುವರ್ಣ ಮಹೋತ್ಸವವನ್ನು ಆಚರಣೆ ಮಾಡಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ತಮ್ಮ ಕಾರ್ಯಕರ್ತರು, ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ರಾಜ್ಯಸಭೆ ಅಧಿವೇಶನ ನಡೆಯಲಿದೆ ಮತ್ತು ಸೋನಿಯಾ ಗಾಂಧಿಯನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಆದ್ದರಿಂದ ತಮ್ಮ 80ನೇ ಹುಟ್ಟು ಹಬ್ಬದ ದಿನವಾದ ಜುಲೈ 21ರಂದು ಬೆಂಗಳೂರು ಅಥವಾ ಕಲಬುರಗಿಯಲ್ಲಿ ಇದ್ದು, ಕಾರ್ಯಕರ್ತರನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ಖರ್ಗೆ ತಿಳಿಸಿದ್ದಾರೆ.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, "ನಿಮಗೆ ತಿಳಿದಿರುವಂತೆ, ಇದೇ ಜುಲೈ 21ಕ್ಕೆ ನನಗೆ 80 ವರ್ಷ ಪೂರ್ಣಗೊಳ್ಳಲಿದೆ. ನಾಡಿನ ಸರ್ವ ವರ್ಗಗಳ ಪ್ರೀತಿ ಹಾಗೂ ಸಹಕಾರದಿಂದ ರಾಜಕೀಯ ಸೇವೆಯಲ್ಲಿ 50 ವರ್ಷಗಳೂ ಪೂರ್ಣಗೊಂಡಿದೆ. ಈ ಅಪಾರ ಪ್ರಮಾಣದ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಸದಾ ನಿಮಗೆ ಚಿರಋಣಿಯಾಗಿರಲಿದ್ದೇನೆ" ಎಂದಿದ್ದಾರೆ.
"ನಿಮ್ಮೆಲ್ಲರ ಆಶೀರ್ವಾದದ ಫಲವಾಗಿ ರಾಜ್ಯ ಸಭೆಯ ವಿರೋಧಪಕ್ಷದ ನಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಜುಲೈ 21ರಂದು ಸದನವು ಚಾಲ್ತಿಯಲ್ಲಿ ಇರುವುದರಿಂದ ಹಾಗೂ ಜುಲೈ 21ರಂದು ಶ್ರೀಮತಿ ಸೋನಿಯಾಗಾಂಧಿ ಅವರನ್ನು ಇಡಿ ವಿಚಾರಣೆ ಹೆಸರಲ್ಲಿ ಕೇಂದ್ರ ಸರ್ಕಾರ ಅಗ್ನಿಪರೀಕ್ಷೆಗೆ ಒಳಪಡಿಸಿದೆ, ಇಂತಹ ಕಠಿಣ ಸಂದರ್ಭದಲ್ಲಿ ಅವರೊಂದಿಗೆ ಅವರ ಜೊತೆಯಾಗಿ ನಿಲ್ಲುವುದು ಕೂಡ ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಅಂದು ನಾನು ಬೆಂಗಳೂರು ಅಥವಾ ಕಲಬುರಗಿಯಲ್ಲಿ ಭೇಟಿಗೆ ಲಭ್ಯವಿರುವುದಿಲ್ಲ. ಮುಂದಿನ ದಿನಗಳಲ್ಲಿ ಸದನ ಮುಗಿದ ನಂತರ ನಿಮ್ಮೆಲ್ಲರನ್ನು ಭೇಟಿ ಆಗಲಿದ್ದೇನೆ" ಎಂದು ಖರ್ಗೆ ಸ್ಪಷ್ಟಪಡಿದ್ದಾರೆ.
"ನನ್ನ ಜೀವನದ ಪ್ರತಿ ಹೆಜ್ಜೆಯಲ್ಲಿಯೂ ನೀವೆಲ್ಲರೂ ಜೊತೆಗಾರರಾಗಿ ನನಗೆ ಶಕ್ತಿ ತುಂಬಿದ್ದೀರಿ, ನಾನು ಇಂದು ಯಾವುದೇ ಸ್ಥಾನದಲ್ಲಿದ್ದರೂ ಅದು ನಿಮ್ಮ ನಂಬಿಕೆ, ಪ್ರೀತಿ ಹಾಗೂ ಆಶೀರ್ವಾದದ ಫಲ. ನೀವೆಲ್ಲರೂ ನನ್ನ ಹುಟ್ಟುಹಬ್ಬ ಆಚರಿಸುವ ಬದಲಾಗಿ ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ಹಾಗೂ ಸಂವಿಧಾನದ ಆಶಯಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ನಿರ್ವಹಿಸಬೇಕೆಂದು ಕೇಳಿಕೊಳ್ಳಲು ಇಚ್ಛಿಸುತ್ತೇನೆ" ಎಂದು ಮನವಿ ಮಾಡಿದ್ದಾರೆ.