ಕೋಟೇಶ್ವರ ಸೂರ್ಯನಾರಾಯಣರಾವ್ಗೆ 80ರ ಸಂಭ್ರಮ
ಬೆಂಗಳೂರು, ಜನವರಿ 20 : ಹಿರಿಯ ಸಾಹಿತಿ ಕೋಟೇಶ್ವರ ಸೂರ್ಯನಾರಾಯಣರಾವ್ ಅವರಿಗೆ ಇದೀಗ 80ರ ಸಂಭ್ರಮ. ಯುವಕರನ್ನೂ ನಿಬ್ಬೆರಗುಗೊಳಿಸುವಂತಹ ಕ್ರಿಯಾಶೀಲರಾಗಿರುವ ಕೋಟೇಶ್ವರರು ರಚಿಸಿರುವ ಆಯ್ದ ಪ್ರಮುಖ ಕವಿತೆಗಳು, ರಾಜಕೀಯ ವಿಶ್ಲೇಷಣೆಗಳು, ಧಾರ್ಮಿಕ ಹಾಗೂ ಸಾಮಾಜಿಕ ಚಿಂತನೆಗಳ ಲೇಖನಗಳನ್ನೊಳಗೊಂಡ ಗ್ರಂಥ 'ಸಹಸ್ರಾಕ್ಷರ' ಲೋಕಾರ್ಪಣೆಗೆ ಸಿದ್ಧವಾಗಿದೆ.
ಜನವರಿ 23ರ ಬುಧವಾರ ಸಂಜೆ 5:30ಕ್ಕೆ ಸಂಗೀತ ಕಲೆಯ ಆಲಯವಾಗಿರುವ ಬೆಂಗಳೂರು ಗಾಯನ ಸಮಾಜ ಸಭಾಂಗಣದಲ್ಲಿ ಸಹೃದಯರ ಸಮ್ಮುಖದಲ್ಲಿ 'ಸಹಸ್ರಾಕ್ಷರ' ಗ್ರಂಥ ಲೋಕಾರ್ಪಣೆಯಾಗಲಿದೆ.
ರಂಗಾಯಣದಲ್ಲಿ ಬಹುರೂಪಿಯ ಗುಂಗಿಗೆ ಮನಸೋತ ರಂಗಾಸಕ್ತರು
ಇದೇ ಸಂದರ್ಭದಲ್ಲಿ ಕರ್ನಾಟಕ ಸಂಗೀತ ಲೋಕದ ದಿಗ್ಗಜ ವಾಗ್ಗೇಯಕಾರರಾದ ಮುತ್ತುಸ್ವಾಮಿ ದೀಕ್ಷಿತರು, ಶಾಮಾಶಾಸ್ತ್ರಿಗಳು, ತ್ಯಾಗರಾಜರು, ಪುರಂದರದಾಸರು ಹಾಗೂ ಕನಕದಾಸರ ಆಳೆತ್ತರದ ಮೂರು ಲಕ್ಷ ರೂ.ಗಳ ಮೌಲ್ಯದ ಉಬ್ಬುಚಿತ್ರ ಕಲಾಕೃತಿಗಳನ್ನು ಕೋಟೇಶ್ವರ ಸೂರ್ಯನಾರಾಯಣರಾಯರು ಗಾಯನ ಸಮಾಜಕ್ಕೆ ದಾನವಾಗಿ ಸಮರ್ಪಿಸುತ್ತಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಕುರಿತ ಪುಸ್ತಕ ಬಿಡುಗಡೆ ಮಾಡಿದ ಕುಮಾರಸ್ವಾಮಿ
ಕೋಟೇಶ್ವರ ಸೂರ್ಯನಾರಾಯಣರಾಯರು ಜನಿಸಿದ್ದು ಉಡುಪಿ ಜಿಲ್ಲೆಯ ಕುಂದಾಪುರದ ಕೋಟೇಶ್ವರದಲ್ಲಿ, ಕೆ.ಪಿ.ನರಸಿಂಹಯ್ಯ ಮತ್ತು ಮಹಾಲಕ್ಷ್ಮಮ್ಮ ದಂಪತಿಗಳ ಸುಪುತ್ರರಾಗಿ. ಹುಟ್ಟೂರಿನಲ್ಲಿ ವಿದ್ಯಾಭ್ಯಾಸದ ಬಳಿಕ ಉದ್ಯೋಗಾರ್ಥವಾಗಿ ಬಂದದ್ದು ಬೆಂಗಳೂರಿಗೆ. ಶ್ರದ್ಧೆ, ಏಕಾಗ್ರತೆ, ತತ್ಪರತೆ, ತನ್ಮಯತೆ, ಸಮರ್ಪಣಾಭಾವ ಅವರನ್ನು ಉದ್ಯಮದಲ್ಲಿ ಬೆಳೆಸಿತು.
ಬರೆಯುವುದನ್ನೇ ಹವ್ಯಾಸವಾಗಿಸಿಕೊಂಡು ಕನ್ನಡ ಸಾಹಿತ್ಯ ಕ್ಷೇತ್ರದ ಮುಂಚೂಣಿಯ ಬರಹಗಾರರೆಂದು ಖ್ಯಾತನಾಮರಾದ ರಾಯರು ಬರೆದ ಪ್ರಕಟಿತ ಬರಹಗಳ ಸಂಖ್ಯೆ ಹತ್ತಾರು ಸಾವಿರವಾದೀತು. ಸಾಂದರ್ಭಿಕ ಪ್ರತಿಕ್ರಿಯೆ ನೀಡುವುದರಲ್ಲಿ ರಾಯರದು ಎತ್ತಿದ ಕೈ. ಅವರು ಬರೆದ, ಮುದ್ರಿತ ಲೇಖನಗಳನ್ನೆಲ್ಲ ಒಂದು ಪುಸ್ತಕ ಮಾಡುವುದಿದ್ದರೆ ಕಡಿಮೆ ಎಂದರೂ ಮೂರು ಸಾವಿರ ಪುಟಗಳನ್ನು ಮೀರೀತು.
ಪ್ರವಾಸ ಕಥನ, ಧರ್ಮ ಚಿಂತನೆ ಮತ್ತು ಕವಿತೆಗಳನ್ನೊಳಗೊಂಡ ಮೂರು ಕೃತಿಗಳು ಈಗಾಗಲೇ ಸೂರ್ಯನಾರಾಯಣ ರಾಯರಿಂದ ಪ್ರಕಟಿತವಾಗಿ ಸಾಹಿತ್ಯ ಲೋಕವನ್ನು ಸಂಪನ್ನಗೊಳಿಸಿವೆ.
ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲೂ ಪದಾಧಿಕಾರಿಗಳಾಗಿ, ಸಮಾಜಸೇವೆಯಲ್ಲೂ ಸಕ್ರಿಯರಾಗಿರುವ ಶ್ರೀಯುತರು ಕೋಟೇಶ್ವರ ಸೂರ್ಯನಾರಾಯಣ ರತ್ನ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಬಸವನಗುಡಿಯ ಸರ್ ಎಂ.ಎನ್.ಕೃಷ್ಣರಾವ್ ಉದ್ಯಾನವನದ ಬಳಿಯಿರುವ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ತೆಗೆದುಕೊಂಡು ಹಲವಾರು ವರ್ಷಗಳಿಂದ ಒಂದು ಮಾದರಿ ಶಾಲೆಯನ್ನಾಗಿ ರೂಪಿಸಿದ್ದಾರೆ.
ತಮ್ಮ ಎಂಭತ್ತರ ಹರೆಯದಲ್ಲೂ ಹದಿಹರೆಯದ ಉತ್ಸಾಹದಿಂದ ಬರವಣಿಗೆ, ಸಮಾಜಸೇವೆ, ಸಂಘಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದುಕೊಂಡೇ ಸಹಸ್ರ ಚಂದ್ರ ದರ್ಶನದ ಹೊಸ್ತಿಲಲ್ಲಿರುವ ಕೋಟೇಶ್ವರ ಸೂರ್ಯನಾರಾಯಣ ರಾಯರು ಈವರೆಗೆ ಬರೆದಿರುವ ಸಾವಿರಾರು ಬರೆಹಗಳಲ್ಲಿ ಆಯ್ದ ಬರೆಹಗಳನ್ನು ವಿಭಾಗವಾರು ವಿಂಗಡಿಸಿ ಒಂದು ದಾಖಲೆಯನ್ನಾಗಿಸುವ ಪ್ರಯತ್ನ ಅವರ ಅಭಿಮಾನಿ ಬಳಗದ್ದಾಗಿದೆ.
ಸಾವಿರ
ಕಣ್ಣಿನ
ಇಂದ್ರನಿಗೆ
ಸಹಸ್ರಾಕ್ಷ
ಎಂಬ
ಹೆಸರಿರುವಂತೆ
ಸಾವಿರಾರು
ಬರೆಹಗಳ
ಒಡೆತನ
ಹೊಂದಿದ
ಕೋಟೇಶ್ವರ
ಸೂರ್ಯನಾರಾಯಣ
ರಾಯರ
ಈ
ಗ್ರಂಥಕ್ಕೆ
'ಸಹಸ್ರಾಕ್ಷರ'
ಎಂಬ
ಹೆಸರು
ಸೂಕ್ತವೆನಿಸುತ್ತದೆ.
ಧಾರ್ಮಿಕ,
ಸಾಮಾಜಿಕ,
ಸಾಂಸ್ಕೃತಿಕ,
ರಾಜಕೀಯ,
ಚಿಂತನೀಯ
ವಿಚಾರಗಳ
ವಿಸ್ತಾರ
ಜಗತ್ತಿನಲ್ಲಿ
ಅಕ್ಷರ
ವಿಹಾರ
ಮಾಡಿ
ಸಾವಿರಾರು
ಬರಹಗಳನ್ನು
ಸೃಷ್ಟಿಸಿರುವ
ಕೋಟೇಶ್ವರ
ಸೂರ್ಯನಾರಾಯಣ
ರಾಯರಿಗೆ
ಸಾವಿರ
ಹುಣ್ಣಿಮೆ
ಸಂಭ್ರಮದ
ಅಭಿನಂದನೆಗಳನ್ನು
ಸಮರ್ಪಿಸುತ್ತಾ
ಈ
ಕೃತಿಯನ್ನು
ಲೋಕಾರ್ಪಣೆ
ಮಾಡಲಾಗುತ್ತಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಾಧೀಶ, ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಗಾನಕಲಾ ಭೂಷಣ ವಿದ್ವಾನ್ ಆರ್.ಕೆ.ಪದ್ಮನಾಭ, ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯ, ಮಾಜಿ ಮಹಾಪೌರ ಕಟ್ಟೆ ಸತ್ಯನಾರಾಯಣ ಮುಂತಾದವರು ಪಾಲ್ಗೊಳ್ಳಲಿದ್ದಾರೆ.