ಹುಷಾರ್ ಕಣ್ರಪ್ಪಾ.. ಕರ್ನಾಟಕದಲ್ಲಿ ರಣಕೇಕೆ ಹಾಕುತ್ತಿರುವ ಕೊರೊನಾ!
ಬೆಂಗಳೂರು, ಏಪ್ರಿಲ್ 09: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ರಣಕೇಕೆ ಹಾಕುತ್ತಿದೆ. ಪ್ರತಿನಿತ್ಯ ವರದಿಯಾಗುತ್ತಿರುವ ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳು ರಾಜ್ಯದ ಜನರ ಎದೆಯಲ್ಲಿ ಭಯ ಹುಟ್ಟಿಸುತ್ತಿದೆ.
Recommended Video
ಗುರುವಾರಕ್ಕೆ ಹೋಲಿಸಿ ನೋಡಿದರೆ ರಾಜ್ಯದಲ್ಲಿ 1500ಕ್ಕೂ ಹೆಚ್ಚು ಹೊಸ ಕೊವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ ಸಾವಿನ ಸಂಖ್ಯೆಯೂ ಏರಿಕೆಯಾಗಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಅಂಕಿ-ಅಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
Corona Curfew: ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ!
ಕಳೆದ ಏಪ್ರಿಲ್ 8ರಂದು ಕರ್ನಾಟಕದಲ್ಲಿ 6570 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಕೊರೊನಾವೈರಸ್ ಸೋಂಕಿಗೆ 36 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 12767ಕ್ಕೆ ಏರಿಕೆಯಾಗಿತ್ತು. ಒಟ್ಟು 1040130 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 53395 ಸಕ್ರಿಯ ಪ್ರಕರಣಗಳಿದ್ದವು. ಇದಾಗಿ 24 ಗಂಟೆಗಳಲ್ಲೇ ಕರ್ನಾಟಕದಲ್ಲಿ ಕೊರೊನಾವೈರಸ್ ಹೊಸ ದಾಖಲೆ ಬರೆದಿದೆ.
ಕರ್ನಾಟಕದಲ್ಲಿ ನಡುಕ ಹುಟ್ಟಿಸಿದ ಕೊರೊನಾವೈರಸ್
ರಾಜ್ಯದಲ್ಲಿ ಒಂದೇ ದಿನ 7955 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 46 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, 3220 ಸೋಂಕಿತರು ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಒಟ್ಟು ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 1048085ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೂ 977169 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 58084 ಸಕ್ರಿಯ ಪ್ರಕರಣಗಳಿವೆ.
ರಾಜ್ಯ ರಾಜಧಾನಯಲ್ಲಿ ಕೊವಿಡ್-19 ರಣಕೇಕೆ
ಕರ್ನಾಟಕದಲ್ಲಿ ದೃಢಪಟ್ಟಿರುವ ಒಟ್ಟು ಸೋಂಕಿತ ಪ್ರಕರಣಗಳ ಪೈಕಿ ಶೇ.80ರಷ್ಟು ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ. ಒಂದು ದಿನದಲ್ಲಿ ಸಿಲಿಕಾನ್ ಸಿಟಿಯಲ್ಲೇ 5576 ಮಂದಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಮಹಾಮಾರಿಗೆ 29 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 4769ಕ್ಕೆ ಏರಿಕೆಯಾಗಿದೆ. ರಾಜ್ಯ ರಾಜಧಾನಿಯೊಂದರಲ್ಲೇ 42525 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.
ಕೊರೊನಾವೈರಸ್ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ
ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಏಪ್ರಿಲ್ 10 ರಿಂದ ಏಪ್ರಿಲ್ 20ರವರೆಗೂ ರಾಜ್ಯದ 7 ಜಿಲ್ಲೆಗಳ ಎಂಟು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ರಾತ್ರಿ ನಿಷೇಧಾಜ್ಞೆಯನ್ನೇ ಕೊರೊನಾ ಕರ್ಫ್ಯೂ ಎಂದು ಕರೆಯಲಾಗಿದ್ದು, ಶನಿವಾರ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಬೆಂಗಳೂರು ನಗರ, ಮೈಸೂರು, ಕಲಬುರ್ಗಿ, ತುಮಕೂರು, ಬೀದರ್, ಮಂಗಳೂರು, ಉಡುಪಿ ಮತ್ತು ಮಣಿಪಾಲ್ ನಗರಗಳಲ್ಲಿ ಕರ್ಫ್ಯೂ ಜಾರಿಗೆ ಬರಲಿದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳಿಗೆ ಯಾವುದೇ ಕೊರತೆ ಎದುರಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದಲ್ಲಿ ಕೊರೊನಾವೈರಸ್ ಅಂಕಿ-ಸಂಖ್ಯೆಗಳು
ರಾಜ್ಯದಲ್ಲಿ ಒಟ್ಟು 7955 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 37, ಬಳ್ಳಾರಿ 87, ಬೆಳಗಾವಿ 76, ಬೆಂಗಳೂರು ಗ್ರಾಮಾಂತರ 71, ಬೆಂಗಳೂರು 5576, ಬೀದರ್ 186, ಚಾಮರಾಜನಗರ 35, ಚಿಕ್ಕಬಳ್ಳಾಪುರ 119, ಚಿಕ್ಕಮಗಳೂರು 29, ಚಿತ್ರದುರ್ಗ 42, ದಕ್ಷಿಣ ಕನ್ನಡ 115, ದಾವಣಗೆರೆ 29, ಧಾರವಾಡ 86, ಗದಗ 16, ಹಾಸನ 153, ಹಾವೇರಿ 13, ಕಲಬುರಗಿ 211, ಕೊಡಗು 19, ಕೋಲಾರ 84, ಕೊಪ್ಪಳ 39, ಮಂಡ್ಯ 104, ಮೈಸೂರು 283, ರಾಯಚೂರು 30, ರಾಮನಗರ 65, ಶಿವಮೊಗ್ಗ 33, ತುಮಕೂರು 145, ಉಡುಪಿ 46, ಉತ್ತರ ಕನ್ನಡ 67, ವಿಜಯಪುರ 127, ಯಾದಗಿರಿ 32 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.