ಹುಬ್ಬಳ್ಳಿ, ವಿಜಯಪುರದಲ್ಲಿ 7 ಮಂದಿ ಪೊಲೀಸರಿಗೆ ಕ್ವಾರೆಂಟೈನ್
ಹುಬ್ಬಳ್ಳಿ, ಏಪ್ರಿಲ್ 13: ಕೊರೊನಾ ವಿರುದ್ಧ ಹೋರಾಡುತ್ತಿರುವವರ ಪೈಕಿ ಪೊಲೀಸ್ ಇಲಾಖೆಯ ಶ್ರಮವನ್ನು ಮೆಚ್ಚಬೇಕು. ತಮ್ಮ ಆರೋಗ್ಯವನ್ನು ಲೆಕ್ಕಿಸದೇ, ತಮ್ಮ ಕುಟುಂಬದವರಿಂದಲೂ ದೂರವಿದ್ದು, ಸಾರ್ವಜನಿಕರ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇಂತಹ ಪೊಲೀಸರಿಗೂ ಕೊರೊನಾ ಕಾಟ ತಪ್ಪಿದ್ದಲ್ಲ. ಕೊರೊನಾ ರೋಗಿಗಳ ಜೊತೆ ಹಾಗೂ ರೋಗಿಗಳ ಕುಟುಂಬದ ಜೊತೆ ಸಂಪರ್ಕದಲ್ಲಿದ್ದ ಕಾರಣ ಹುಬ್ಬಳ್ಳಿ ಮತ್ತು ವಿಜಯಪುರದಲ್ಲಿ ಏಳು ಜನ ಪೊಲೀಸರು ಕ್ವಾರೆಂಟೈನ್ ಮೊರೆ ಹೋಗಿದ್ದಾರೆ.
ಬಳ್ಳಾರಿ ಜಿಲ್ಲೆ ಕೊರೊನಾ ವಾರಿಯರ್ಸ್ ಗೆ ಮಾಸ್ಕ್, ಸ್ಯಾನಿಟೈಸರ್ ಕೊರತೆ
ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಐದು ಜನ ಪೊಲೀಸರನ್ನು ಕ್ವಾರೆಂಟೈನ್ಗೆ ಕಳುಹಿಸಲಾಗಿದೆ. ಮುಲ್ಲಾ ಓಣಿಯಲ್ಲಿ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿದ್ದು, ಆತನ ಜೊತೆ ಈ ಪೊಲೀಸರು ಪ್ರಾಥಮಿಕ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ರೋಗದ ಲಕ್ಷಣಗಳು ಕೂಡ ಕಾಣಿಸಿವೆ. ಐದು ಜನರ ಪೈಕಿ ಮೂವರು ಪೊಲೀಸರು ಹಿರಿಯರಾಗಿದ್ದು, ಇಬ್ಬರು ಯುವ ಪೊಲೀಸರು.
ಮುಲ್ಲಾ ಓಣಿಯಲ್ಲಿ ಕೊರೊನಾ ಶಂಕಿತನ ಬಳಿ ಮಾಹಿತಿ ಸಂಗ್ರಹಿಸಲು ಪೊಲೀಸರು ಹೋಗಿದ್ದರು. ಈ ವೇಳೆ ಗ್ಲೌಸ್ ತೊಡದೆ ಆತ ನೀಡಿದ ದಾಖಲೆ ಪಡೆದುಕೊಂಡಿದ್ದರು. ಅದಾದ ಸ್ವಲ್ಪ ದಿನದ ಬಳಿಕ ಆತನಿಗೆ ಸೋಂಕು ದೃಢವಾಗಿತ್ತು. ಹೀಗಾಗಿ, ಎಎಸ್ಐ, ಮುಖ್ಯ ಪೇದೆ ಹಾಗೂ ಮೂವರು ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಿಸಿ, ಕೈಗೆ ಸೀಲ್ ಹಾಕಿ ಹೋಮ್ ಕ್ವಾರೆಂಟೈನ್ ಸೂಚಿಸಲಾಗಿದೆ.
ರಾಜ್ಯದಲ್ಲಿ 15 ಹೊಸ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆ
ಈ ಕಡೆ ವಿಜಯಪುರದಲ್ಲಿಯೂ ಇಬ್ಬರು ಪೊಲೀಸರಿಗೆ ಕ್ವಾರೆಂಟೈನ್ ಸೂಚಿಸಲಾಗಿದೆ. ವಿಜಯಪುರದ ಚಪ್ಪರ್ಬಂದ್ ಪ್ರದೇಶದಲ್ಲಿ ಸೋಂಕಿತೆ ಮಹಿಳೆ ಮನೆಗೆ ಮಾಹಿತಿ ಸಂಗ್ರಹಿಸಲು ಹೋಗಿದ್ದರು. ಹಾಗಾಗಿ, ಗೋಳಗುಮ್ಮಟ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಒಬ್ಬ ಪೇದೆಯನ್ನು ಕ್ವಾರೆಂಟೈನ್ನಲ್ಲಿ ಇರಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.