ಡಿಕೆಶಿ ಅಕ್ಕ-ಪಕ್ಕ ಕಾಣಿಸಿಕೊಳ್ಳುತ್ತಿರುವ ಜೆಡಿಎಸ್ ರೆಬೆಲ್ ಶಾಸಕರು
ಬೆಂಗಳೂರು, ಆ.06 : ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಡಿಎಸ್ನ ಬಂಡಾಯ ಶಾಸಕರಿಗೆ ಟಿಕೆಟ್ ಚಿಂತೆ ಆರಂಭವಾಗಿದೆ. ಸ್ವ ಪಕ್ಷಕ್ಕೆ ಮರಳದ ಶಾಸಕರು ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದು, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಜೆಡಿಎಸ್ ನಾಯಕರಿಗೆ ಜಮೀರ್ ನೀಡಿದ ಸಲಹೆ ಏನು?
ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ ಎಂಟು ಶಾಸಕರನ್ನು ಜೆಡಿಎಸ್ ಅಮಾನತುಗೊಳಿಸಿತ್ತು. ಇವರಲ್ಲಿ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯರನ್ನು ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳಲಾಗಿದೆ.
ಜೆಡಿಯುನತ್ತ ಹೊರಟ ಜೆಡಿಎಸ್ಸಿನ 8 ಶಾಸಕರು?
ಚುನಾವಣೆ ಹತ್ತಿರವಾಗುತ್ತಿದ್ದಂತೆ ಉಳಿದ ಏಳು ಶಾಸಕರ ಭವಿಷ್ಯ ಅತಂತ್ರವಾಗಿದೆ. ಏಳು ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆಯೇ?, ಪಕ್ಷೇತರ ಅಭ್ಯರ್ಥಿಗಳಾಗಿ ಅವರು ಸ್ಪರ್ಧಿಸಲಿದ್ದಾರೆಯೇ? ಎಂಬುದು ಸದ್ಯದ ಪ್ರಶ್ನೆ, ಎಲ್ಲಾ ಶಾಸಕರು ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.
'ನಾನು ಅವರಿಗೆ ಹಣ ಕೊಟ್ಟು ಸಾಕುವಷ್ಟು ಶ್ರೀಮಂತನಲ್ಲ'
ರೆಬೆಲ್ ಶಾಸಕರು ಎಸ್ಸಿಪಿ ಸೇರಲಿದ್ದಾರೆ, ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ, ರಾಷ್ಟರಾಜಕಾರಣದಲ್ಲಿ ದೇವೇಗೌಡರ ಮಿತ್ರ ಬಳಗ ದೊಡ್ಡದಿರುವುದರಿಂದ ಯಾವ ಪಕ್ಷಗಳು ಶಾಸಕರನ್ನು ಸೇರಿಸಿಕೊಂಡಿಲ್ಲ.
ಏಳು ಶಾಸಕರ ಭವಿಷ್ಯ ಅತಂತ್ರ
ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ), ಚೆಲುವರಾಯ ಸ್ವಾಮಿ (ನಾಗಮಂಗಲ), ಎಚ್.ಸಿ.ಬಾಲಕೃಷ್ಣ (ಮಾಗಡಿ), ಇಕ್ಬಾಲ್ ಅನ್ಸಾರಿ (ಗಂಗಾವತಿ), ರಮೇಶ್ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ) ಶಾಸಕರ ಭವಿಷ್ಯ ಅತಂತ್ರವಾಗಿದೆ.
ಡಿಕೆಶಿ ಜೊತೆ ನಿರಂತರ ಸಂಪರ್ಕ
ಏಳು ಶಾಸಕರ ಪೈಕಿ ಹಲವರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಐಟಿ ದಾಳಿ ಬಳಿಕ ಶನಿವಾರ ಗುಜರಾತ್ ಶಾಸಕರ ಜೊತೆ ಡಿ.ಕೆ.ಶಿವಕುಮಾರ್ ವಿಧಾನಸೌಧಕ್ಕೆ ಹೋದಾಗ ಅಲ್ಲಿ ಚೆಲುವರಾಯಸ್ವಾಮಿ ಕಾಣಿಸಿಕೊಂಡಿದ್ದರು.
ಸಿಎಂ ಜೊತೆ ಸದಾ ಕಾಣಿಸಿಕೊಳ್ಳುವ ಜಮೀರ್
ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೊತೆ ಸದಾ ಕಾಣಿಸಿಕೊಳ್ಳುತ್ತಾರೆ. ಶನಿವಾರ ಸಂಜೆ ಡಿ.ಕೆ.ಶಿವಕುಮಾರ್ ಜೊತೆ ಜಮೀರ್ ಈಗಲ್ಟನ್ ರೆಸಾರ್ಟ್ ನಲ್ಲಿದ್ದರು. ಭಾನುವಾರ ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ನೀಡಿದ್ದರು.
ಶುಕ್ರವಾರ ಡಿಕೆಶಿ ಭೇಟಿಯಾಗಲು ಬಂದಿದ್ದರು
ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ನಡೆದಾಗ ರೆಬಲ್ ಶಾಸಕರು ಅವರನ್ನು ಭೇಟಿಯಾಗಲು ಬಂದಿದ್ದರು. ಆದರೆ, ಅವರನ್ನು ಮನೆಯೊಳಗೆ ಬಿಡಲಿಲ್ಲ. ರೆಸಾರ್ಟ್ ಗೆ ಹೋಗಿ ಡಿ.ಕೆ.ಸುರೇಶ್ ಭೇಟಿಯಾಗುತ್ತೇವೆ ಎಂದು ಶಾಸಕರು ಹೇಳಿಕೆ ನೀಡಿದ್ದರು.
ಶಾಸಕರಿಗೆ ಟಿಕೆಟ್ ಸಿಗುವುದೇ?
ವಿಧಾನಸಭೆ ಚುನಾವಣೆ ಹತ್ತಿರವಾದರೂ ಏಳು ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಕೊಡುವ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ. ಟಿಕೆಟ್ ಹಂಚಿಕೆ ಸಮಯದಲ್ಲಿ ಹಲವು ಹಗ್ಗ-ಜಗ್ಗಾಟಗಳು ನಡೆಯುವ ಸಾಧ್ಯತೆ ಇದೆ.