ಆಡಳಿತಾತ್ಮಕವಾಗಿ ಮಹತ್ವದ ಹೆಜ್ಜೆ ಇಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ!
ಹೊಸಪೇಟೆ, ಅ. 02: ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಜೊತೆಯಾಗಿ ವಿಜಯನಗರ ಜಿಲ್ಲೆಯಲ್ಲಿ ಮಹತ್ವದ ಪಾರಂಪರಿಕ ಪ್ರವಾಸಿ ತಾಣಗಳ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 643 ಕೋಟಿ ರೂ. ಗಳ ವಿಶೇಷ ಯೋಜನೆಯನ್ನು ರೂಪಿಸಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯ ಉದ್ಘಾಟನೆ ಮಾಡಿದ ಬಳಿಕ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ. "ವಿಜಯನಗರ ನೂತನ ಜಿಲ್ಲೆಯಿಂದ ವಿಜಯನಗರ ಸಾಮ್ರಾಜ್ಯದ ಗತವೈಭವ ಪುನರ್ ಸ್ಥಾಪನೆಯಾಗಿದೆ. ಕರ್ನಾಟಕದ ಎಲ್ಲ ಜಿಲ್ಲೆಯ ಪ್ರತಿಯೊಬ್ಬ ನಾಗರಿಕನು ಸುಖ ಸಮೃದ್ಧಿಯಿಂದ ಬದುಕಬೇಕು. ಸಮಾನತೆಯಿಂದ ಅವಕಾಶ ನೀಡಿ ಎಲ್ಲ ಕನ್ನಡಿಗರೂ ಸ್ವಾಭಿಮಾನದಿಂದ ಬದುಕುವ ರೀತಿಯಲ್ಲಿ ಆಡಳಿತ ನೀಡಲಾಗುವುದು. ವಿಜಯನಗರ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿನ ಹಳ್ಳಿಗಳ ಕಟ್ಟಕಡೆಯ ಕುಟುಂಬವೂ ನೆಮ್ಮದಿಯಿಂದ ಬದುಕಲು ಎಲ್ಲ ರೀತಿಯ ಸೌಲಭ್ಯಗಳನ್ನು ಕೊಡುವ ಸಂಕಲ್ಪ ಮಾಡಿದ್ದೇವೆ" ಎಂದು ತಿಳಿಸಿದರು.
ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಅಧಿಕೃತವಾಗಿ ಶನಿವಾರ ಹೊಸಪೇಟೆಯಲ್ಲಿ ಉದ್ಘಾಟನೆಯಾಗಿದೆ. ಆ ಮೂಲಕ ಮತ್ತೊಂದು ಆಡಳಿತಾತ್ಮಕವಾಗಿ ಮಹತ್ವದ ಹೆಜ್ಜೆಯನ್ನು ರಾಜ್ಯ ಸರ್ಕಾರ ಇಟ್ಟಂತಾಗಿದೆ.
ವಿಶಾಲವಾದ ಜಿಲ್ಲಾಡಳಿತ ಕೇಂದ್ರ ಸ್ಥಾಪನೆ
"ವಿಜಯನಗರ ಜಿಲ್ಲೆಗೆ ಶ್ರೀಮಂತ ಪರಂಪರೆ ಇದೆ. ಹಂಪಿಯಲ್ಲಿನ ಶಿಲ್ಪಕಲೆ, ನಮ್ಮ ಪೂರ್ವಜರ ಶೌರ್ಯ, ನಮ್ಮ ಕಲೆ, ಸಂಗೀತ, ಸಂಸ್ಕೃತಿಯನ್ನು ಸಾರುತ್ತದೆ. ಹಂಪಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತಾಗಬೇಕು. ಹೆಲಿ ಟೂರಿಸಂಗೆ ಅವಕಾಶ ಕಲ್ಪಿಸಲಾಗುವುದು. ಈ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು. ಈ ಜಿಲ್ಲೆಗೆ 83 ಎಕರೆ ವಿಸ್ತೀರ್ಣದ ವಿಶಾಲವಾದ ಜಿಲ್ಲಾಡಳಿತ ಕೇಂದ್ರ ಸ್ಥಾಪನೆಗೆ ಸರ್ಕಾರ ಆರ್ಥಿಕ ನೆರವನ್ನು ನೀಡಲಾಗುವುದು" ಎಂದು ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಾಡು ಕಟ್ಟುವ ಕನಸಿನ ಹಲವಾರು ಯೋಜನೆ!
ಒಟ್ಟು 337 ಕೋಟಿ ರೂ. ಗಳ ಕಾಮಗಾರಿಗಳಿಗೆ ಚಾಲನೆಗೆ ಭಾನುವಾರ ನೀಡಲಾಗಿದ್ದು, ವಿಜಯನಗರ ಜಿಲ್ಲೆಯ ಸ್ಥಾಪನೆಯ ದಿನ ಅಭಿವೃದ್ಧಿ ಪರ್ವದ ಆರಂಭದ ಸಂಕೇತ. 31ನೇ ಜಿಲ್ಲೆಯಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ 250 ಬೆಡ್ಗಳ ಆಸ್ಪತ್ರೆಯ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು. ನಾಡನ್ನು ಕಟ್ಟುವ ಕನಸಿನಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಪ್ರತಿಯೊಂದು ಗ್ರಾಮಪಂಚಾಯತಿಯ ಜನರಿಗೆ ಸರ್ಕಾರದ ಎಲ್ಲ ಸೇವೆಗಳನ್ನು ಸಮರ್ಪಿಸುವ ಕಾರ್ಯವನ್ನು ಮುಂದಿನ ಜನವರಿ 26 ರಂದು ಪ್ರಾರಂಭಿಸಲಾಗುವುದು ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನೂತನ ಜಿಲ್ಲೆಯ ಅಭಿವೃದ್ಧಿಗೆ ಹೊಸ ಯೋಜನೆಗಳಿವು
ನೂತನ ಜಿಲ್ಲೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಜಯನಗರ ಜಿಲ್ಲೆ ಕುರಿತ ಸರ್ಕಾರದ ಆದೇಶವನ್ನು ಬಿಡುಗಡೆ ಮಾಡಿದರು. ಜೊತೆಗೆ 56 ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕು ಸ್ಥಾಪನೆಯನ್ನೂ ನೆರವೇರಿಸಿದರು. ನೂತನ ಜಿಲ್ಲೆ ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡುತ್ತಿದ್ದಂತೆಯೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಜನರು ಹರ್ಷ ವ್ಯಕ್ತಪಡಿಸಿದರು. ಸಚಿವ ಆನಂದ್ ಸಿಂಗ್ ಅವರ ಒತ್ತಾಯದಿಂದ ನೂತನ ಜಿಲ್ಲೆಯಂದು ಅಧಿಕಾರದಲ್ಲಿದ್ದಾಗ ಘೊಷಣೆ ಮಾಡಿದ್ದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಜಿಲ್ಲೆ ಘೋಷಣೆ ಮಾಡಿದ್ದ ಬಿ.ಎಸ್. ಯಡಿಯೂರಪ್ಪ!
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, "ಅನೇಕ ಪೂಜ್ಯ ಸಂತರ ಉಪಸ್ಥಿತಿಯಲ್ಲಿ, ಹೊಸಪೇಟೆಯಲ್ಲಿ ನೂತನ ವಿಜಯನಗರ ಜಿಲ್ಲೆಯನ್ನು ಅಧಿಕೃತವಾಗಿ ಉದ್ಘಾಟಿಸಲಾಗಿದೆ. ಸಚಿವರು, ಆ ಭಾಗದ ಸಂಸದರು, ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು. ಈ ಮೂಲಕ ಈ ಭಾಗದ ಜನರ ಅಭಿವೃದ್ಧಿಗೆ ಹಲವು ಯೋಜನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ" ಎಂದರು. ಸಚಿವರಾದ ಆನಂದ್ ಸಿಂಗ್, ಗೋವಿಂದ ಕಾರಜೋಳ, ಡಾ. ಸಿ. ಎನ್. ಅಶ್ವಥ್ ನಾರಾಯಣ, ಸಿ. ಸಿ. ಪಾಟೀಲ್, ಬೈರತಿ ಬಸವರಾಜ, ಬಿ. ಶ್ರೀರಾಮುಲು, ಸುನಿಲ್ ಕುಮಾರ್ ಮತ್ತಿತರು ಭಾಗವಹಿಸಿದ್ದರು.
Recommended Video