ಇಲ್ಲಿದೆ 24/7 ಕೋವಿಡ್ ಲಸಿಕಾ ಕೇಂದ್ರ: ಮಧ್ಯರಾತ್ರಿ ಹೋದರೂ ಇಲ್ಲಿ ಲಸಿಕೆ ಫ್ರೀ!
ಬೆಂಗಳೂರು, ಸೆ. 17: ಇಡೀ ದೇಶಕ್ಕೆ ಕೊರೊನಾ ಮೂರನೇ ಅಲೆಯ ಆತಂಕ ಇದೆ. ಹೀಗಾಗಿ ಕೊರೊನಾ ಆತಂಕದಿಂದ ದೂರವಾಗಲು ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ ಮಾರ್ಗ ಎಂದು ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ಸರ್ಕಾರ ಕೂಡ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಸಮರೋಪಾದಿಯಲ್ಲಿ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಆ ಕ್ಷೇತ್ರದಲ್ಲಿ ಜನರಿಗೆ ನೆಮ್ಮದಿ ಹಾಗೂ ಸಂತಸ ಕೊಡುವಂತಹ ಸುದ್ದಿ ಬಂದಿದೆ.
ದಿನದ 24 ಗಂಟೆ ಹಾಗೂ ವಾರದ 7 ದಿನವೂ ಲಸಿಕೆ ಹಾಕಲು ಅಲ್ಲಿ ವ್ಯವಸ್ಥೆ ಮಾಡಲಾಗಿದೆ. ಆ ಮೂಲಕ ಕೊರೊನಾ ವೈರಸ್ ವಿರುದ್ಧ ಸಮರ ಸಾರಲಾಗಿದೆ. ಕೊರೊನಾ ವೈರಸ್ ಲಸಿಕೆ ಅಭಾವ ಎನ್ನುವಂತಹ ಸ್ಥಿತಿಯಲ್ಲಿ ಮೊದಲ ಹಾಗೂ ಎರಡನೇ ಡೋಸ್ ಲಸಿಕೆಯನ್ನು ಕೊಡಲು ಅಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಜೊತೆಗೆ ಈ ಲಸಿಕೆ ಅಭಿಯಾನಕ್ಕೂ ಪ್ರಧಾನಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಕ್ಕೂ ಸಂಬಂಧವಿದೆ. ಇಷ್ಟೇ ಅಲ್ಲ ಪ್ರಧಾನಿ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಈ ಲಸಿಕೆ ಕೇಂದ್ರ ಆರಂಭಿಸಲಾಗಿದೆ. ಅಷ್ಟಕ್ಕೂ ನಮ್ಮ ರಾಜ್ಯದಲ್ಲಿ ಎಲ್ಲಿ ದಿನದ 24 ಗಂಟೆ ವಾರದ ಏಳೂ ದಿನಗಳ ಕಾಲ ಕೋವಿಡ್ ಲಸಿಕೆ ಹಾಕಲಾಗುತ್ತಿದೆ? ಎಲ್ಲಿವರೆಗೆ ಈ ಅಭಿಯಾನ ಮುಂದುವರೆಯಲಿದೆ? ಮುಂದಿದೆ ಸಂಪೂರ್ಣ ವಿವರ.
ಮಧ್ಯರಾತ್ರಿ ಬಂದರೂ ಇಲ್ಲಿ ಕೋವಿಡ್ ಲಸಿಕೆ ಹಾಕ್ತಾರೆ!
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಏಕಕಾಲಕ್ಕೆ 54 ಕಡೆಗಳಲ್ಲಿ ಕೋವಿಡ್ ಲಸಿಕಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೋವಿಡ್ ಲಸಿಕೆ ಅಭಿಯಾನಕ್ಕೆ ಉನ್ನತ ಶಿಕ್ಷಣ ಸಚಿವ ಹಾಗೂ ಮಲ್ಲೇಶ್ವರದ ಶಾಸಕ ಡಾ. ಸಿ. ಎನ್. ಅಶ್ವಥ್ ನಾರಾಯಣ ಶುಕ್ರವಾರ ಚಾಲನೆ ನೀಡಿದ್ದಾರೆ.
ಮಲ್ಲೇಶ್ವರದ ವ್ಯಾಪ್ತಿಯಲ್ಲಿ 54 ಕೇಂದ್ರಗಳಲ್ಲಿಯೂ ಕೊರೊನಾ ವೈರಸ್ ಲಸಿಕೆ ಹಾಕಲಾಗುತ್ತಿದೆ. ಅಗತ್ಯವಿರುವ ಜನರು ಮಧ್ಯರಾತ್ರಿ ಬೇಕಾದರೂ ಬಂದು ಲಸಿಕೆ ಪಡೆಯುವ ಸೌಲಭ್ಯವುಳ್ಳ ಕೋದಂಡರಾಮಪುರದ ಕಬಡ್ಡಿ ಮೈದಾನದಲ್ಲಿ ಸ್ಥಾಪಿಸಲಾಗಿರುವ 24/7 ಕೋವಿಡ್ ಲಸಿಕಾ ಕೇಂದ್ರಕ್ಕೂ ಸಚಿವ ಡಾ. ಅಶ್ವಥ್ ನಾರಾಯಣ ಚಾಲನೆ ನೀಡಿದ್ದಾರೆ.
ಬಡ್ಡಿ ಮೈದಾನದಲ್ಲಿ 24/7 ಕೋವಿಡ್ ಲಸಿಕಾ ಕೇಂದ್ರ
ಮಲ್ಲೇಶ್ವರದ ಕೋದಂಡರಾಮಪುರದ ಕಬಡ್ಡಿ ಮೈದಾನದಲ್ಲಿ 24/7 ಕೋವಿಡ್ ಲಸಿಕಾ ಕೇಂದ್ರ ಆರಂಭಿಸಲಾಗಿದೆ. ದಿನದ 24 ಗಂಟೆ, ವಾರದ 7 ದಿನ ಕಾರ್ಯ ನಿರ್ವಹಿಸುವ ಈ ಕೇಂದ್ರದಲ್ಲಿ ಮಧ್ಯರಾತ್ರಿ ಬಂದರೂ ಲಸಿಕೆ ನೀಡುವ ವ್ಯವಸ್ಥೆ ಇದೆ. ಇದೊಂದು ವಿಭಿನ್ನ ಪ್ರಯೋಗ. ದೇಶಾದ್ಯಂತ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಲಸಿಕೆ ಅಭಿಯಾನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ಇಂಥ ಲಸಿಕಾ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದ್ದಾರೆ.
ಬೆಳಗ್ಗೆಯಿಂದ ಸಂಜೆವರೆಗೂ ಅಲ್ಲ, ಮಧ್ಯರಾತ್ರಿ ಬಂದರೂ ನಾವು ಈ ಕೇಂದ್ರದಲ್ಲಿ ಲಸಿಕೆ ನೀಡುತ್ತೇವೆ. ಮೂರು ತಿಂಗಳು ಕಾಲ ಈ ಕೇಂದ್ರ ಕಾರ್ಯನಿರ್ವಹಿಸುತ್ತದೆ. ಅಗತ್ಯವಾದರೆ ಅದರ ಸೇವೆಯನ್ನು ಮತ್ತಷ್ಟು ದಿನ ವಿಸ್ತರಿಸಲಾಗುವುದು. ಲಸಿಕೆ ಪಡೆದ ನಂತರ ಅರ್ಧ ಗಂಟೆ ಇಲ್ಲಿಯೇ ಉಳಿಯುವವರಿಗೆ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಾಹನದಲ್ಲೇ ಕೋವಿಡ್ ಲಸಿಕೆ
24/7 ಲಸಿಕೆ ಕೇಂದ್ರಕ್ಕೆ ಬರುವ ಮಹಿಳೆಯರಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ. ಪ್ರತ್ಯೇಕ ಪಿಂಕ್ ಬೂತ್ ಮಾಡಲಾಗಿದ್ದು. ಗರ್ಭಿಣಿಯರು, ಚಿಕ್ಕ ಮಕ್ಕಳ ತಾಯಂದಿರು ಯಾರೇ ಬಂದರೂ ಅವರು ಲಸಿಕೆ ಪಡೆದು ಕೆಲವೊತ್ತು ಇಲ್ಲಿಯೇ ಇರುವ ವ್ಯವಸ್ಥೆ ಮಾಡಲಾಗಿದೆ. ಅವರಿಗಾಗಿ ಟೀವಿ, ಪತ್ರಿಕೆ, ಮ್ಯಾಗಝಿನ್ಗಳನ್ನು ಇಡಲಾಗಿದೆ.
ವಯಸ್ಸಾದವರು, ನಡೆಯಲು ಅಶಕ್ತರಾದವರಿಗೆ ಅನುಕೂಲವಾಗಲೆಂದು ಕಾರಿನಲ್ಲಿ ಕೂರಿಸಿ ಲಸಿಕೆ ನೀಡುವ ವ್ಯವಸ್ಥೆ ಕೂಡ ಇಲ್ಲಿ ಮಾಡಲಾಗಿದೆ. ಲಸಿಕಾ ಕೇಂದ್ರಕ್ಕೆ ನೇರವಾಗಿ ವಾಹನದಲ್ಲಿಯೇ ಹೋಗಿ ಲಸಿಕೆ ಹಾಕಿಸಿಕೊಳ್ಳಬಹುದು. ಇದು ಮಲ್ಲೇಶ್ವರದಲ್ಲಿ ಲಸಿಕೆ ಹಾಕಿಸಿಕೊಳ್ಳುವವರಿಗೆ ಮಾಡಿರುವ ಮತ್ತೊಂದು ವಿಶೇಷ.
Recommended Video
ಮೋದಿ ಮುಖ್ಯಮಂತ್ರಿಯಾಗಿ 20ನೇ ವರ್ಷಾಚರಣೆ!
ಇದೇ ಸಂದರ್ಭದಲ್ಲಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಯ ಪ್ರಾಥಮಿಕ ಶಾಲಾ ಮಕ್ಕಳಿಗೆ 350 ಲ್ಯಾಪ್ಟಾಪ್ ಹಾಗೂ ಹೈಸ್ಕೂಲ್ ಮಕ್ಕಳಿಗೆ 1 ಸಾವಿರ ಟ್ಯಾಬ್ಗಳನ್ನು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ವಿತರಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, "ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆ ಇನ್ನಷ್ಟು ಉಪಕರಣಗಳನ್ನು ಕೊಡುತ್ತಾ ಹೋಗುತ್ತೇವೆ. ಡಿಜಿಟಲ್ ಕಲಿಕೆ ಉದ್ದೇಶದಿಂದ ಎಲ್ಲ ಶಾಲೆಗಳಲ್ಲಿ ಸ್ವಾರ್ಟ್ ಕ್ಲಾಸ್ ರೂಂಗಳನ್ನು ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.
ಬರುವ ಅಕ್ಟೋಬರ್ 7ಕ್ಕೆ ಪ್ರಧಾನಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಇಪ್ಪತ್ತು ವರ್ಷ ಆಗಲಿದೆ. ಹೀಗಾಗಿ ಅ. 7ರವರೆಗೂ ಈ ಸೇವಾ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಪ್ರಧಾನಿ ಮೋದಿ ಅವರ ಪ್ರೇರಣೆಯೊಂದಿಗೆ ನಾವೆಲ್ಲ ಒಳ್ಳೆಯ ಕೆಲಸ ಮಾಡೋಣ. ಈ ಉದ್ದೇಶಕ್ಕಾಗಿ 30 ಕಡೆ ನಮೋ ಆ್ಯಪ್ ಡೌನ್ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ಅಶ್ವಥ್ ನಾರಾಯಣ ಇದೇ ವೇಳೆ ಹೇಳಿದ್ದಾರೆ.