ಮಡಿಕೇರಿಯಲ್ಲಿ 52 ಅಡಿಯ ಬೃಹತ್ ಶಿವನ ಮೂರ್ತಿ ಪ್ರತಿಷ್ಠಾಪನೆ
ಮಡಿಕೇರಿ,ಮಾರ್ಚ್,04: ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಶಿವಾಯ ನಮಃ ಎಂಬ ಉದ್ಘೋಷಗಳು, ಸಹಸ್ರಾರು ಭಕ್ತರಲ್ಲಿ ಮೈವೆತ್ತ ಎಲ್ಲಿಲ್ಲದ ಉತ್ಸಾಹ, ಇವರ ಭಕ್ತಿಪೂರ್ವಕ ನಮನ ಸ್ವೀಕರಿಸಿದ ಶಿವ ಧರೆಗಿಳಿರುವುದು ಮಾತ್ರ ಬಾಕಿ ಇತ್ತು. ಈ ದೃಶ್ಯ ಕಂಡು ಬಂದದ್ದು ಮಡಿಕೇರಿಯಲ್ಲಿ.
ನಗರದ ಹೊರವಲಯದಲ್ಲಿರುವ ಪುಣ್ಯಸ್ಥಳ ಕರ್ಣಂಗೇರಿ ಕ್ಷೇತ್ರ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ 52ಅಡಿ ಎತ್ತರದ ಶಿವನ ಮೂರ್ತಿಯನ್ನು ಗುರುವಾರ ಪ್ರತಿಷ್ಠಾಪಿಸಲಾಗಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಸಾಂಪ್ರದಾಯಿಕ ಪೂಜಾ ಕೈಂಕರ್ಯದೊಂದಿಗೆ ಲೋಕಾರ್ಪಣೆ ಮಾಡಿದ್ದಾರೆ.[ಮಹಾಶಿವರಾತ್ರಿ : ಮಾ.4, 5ರಂದು ವಿಶೇಷ ಬಸ್ ಸೌಲಭ್ಯ]
ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ಈ ಶಿವನ ಮೂರ್ತಿಯನ್ನು ನಿರ್ಮಿಸಲು 19ಲಕ್ಷ ರೂ ತಗುಲಿದೆ. ಇದು ನಗರದ ಯುವ ಕಲಾವಿದ ಶಿಲ್ಪಿ ರವಿ ಅವರ ಕೈಚಳಕ, ತಾಳ್ಮೆಯಿಂದ ರೂಪಿತವಾಗಿದ್ದು, ಇದರ ರೂಪ, ರಚನೆಗೆ 10 ವರ್ಷ ತೆಗೆದುಕೊಳ್ಳಲಾಗಿದೆ.[ನಾಗೇಶ್ವರ, ಕಾಶಿ ವಿಶ್ವನಾಥ ಪೌರಾಣಿಕ ಹಿನ್ನೆಲೆ]
ಕಳೆದ ಮೂರು ವರ್ಷಗಳ ಹಿಂದೆ ಯುಗಾದಿಯಂದು ಪುಣ್ಯಕ್ಷೇತ್ರ ಕಾಶಿಯಿಂದ ಶಿವಲಿಂಗವನ್ನು ತಂದು ಭಕ್ತಾದಿಗಳ ಸಹಕಾರದಿಂದ ಪ್ರತಿಷ್ಠಾಪಿಸಲಾಗಿತ್ತು. ಈ ಸಂದರ್ಭದಲ್ಲಿ ಆಗಮಿಸಿದ ಸಹಸ್ರಾರು ಸಂಖ್ಯೆಯ ಭಕ್ತರು ಶಿವಮೂರ್ತಿಗೆ ನಮಸ್ಕರಿಸಿ ಧನ್ಯತಾ ಭಾವ ಅನುಭವಿಸಿದರು.[ನಂಜನಗೂಡು ದೇಗುಲದ ಕಿರಾತಾರ್ಜುನ ಮೂರ್ತಿಯ ಕಥೆ]
ಅಲ್ಲದೇ ಮಾರ್ಚ್ 7ರಂದು ಇರುವ ಮಹಾಶಿವರಾತ್ರಿ ಹಬ್ಬದ ಮೊದಲೇ ಶಿವಮೂರ್ತಿ ಪ್ರತಿಷ್ಠಾಪನೆಯಾಗಿರುವುದು ಮಡಕೇರಿ ಜನತೆಯ ಸಂತಸವನ್ನು ಇಮ್ಮಡಿಗೊಳಿಸಿದ್ದು, ಕಲಾವಿದ ರವಿಯವರನ್ನು ಜನ ಶ್ಲಾಘಿಸಿದರು.