ಜೂ.26 ರಂದು 50.23 ಕೋಟಿ ರೂಪಾಯಿಗಳ ಮೊತ್ತದ ಮಾದಕ ವಸ್ತುಗಳ ನಾಶ: ಬೊಮ್ಮಾಯಿ
ಬೆಂಗಳೂರು, ಜೂ. 25: 'ಅಂತಾರಾಷ್ಟ್ರೀಯ ಮಾದಕವಸ್ತು ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನ'ದ ಹಿನ್ನೆಲೆಯಲ್ಲಿ ರಾಜ್ಯ ಗೃಹ ಇಲಾಖೆ ಮಹತ್ವದ ತೀರ್ಮಾನ ಕೈಗೊಂಡಿದ್ದು, ಡ್ರಗ್ಸ್ ವಿರೋಧಿ ದಿನ (ಜೂ.26) ದಂದು ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ನಾಶಮಾಡಲು ತೀರ್ಮಾನ ಮಾಡಿದೆ. ಕಳೆದ ಒಂದು ವರ್ಷದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಡ್ರಗ್ಸ್ನ್ನು ಸಂಪೂರ್ಣವಾಗಿ ನಾಶ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಗಾಂಜಾ-ಅಫೀಮು, ಬ್ರೌನ್ ಶುಗರ್, ಹೆರಾಯಿನ್, ಚರಸ್, ಕೊಕೆನ್ ಸೇರಿದಂತೆ ಒಟ್ಟು ಹನ್ನೆರಡು ಪ್ರಕಾರದ 50.23 ಕೋಟಿ ರೂಪಾಯಿಗಳ ಮೊತ್ತದ ಮಾದಕ ವಸ್ತುಗಳನ್ನು ನಾಶ ಪಡಿಸಲಾಗುವುದು ಎಂದು ವಿಧಾನಸೌಧದಲ್ಲಿ ಹೇಳಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲ ರಾಜ್ಯದಲ್ಲಿ ವಶಪಡಿಸಿಕೊಳ್ಳಲಾಗಿರುವ ಮಾದಕ ವಸ್ತುಗಳು ಅದರಲ್ಲಿ ಸೇರಿವೆ. 2020ನೇ ವರ್ಷದಲ್ಲಿ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಒಟ್ಟು 4,066 ಪ್ರಕರಣಗಳನ್ನು ದಾಖಲಿಸಿ ಕೊಂಡು 5,291 ಜನರನ್ನು ಬಂಧಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಕುರಿತು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಕೊಟ್ಟಿದ್ದ ಹೇಳಿಕೆಗೆ ಬಿಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ.
ಆರೋಪಿಗಳಿಗೆ ಬೇಗನೆ ಬೇಲ್ ಸಿಗಲ್ಲ
ದೇಶದಲ್ಲಿ ಮೊಟ್ಟ ಮೊದಲ ಬಾರಿ PIT NDPS ಕಾಯಿದೆ ( ಪ್ರಿವೆನಶನ್ ಆಫ್ ಇಲ್ಲಿಸಿಟ್ ಟ್ರಾಫಿಕಿಂಗ್ ನಾರ್ಕೋಟಿಕ್ ಡ್ರಗ್ಸ್ ಸೈಕ್ಯಾಟ್ರಿಕ್ ಸಬಸ್ಟನ್ಸ್ ) ಅಡಿ ಡ್ರಗ್ಸ್ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಕಾಯಿದೆ ಅಡಿ ಪ್ರಕರಣ ದಾಖಲಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಇದು ಒಂದು ರೀತಿ ಗೂಂಡಾ ಕಾಯಿದೆ ಇದ್ದಂತೆ. ಆರೋಪಿಗಳಿಗೆ ಬೇಗನೆ ಬೇಲ್ ಸಿಗುವುದಿಲ್ಲ. ವಿದೇಶಿಗರು ಸೇರಿದಂತೆ ಹಲವರನ್ನು ಈ ಕಾಯಿದೆ ಅಡಿ ಬಂಧಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ನ್ಯಾಷನಲ್ ಲಾ ಸ್ಕೂಲ್ ಜತೆ ಚರ್ಚೆ
ಎನ್ಡಿಪಿಎಸ್ ಕಾಯಿದೆಯನ್ನು ಮತ್ತಷ್ಟು ಬಿಗಿ ಗೊಳಿಸಲಾಗುವುದು. ಅದಕ್ಕಾಗಿ ನ್ಯಾಷನಲ್ ಲಾ ಸ್ಕೂಲ್ ಜತೆ ಮಾತುಕತೆ ನಡೆಯುತ್ತಿದೆ. ಬರುವ ಅಧಿವೇಶನದಲ್ಲಿ ಈ ಕಾಯಿದೆಗೆ ನಿಯಮಗಳನ್ನು ರೂಪಿಸಲಾಗುವುದು. ಜೊತೆಗೆ ಸೆಲೆಬ್ರಿಟಿಗಳ ಡ್ರಗ್ಸ್ ಪ್ರಕರಣದ ತನಿಖೆ ಮುಗಿದಿದೆ. ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಕಳೆದ ವರ್ಷ ನಮ್ಮ ಪೋಲಿಸರು ಉತ್ತಮ ಕೆಲಸ ಮಾಡಿದ್ದಾರೆ. ಅವರ ಕೆಲಸದ ಬಗ್ಗೆ ಮೆಚ್ಚುಗೆ ಇದೆ. ಒಂದೇ ವರ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾದಕವಸ್ತು ಅಕ್ರಮ ಸಾಗಣೆ ಜಾಲಗಳನ್ನು ಬೇಧಿಸಿದ್ದಾರೆ ಎಂದರು.
ಎಚ್ಡಿಕೆ ಒತ್ತಾಯಕ್ಕೆ ಉತ್ತರ
ಇನ್ನು ಈ ಕೋವಿಡ್ ಸಂದರ್ಭದಲ್ಲಿ ಅಧಿವೇಶನ ಬೇಡ ಎಂದು ವಿಷಯ ಸಮಿತಿ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರಿಗೆ ವರದಿ ಸಲ್ಲಿಸಿದೆ. ಈಗ ಡೆಲ್ಟಾ, ಡೆಲ್ಟಾ ಪ್ಲಸ್ ಕೊರೊನಾ ರೂಪಾಂತರ ತಳಿ ಪತ್ತೆಯಾಗುತ್ತಿದೆ. ಈಗಿನ ಕೋವಿಡ್ ಸ್ಥಿತಿ ನೋಡಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಸಂಪುಟ ಸದಸ್ಯರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಮಾಜಿ ಸಿಂ ಕುಮಾರಸ್ವಾಮಿ ಅವರು ತಕ್ಷಣ ಅಧಿವೇಶನ ಕರೆಯುವಂತೆ ಮಾಡಿರುವ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
Recommended Video
ಕೊರೊನಾ ಕಾಲದಲ್ಲಿ ಪರೀಕ್ಷೆ ಇಲ್ಲ: ಬೊಮ್ಮಾಯಿ
ಇನ್ನು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರ ಹೇಳಿಕೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ತಿರುಗೇಟು ಕೊಟ್ಟಿದ್ದಾರೆ. "ನಾನು ಅರ್ಜಿಯನ್ನೇ ಹಾಕಿಲ್ಲ, ಇನ್ನು ಪರೀಕ್ಷೆ ಬರೆಯುವುದು ಬಿಡಿ ದೂರದ ಮಾತು. ಈ ಕೊರೊನಾ ಸಂಕಷ್ಟದ ಕಾಲದಲ್ಲಿ ಯಾವುದೇ ಪರೀಕ್ಷೆ ಇಲ್ಲ. ಜೊತೆಗೆ ಪರೀಕ್ಷೆ ಇರುವುದು ಕೂಡ ನನಗೇ ಗೊತ್ತಿಲ್ಲ" ಬೊಮ್ಮಾಯಿ ಹೇಳಿದ್ದಾರೆ.
ಅದಕ್ಕೂ ಮೊದಲು ನಾಯಕತ್ವ ಬದಲಾವಣೆ ಕುರಿತು ಮಾತನಾಡಿದ್ದ ಸಚಿವ ಸಿ.ಪಿ. ಯೋಗೇಶ್ವರ್ ಅವರು, "ನಾವು ಈಗಾಗಲೇ ಪರೀಕ್ಷೆ ಬರೆದಿದ್ದೇವೆ. ಅಲ್ಲಿ ಎಲ್ಲವನ್ನೂ ವಿವರಿಸಿದ್ದೇವೆ. ನೋಡೋಣ ಏನಾಗುತ್ತದೆಯೋ" ಎಂದಿದ್ದರು.