ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ 5 ಕಾರಣಗಳು
ಬೆಂಗಳೂರು, ಫೆಬ್ರವರಿ 16 : ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಜೆಡಿಎಸ್ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ಹೆಬ್ಬಾಳ, ಬೀದರ್ ಮತ್ತು ದೇವದುರ್ಗ ಸೇರಿ ಎಲ್ಲಾ ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ಉಪ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮೊದಲು ಹೇಳಿದ್ದ ಜೆಡಿಎಸ್ ನಂತರ, ದೇವದುರ್ಗ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು. ಕೊನೆ ಕ್ಷಣದಲ್ಲಿ ಹೆಬ್ಬಾಳ ಮತ್ತು ಬೀದರ್ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕುತೂಹಲ ಮೂಡಿಸಿತ್ತು. [ಹೆಬ್ಬಾಳದಲ್ಲಿ ಕಾಂಗ್ರೆಸ್ ಬೀಳಲು ಏಳೇ 7 ಕಾರಣಗಳು!]
ದೇವದುರ್ಗ ಹೊರತು ಪಡಿಸಿದರೆ ಉಳಿದ ಎರಡು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು 5 ಸಾವಿರ ಮತಗಳನ್ನು ಗಳಿಸಲು ವಿಫಲರಾಗಿದ್ದಾರೆ. ದೇವದುರ್ಗ ಕ್ಷೇತ್ರದ ಅಭ್ಯರ್ಥಿ 9,156 ಮತಗಳನ್ನು ಪಡೆದರೂ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. [ಉಪ ಚುನಾವಣೆ ಫಲಿತಾಂಶ : ಕ್ಷಣ-ಕ್ಷಣದ ಮಾಹಿತಿ]
ಪಕ್ಷದ ನಾಯಕರ ನಡುವಿನ ಅಸಮಾಧಾನ, ಶಾಸಕರು ಮತ್ತು ವರಿಷ್ಠರ ನಡುವಿನ ವಾಗ್ದಾಳಿಗಳು, ಪಕ್ಷದ ಆಂತರಿಕ ಭಿನ್ನಮತ ಜೆಡಿಎಸ್ ಪಕ್ಷಕ್ಕೆ ಹಿನ್ನಡೆ ಉಂಟಾಗುವಂತೆ ಮಾಡಿದೆ. ನಮಗೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯೇ ನಮಗೆ ಮುಖ್ಯ ಎಂದು ಜೆಡಿಎಸ್ ನಾಯಕರು ಹೇಳಿದ್ದಾರೆ. ಜೆಡಿಎಸ್ ಹಿನ್ನಡೆಗೆ ಕಾರಣವೇನು ಚಿತ್ರಗಳಲ್ಲಿ ನೋಡಿ....
ಠೇವಣಿ ಕಳೆದುಕೊಂಡ ಜೆಡಿಎಸ್
ಹೆಬ್ಬಾಳ, ಬೀದರ್ ಮತ್ತು ದೇವದುರ್ಗ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಯಾವ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳಿಗೆ 10 ಸಾವಿರ ಮತಗಳನ್ನು ಗಳಿಸಲು ಸಾಧ್ಯವಾಗಿಲ್ಲ.
ಜೆಡಿಎಸ್ ಅಭ್ಯರ್ಥಿಗಳು ಗಳಿಸಿದ ಮತಗಳು
ದೇವದುರ್ಗದಲ್ಲಿ ಕರಿಯಮ್ಮ ಅವರು 9,156 ಮತಗಳನ್ನು ಪಡೆದರೆ, ಬೀದರ್ನಲ್ಲಿ ಎಂ.ಡಿ.ಅಜಾಯ್ ಖಾನ್ ಅವರು 4,421 ಮತಗಳನ್ನು ಪಡೆದಿದ್ದಾರೆ. ಹೆಬ್ಬಾಳದಲ್ಲಿ ಇಸ್ಮಾಯಿಲ್ ಷರೀಫ್ ಅವರು 3,666 ಮತ ಪಡೆದಿದ್ದಾರೆ. ಆದರೆ, ಯಾವ ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳಿಗೆ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿತ್ತು ಜೆಡಿಎಸ್
ಉಪ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮೊದಲು ಹೇಳಿದ್ದ ಜೆಡಿಎಸ್ ನಂತರ, ದೇವದುರ್ಗ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು. ಕೊನೆ ಕ್ಷಣದಲ್ಲಿ ಹೆಬ್ಬಾಳ ಮತ್ತು ಬೀದರ್ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕುತೂಹಲ ಮೂಡಿಸಿತ್ತು.
ಪಕ್ಷದ ನಾಯಕರ ವಿರುದ್ಧ ಅನ್ಸಾರಿ ಅಸಮಾಧಾನ
ಗಂಗಾವತಿ ಕ್ಷೇತ್ರದ ಶಾಸಕ ಇಕ್ಬಾಲ್ ಅನ್ಸಾರಿ ಅವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಬಹಿರಂಗವಾಗಿ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 'ಎಚ್.ಡಿ.ಕುಮಾರಸ್ವಾಮಿ ಅವರು ಅಲ್ಪಸಂಖ್ಯಾತ ನಾಯಕರನ್ನು ಮುಗಿಸಲು ಹುನ್ನಾರ ನಡೆಸಿದ್ದಾರೆ' ಎಂದು ಆರೋಪಿಸಿರುವ ಅನ್ಸಾರಿ ಅವರು, 'ಜೆಡಿಎಸ್ ಪಕ್ಷದೊಳಗಿನ ಭಿನ್ನಮತಕ್ಕೆ ಕುಮಾರಸ್ವಾಮಿ ಅವರೇ ನೇರವಾಗಿ ಹೊಣೆ' ಎಂದು ದೂರಿದ್ದಾರೆ.
ಜಮೀರ್ ಅಹಮದ್ ಖಾನ್ ಅಸಮಾಧಾನ
ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಹೆಬ್ಬಾಳ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಜಮೀರ್ ಅವರೇ ಅಂತಿಮ ನಿರ್ಧಾರ ಕೈಗೊಂಡಿದ್ದರು. ಆದರೆ, ಪ್ರಚಾರದಿಂದ ದೂರ ಉಳಿದಿದ್ದರು. ಉಪ ಚುನಾವಣೆಯಲ್ಲಿ ಇಸ್ಮಾಯಿಲ್ ಷರೀಫ್ ಅವರು ಪಡೆದ ಮತಗಳು ಕೇವಲ 3,666.