5 ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣಗಳು
Recommended Video
ಬೆಂಗಳೂರು, ನವೆಂಬರ್ 06 : 5 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕರ್ನಾಟಕ ಬಿಜೆಪಿಗೆ ಮುಖಭಂಗವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತವರು ಜಿಲ್ಲೆ ಶಿವಮೊಗ್ಗದಲ್ಲಿ ಪುತ್ರ ಬಿ.ವೈ.ರಾಘವೇಂದ್ರನನ್ನು ಗೆಲ್ಲಿಸಿ ಪಕ್ಷ ಒಂದು ಸ್ಥಾನದಲ್ಲಿ ಜಯಗಳಿಸುವಂತೆ ಮಾಡಿದ್ದಾರೆ.
ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಹಲವು ದಿನಗಳಿಂದ ಕೇಳಿಬರುತ್ತಿರುವ ಮಾತು. ಉಪ ಚುನಾವಣೆ ಫಲಿತಾಂಶದ ಬಳಿಕ ಈ ಮಾತು ಪುನಃ ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸೋಲಿಗೆ ರಾಜ್ಯ ನಾಯಕರು ಕಾರಣ ಎಂದು ಲೋಕಸಭೆ, ವಿಧಾನಸಭಾ ಕ್ಷೇತ್ರದ ನಾಯಕರು ಆರೋಪ ಮಾಡುತ್ತಿದ್ದಾರೆ.
5 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ : ಯಾರಿಗೆ ಎಷ್ಟು ಮತಗಳು?
ಶಿವಮೊಗ್ಗದಲ್ಲಿ ಬಿಜೆಪಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಗೆಲುವಿನ ಅಂತರ 52 ಸಾವಿರ ಮಾತ್ರ. ಜಮಖಂಡಿಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಸೋತರು. ಬಳ್ಳಾರಿಯಲ್ಲಿ ಬಿಜೆಪಿ ನಾಯಕರ ಪ್ರತಿಷ್ಠೆ ಮಣ್ಣುಪಾಲಾಯಿತು.
ಉಪ ಚುನಾವಣೆ ಫಲಿತಾಂಶ : ಸತ್ಯವಾಯಿತು ಗುಪ್ತಚರ ಇಲಾಖೆ ವರದಿ
ಮಂಡ್ಯ ಮತ್ತು ರಾಮನಗರದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ ಉಂಟಾಗಿದೆ. ಹಾಗಾದರೆ ಬಿಜೆಪಿಯ ಸೋಲಿಗೆ ಕಾರಣವೇನು? ಉಪ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದಕ್ಕೆ 5 ಕಾರಣಗಳನ್ನು ಪಟ್ಟಿ ಮಾಡಬಹುದಾಗಿದೆ......
ಶಿವಮೊಗ್ಗದಲ್ಲಿ ಕಾಂಗ್ರೆಸ್-ಜೆಡಿಎಸ್ ಸೋಲಿಗೆ 5 ಕಾರಣಗಳು
ಮಂಡ್ಯ ಕ್ಷೇತ್ರದ ಸೋಲು
ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರು 2,44,404 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ 324943 ಮತಗಳ ಅಂತರದ ಗೆಲುವು ಸಿಕ್ಕಿದೆ. ಅಭ್ಯರ್ಥಿ ಆಯ್ಕೆಯೇ ಮಂಡ್ಯದಲ್ಲಿ ಸೋಲಿಗೆ ಪ್ರಮುಖ ಕಾರಣವಾಗಿದೆ.
ನಿವೃತ್ತ ಕೆಎಎಸ್ ಅಧಿಕಾರಿ ಡಾ.ಸಿದ್ದರಾಮಯ್ಯ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗಲೇ ಅವರು ಕ್ಷೇತ್ರದ ಜನರಿಗೆ ಪರಿಚಯವಿಲ್ಲ. ಯಾವ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆ ಮಾಡಿದ್ದೀರಿ?ಎಂಬ ಪ್ರಶ್ನೆ ಹುಟ್ಟಿತ್ತು. ಈ ಅಸಮಾಧಾನ ಚುನಾವಣಾ ಫಲಿತಾಂಶದ ಮೇಲೆಯೂ ಪ್ರಭಾವ ಬೀರಿದೆ.
ರಾಮನಗರದಲ್ಲಿ ಮುಖಭಂಗ
'ರಾಮನಗರದಲ್ಲಿನ ಸೋಲಿಗೆ ರಾಜ್ಯ ನಾಯಕರೇ ಕಾರಣ' ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ ಆರೋಪಿಸಿದ್ದಾರೆ. ಹೌದು, ಚುನಾವಣೆಗೆ ಎರಡು ದಿನ ಇರುವಾಗ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದರು. ಇದರಿಂದಾಗಿ ಪಕ್ಷದ ನಾಯಕರು ತೀವ್ರ ಮುಜುಗರ ಅನುಭವಿಸಿದರು. ಅಭ್ಯರ್ಥಿ ಆಯ್ಕೆ, ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ನಾಯಕರಿಗೆ ಸರಿಯಾದ ಮಾಹಿತಿಯೇ ಇರಲಿಲ್ಲ ಎಂಬುದು ಸಾಬೀತಾಯಿತು. ಇದರಿಂದಾಗಿ ಕ್ಷೇತ್ರವನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಬಿಟ್ಟುಕೊಡಬೇಕಾಯಿತು.
ಬಿ.ಶ್ರೀರಾಮುಲು ಏಕಾಂಗಿ
ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಶಾಸಕ ಬಿ.ಶ್ರೀರಾಮುಲು ಅವರು ಸಹೋದರಿ ಜೆ.ಶಾಂತ ಅವರನ್ನು ಗೆಲ್ಲಿಸಲು ಏಕಾಂಗಿಯಾಗಿ ಹೋರಾಟ ನಡೆಸಿದರು. ಕಾಂಗ್ರೆಸ್ ಸಚಿವರು, ಶಾಸಕರು, ಸಂಸದರು ಸೇರಿ 52 ಜನರ ತಂಡವನ್ನು ಪ್ರಚಾರಕ್ಕಾಗಿ ಬಳ್ಳಾರಿಗೆ ಕರೆತಂದಿತ್ತು. ಆದರೆ, ಬಿಜೆಪಿಯ ರಾಜ್ಯ ನಾಯಕರು ಅತ್ತ ಸುಳಿಯಲಿಲ್ಲ. ಪಕ್ಷದ ಪರವಾಗಿ ಮತಯಾಚನೆ ಮಾಡಲಿಲ್ಲ.
ಜಮಖಂಡಿಯಲ್ಲಿ ಸೋಲು
ಕಳೆದ 2 ಚುನಾವಣೆಯಲ್ಲಿ ಜಮಖಂಡಿಯಲ್ಲಿ ಸೋತಿದ್ದ ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಈ ಬಾರಿ ಗೆಲುವು ಸಾಧಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಬಿಜೆಪಿ ನಾಯಕರಿಂದಾಗಿಯೇ ಅವರು ಸೋಲುಕಂಡಿದ್ದಾರೆ. ಶ್ರೀಕಾಂತ್ ಕುಲಕರ್ಣಿ ಅವರನ್ನು ಏಕಾಂಗಿಯಾಗಿ ಮಾಡಲಾಯಿತು. ಕ್ಷೇತ್ರದ ಉಸ್ತುವಾರಿ ನೀಡಿದ್ದ ನಾಯಕರೇ ಪ್ರಚಾರ ಮಾಡಲು ಆಸಕ್ತಿ ತೋರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಮೇಲಿದ್ದ ಅನುಕಂಪದ ಅಲೆಯನ್ನು ತಪ್ಪಿಸಲು ಬೇಕಾದ ತಂತ್ರವನ್ನು ರೂಪಿಸಲಿಲ್ಲ.
ನಾಯಕರಲ್ಲಿ ಒಗ್ಗಟಿನ ಕೊರತೆ
ಸ್ವತಃ ಕೆಲವು ಬಿಜೆಪಿ ನಾಯಕರೇ ಒಪ್ಪಿಕೊಳ್ಳುವ ಪ್ರಕಾರ ಪಕ್ಷದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಎಲ್ಲರೂ ಒಂದಾಗಿ ಮೈತ್ರಿ ಸರ್ಕಾರದ ವಿರುದ್ಧವಾಗಿ ಹೋರಾಟ ಮಾಡಬೇಕು, ಚುನಾವಣೆಯಲ್ಲಿ ರಣೋತ್ಸಾಹದಿಂದ ಕೆಲಸ ಮಾಡಬೇಕು. ಆದರೆ, ಅದು ಕಾಣುತ್ತಿಲ್ಲ. ಯಾವ ನಾಯಕರು ಸಹ ಜವಾಬ್ದಾರಿಗಳನ್ನು ತೆಗೆದುಕೊಂಡು ಕೆಲಸ ಮಾಡಲು ಸಿದ್ಧರಿಲ್ಲ. ಇದರಿಂದಾಗಿ ಉಪ ಚುನಾವಣೆಯಲ್ಲಿ ಸೋಲಾಗಿದೆ.