'ಕನ್ನಡಕ್ಕೆ ಬಂದ 8 ಜ್ಞಾನಪೀಠದ ಪೈಕಿ ನೇರವಾಗಿ ಬಂದವು ಐದು ಮಾತ್ರ'
ಬೆಂಗಳೂರು, ಜುಲೈ 31: ಕನ್ನಡಕ್ಕೆ ಬಂದ ಎಂಟು ಜ್ಞಾನಪೀಠಗಳ ಪೈಕಿ ಐದು ಮಾತ್ರ ನೇರವಾಗಿ ಬಂದವು. ಉಳಿದವು ಅಡ್ಡ ದಾರಿ ಹಿಡಿದು ಬಂದವು ಎನ್ನುವ ಮೂಲಕ ಹಿರಿಯ ಲೇಖಕರಾದ ಶಾ.ಮಂ. ಕೃಷ್ಣರಾಯರು ಜ್ಞಾನಪೀಠ ಪ್ರಶಸ್ತಿ ಬಗ್ಗೆ ಮತ್ತೆ ವಿವಾದವನ್ನು ಸೃಷ್ಟಿಸಿದ್ದಾರೆ.
ಡಾ. ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ
ಕರ್ನಾಟಕ ಲೇಖಕಿಯರ ಸಂಘದಿಂದ ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜಾತಿ, ಸಮುದಾಯ ಹಾಗೂ ಪ್ರಾದೇಶಿಕತೆ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ. ಈ ಕಾರಣಕ್ಕೆ ಪ್ರತಿಭೆ ಇರುವ ಲೇಖಕರು ಪ್ರಶಸ್ತಿಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪತ್ರಕರ್ತೆಯಾದ ಎಚ್.ಸಿ.ಭುವನೇಶ್ವರಿ ಅವರಿಗೆ ಶ್ರೀಲೇಖಾ ಪ್ರಶಸ್ತಿ, ಲೇಖಕಿ ಇಂದಿರಾ ಹಾಲಂಬಿ ಅವರಿಗೆ ಪ್ರೇಮಾಭಟ್ ಮತ್ತು ಎ.ಎಸ್.ಭಟ್ ದತ್ತಿ ಪ್ರಶಸ್ತಿ ನೀಡಲಾಯಿತು.
ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಈ ಎಂಟು ಮಂದಿಗೆ ಜ್ಞಾನಪೀಠ ಗೌರವ ಲಭಿಸಿದೆ.
ಆದರೆ, ಅಡ್ಡದಾರಿಯಿಂದ ಬಂದ 3 ಪ್ರಶಸ್ತಿ ಯಾವುವು ಎಂಬುದನ್ನು ರಾಯರು ಹೇಳಲಿಲ್ಲ. ಅವು ಯಾವುವು ಎಂಬುದನ್ನು ಜನರ ಊಹೆಗೆ ಬಿಟ್ಟಿದ್ದಾರೆ. ನೀವೇ ಊಹಿಸಿ.