ಯಡಿಯೂರಪ್ಪಗೆ ತಾತ್ಕಾಲಿಕ ನೆಮ್ಮದಿ ನೀಡಿದ 5 ಪ್ರಕರಣಗಳು
ಬೆಂಗಳೂರು, ಡಿಸೆಂಬರ್ 05 : ಮಾಜಿ ಮುಖ್ಯಮಂತ್ರಿ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ನೆಮ್ಮದಿ ನೀಡಿದೆ. ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ 5 ಡಿನೋಟಿಫಿಕೇಷನ್ ಪ್ರಕರಣಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಶಿವಮೊಗ್ಗ ಮೂಲದ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಮಂಗಳವಾರ ಇತ್ಯರ್ಥ ಪಡಿಸಿದೆ. ರಾಜ್ಯಪಾಲರ ಒಪ್ಪಿಗೆ ಪಡೆದು ಪುನಃ ದೂರು ದಾಖಲು ಮಾಡಬಹುದು ಎಂದು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಯಡಿಯೂರಪ್ಪಗೆ ರಿಲೀಫ್, 5 ಕೇಸು ವಜಾಗೊಳಿಸಿದ ಸುಪ್ರೀಂಕೋರ್ಟ್
ಯಡಿಯೂರಪ್ಪ ವಿರುದ್ಧ ಸಿರಾಜಿನ್ ಬಾಷಾ ಅವರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಯಡಿಯೂರಪ್ಪ ಅವರು ಈ ದೂರನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ದೂರುಗಳನ್ನು ವಜಾಗೊಳಿಸಿತ್ತು.
ಎರಡು ಪ್ರಕರಣಗಳಲ್ಲಿ ಬಿ.ಎಸ್.ಯಡಿಯೂರಪ್ಪ ಖುಲಾಸೆ
ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿರಾಜಿನ್ ಬಾಸಷಾ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ಇತ್ಯರ್ಥ ಪಡಿಸಿರುವ ಕೋರ್ಟ್, ರಾಜ್ಯಪಾಲರ ಒಪ್ಪಿಗೆ ಪಡೆದು ಪುನಃ ದೂರು ದಾಖಲಿಸಬಹುದು ಎಂದು ಹೇಳಿದೆ. ಆದ್ದರಿಂದ, ಪ್ರಕರಣ ರಾಜ್ಯಪಾಲರ ಅಂಗಳಕ್ಕೆ ಬಂದು ತಲುಪಿದೆ.
ಲೋಕಸಭೆ ಚುನಾವಣೆ : ಕರ್ನಾಟಕ ಬಿಜೆಪಿಯಿಂದ ಪ್ರಭಾರಿಗಳ ನೇಮಕ
ಲೋಕಾಯುಕ್ತಕ್ಕೆ ದೂರು
ಶಿವಮೊಗ್ಗ ಮೂಲದ ವಕೀಲ ಸಿರಾಜಿನ್ ಬಾಷಾ ಅವರು 2010ರಲ್ಲಿ ಯಡಿಯೂರಪ್ಪ ವಿರುದ್ಧ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ 5 ದೂರುಗಳನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 2011ರಲ್ಲಿ ಅಂದಿನ ರಾಜ್ಯಪಾಲ ಎಚ್.ಆರ್.ಭರದ್ವಾಜ್ ಅವರು ತನಿಖೆಗೆ ಒಪ್ಪಿಗೆ ನೀಡಿದ್ದರು. ನಂತರ ಯಡಿಯೂರಪ್ಪ ಈ ದೂರುಗಳನ್ನು ರದ್ದುಗೊಳಿಸುವಂತೆ ಹೈಕೋರ್ಟ್ಗೆ ಅರ್ಜಿ ಹಾಕಿದ್ದರು.
ಪ್ರಕರಣ - 1
ರಾಚೇನಹಳ್ಳಿಯಲ್ಲಿ 1 ಎಕರೆ 2 ಗುಂಟೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬುದು ಆರೋಪ. ವೈಯಾಲಿಕಾವಲ್ ಸೊಸೈಟಿಗೆ ಸೇರಿದ್ದ ಜಾಗವನ್ನು ರಸ್ತೆ ನಿರ್ಮಾಣಕ್ಕೆ ಎಂದು ನೋಟಿಫೈ ಮಾಡಿ, ಜಾಗವನ್ನು ತಮ್ಮ ಕುಟುಂಬದ ಒಡೆತನದ ಧವಳಗಿರಿ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್.ಗೆ ಡಿನೋಟಿಫೈ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಆರ್.ಎನ್.ಸೋಹನ್ ಕುಮಾರ್ ಸೇರಿದಂತೆ ಇತರರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.
ಪ್ರಕರಣ - 2
ಅರೆಕೆರೆಯಲ್ಲಿ 2.5 ಎಕರೆ ಭೂಮಿಯನ್ನು ಬೇನಾಮಿ ಹೆಸರಿಗೆ ಡಿನೋಟಿಫೈ ಮಾಡಿದ ಆರೋಪವೂ ಇದೆ. ದೇವರಚಿಕ್ಕನಹಳ್ಳಿಯಲ್ಲಿ ಕೆ.ಮಂಜುನಾಥ್ ಅವರಿಗೆ 1.7 ಎಕರೆ, ಗೆದ್ದಲಹಳ್ಳಿಯಲ್ಲಿ ಮಂಜುನಾಥ್ ಮತ್ತು ಶಿವಪ್ಪ ಅವರಿಗೆ 4 ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿಕೊಟ್ಟಿದ್ದಾರೆ ಎಂಬುದು ಆರೋಪ. ಈ ಪ್ರಕರಣದಲ್ಲಿ ಯಡಿಯೂರಪ್ಪ, ಎನ್.ಅಕ್ಕಮಹಾದೇವಿ, ಎನ್.ಎಸ್. ಮಹಾಬಲೇಶ್ವರ, ಸತ್ಯ ಕುಮಾರಿ, ಮೋಹನ್ ರಾಜ್ ಸೇರಿದಂತೆ ಹಲವರು ಆರೋಪಿಗಳಾಗಿದ್ದರು.
ಪ್ರಕರಣ - 3
ರಾಚೇನಹಳ್ಳಿಯಲ್ಲಿ 9 ಎಕರೆ ಜಾಗವನ್ನು ಬೇನಾಮಿ ಹೆಸರಿಗೆ ಡಿನೋಟಿಫೈ ಮಾಡಿರುವುದು. ಉತ್ತರಹಳ್ಳಿಯಲ್ಲಿ ಹೇಮಚಂದ್ರ ಸಾಗರ್ ಅವರಿಗೆ 10 ಎಕರೆ ಜಾಗವನ್ನು ಡಿನೋಟಿಫೈ ಮಾಡಿರುವ ಆರೋಪ ಇತ್ತು. ಈ ಪ್ರಕರಣದಲ್ಲಿ ಯಡಿಯೂರಪ್ಪ, ಪ್ರವೀಣ್ ಚಂದ್ರ, ಹೇಮಚಂದ್ರ ಸಾಗರ್, ನಮ್ರತಾ ಶಿಲ್ಪಿ, ಆರ್.ಸುಗುಣಾ ಸೇರಿದಂತೆ ಹಲವಾರು ಜನರು ಆರೋಪಿಗಳಾಗಿದ್ದರು.
ಪ್ರಕರಣ - 4
ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಪ್ರಕಾಶ್ ಶೆಟ್ಟಿ ಎಂಬುವವರಿಗೆ 3.35 ಎಕರೆ ಜಾಗವನ್ನು ಡಿನೋಟಿಫಿಕೇಷನ್ ಮಾಡಿಕೊಟ್ಟ ಆರೋಪ ಕೇಳಿಬಂದಿತ್ತು. ಶ್ರೀರಾಂಪುರದಲ್ಲಿ ಡಾ.ಬಿ.ಆರ್.ಶೆಟ್ಟಿಗೆ 11.25 ಎಕರೆ ಅಕ್ರಮವಾಗಿ ನೋಟಿಫೈ ಮಾಡಿಕೊಟ್ಟಿದ್ದರು ಎಂಬುದು ಆರೋಪ. ಈ ಪ್ರಕರಣದಲ್ಲಿ ಧವಳಗಿರಿ ಪ್ರಾಪರ್ಟೀಸ್, ಆದರ್ಶ ಡೆವಲಪರ್ಸ್, ಕರುಣೇಶ್ ಎಂಬುವವರು ಆರೋಪಿಗಳಾಗಿದ್ದರು.
ಪ್ರಕರಣ - 5
ನಾಗರಭಾವಿಯಲ್ಲಿ 5.13 ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂಬುದು ಆರೋಪವಾಗಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಬಿ.ವೈ.ರಾಘವೇಂದ್ರ ಹಾಗೂ ಭಾರತಿ ಶೆಟ್ಟಿ ಅವರಿಗೆ ಅಕ್ರಮವಾಗಿ ನಿವೇಶನ ನೀಡಿದ ಆರೋಪವೂ ಇತ್ತು. ಆರ್.ಎಂ.ವಿ.ಲೇಔಟ್ನಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ ಆರೋಪವೂ ಇತ್ತು.