ಜಾರಕಿಹೊಳಿ ಸಹೋದರರು ಬಿಜೆಪಿ ಸೇರಿದರೆ ಆಗುವ 5 ಲಾಭಗಳು!
Recommended Video
ಬೆಂಗಳೂರು, ಸೆಪ್ಟೆಂಬರ್ 14 : ಜಾರಕಿಹೊಳಿ ಸಹೋದರರು....ಸದ್ಯ, ಕರ್ನಾಟಕದ ರಾಜಕಾರಣದಲ್ಲಿ ಇವರ ಬಗ್ಗೆಯೇ ಮಾತು. ಬೆಳಗಾವಿಯ ಈ ಸಹೋದರರ ಬಗ್ಗೆ ದೆಹಲಿಯಲ್ಲಿಯೂ ಚರ್ಚೆ ನಡೆಯುತ್ತಿದೆ. ಇವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಜಾರಕಿಹೊಳಿ ಕರ್ನಾಟಕ ರಾಜಕೀಯದಲ್ಲಿ ಪ್ರಭಾವಿ ಕುಟುಂಬ. ಕುಟುಂಬದ ಮೂವರು ವಿವಿಧ ಪಕ್ಷಗಳ ಮೂಲಕ ರಾಜಕಿಯದಲ್ಲಿ ಸಕ್ರಿಯರಾಗಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಪೌರಾಡಳಿತ ಸಚಿವರು.
ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ?, ಕಾಂಗ್ರೆಸ್ ಹೊಸ ತಂತ್ರ
ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ, ಯಮಕನಮರಡಿ ಕ್ಷೇತ್ರದ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಿಜೆಪಿಯಲ್ಲಿದ್ದಾರೆ. ಈಗ ಎಲ್ಲರೂ ಒಂದೇ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಉದ್ಯಮ, ರಾಜಕೀಯ : ಜಾರಕಿಹೊಳಿ ಸಹೋದರರ ಪ್ರಭಾವವಿದು
ಸತೀಶ್ ಜಾರಕಿಹೊಳಿ ಅವರು ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಇನ್ನೂ 15 ದಿನ ಕಾದು ನೋಡಿ ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಕುತೂಹಲ ಹುಟ್ಟು ಹಾಕಿದ್ದಾರೆ. ಜಾರಕಿಹೊಳಿ ಸಹೋದರರು ಬಿಜೆಪಿಗೆ ಸೇರಿದರೆ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ....
ಬಿಜೆಪಿ ಸೇರಲು 4 ಷರತ್ತು ಹಾಕಿದ ರಮೇಶ್ ಜಾರಕಿಹೊಳಿ!
ಲಾಭ - 1
ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಅವರು ಬಿಜೆಪಿಗೆ ಹೋಗಿ ಸರ್ಕಾರ ರಚನೆಯಾದರೆ. ಇಬ್ಬರಲ್ಲಿ ಒಬ್ಬರು ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರು ಈಗಾಗಲೇ ಬಿಜೆಪಿಯಲ್ಲಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗಬಹುದು.
ಆದರೆ, ಜಾರಕಿಹೊಳಿ ಸಹೋದರರು ಎಂದಿಗೂ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ. ಉದ್ಯಮಿಗಳಾಗಿರುವ ಅವರು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆ ಮತ್ತು ರಾಜ್ಯ ರಾಜಕಾರಣದಲ್ಲಿ ಪ್ರಭಾವ ಹೊಂದಿದ್ದಾರೆ.
ಲಾಭ - 2
ಜಾರಕಿಹೊಳಿ ಸಹೋದರರು ತಮ್ಮ ಜೊತೆ 11 ಶಾಸಕರು ಇದ್ದಾರೆ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಬಿಜೆಪಿ ಸರ್ಕಾರ ರಚನೆಯಾಗಲು ಇವರು ಸಹಕಾರ ನೀಡಿದರೆ, ಬೆಂಬಲಿಗ ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ.
ಜಾರಕಿಹೊಳಿ ಸಹೋದರರು ಮತ್ತು ಅವರ ಬೆಂಬಲಿಗರಿಗೆ ಸಚಿವ ಸ್ಥಾನ ಸಿಕ್ಕಿದರೆ ಎಲ್ಲರೂ ರಾಜಕಾರಣದಲ್ಲಿ ಮತ್ತಷ್ಟು ಪ್ರಭಾವಿಗಳಾಗಲಿದ್ದಾರೆ.
ಲಾಭ - 3
ಜಾರಕಿಹೊಳಿ ಸಹೋದರರು ಬಿಜೆಪಿ ಸರ್ಕಾರ ರಚನೆಗೆ ಕೈ ಜೋಡಿಸಿದರೆ ಪ್ರಮುಖ ನಿಗಮ ಮಂಡಳಿಗಳಿಗೆ ತಮ್ಮ ಬೆಂಬಲಿಗರನ್ನು ನೇಮಿಸುವಂತೆ ಬೇಡಿಕೆ ಇಡಬಹುದು. ಈಗಾಗಲೇ ಕಾಂಗ್ರೆಸ್ ಮುಂದೆ ಇದೇ ಬೇಡಿಕೆಯನ್ನು ಅವರು ಇಟ್ಟಿದ್ದಾರೆ. ಇನ್ನು ಅವರ ನೆರವಿನಿಂದ ಸರ್ಕಾರ ರಚನೆಯಾದರೆ ಬಿಜೆಪಿ ಇವರು ಹೇಳಿದಂತೆ ಕೇಳುವುದು ಅನಿವಾರ್ಯವಾಗುತ್ತದೆ.
ಲಾಭ - 4
ಬೆಳಗಾವಿಯಲ್ಲಿ ಕತ್ತಿ, ಪಾಟೀಲ, ಜಾರಕಿಹೊಳಿ ಕುಟುಂಬದವರು ರಾಜಕಾರಣ ಮಾಡುತ್ತಿದ್ದಾರೆ. ಜಾರಕಿಹೊಳಿ ಸಹೋದರರು ಸಾಕಷ್ಟು ಪ್ರಭಾವಿಯಾಗಿದ್ದಾರೆ. ಒಂದು ವೇಳೆ ಇವರು ಬಿಜೆಪಿ ಸೇರಿದರೆ ಬೆಳಗಾವಿ ಜಿಲ್ಲೆಯ ರಾಜಕಾರಣ ಸಂಪೂರ್ಣವಾಗಿ ಇವರ ಹಿಡಿತಕ್ಕೆ ಬರುತ್ತದೆ.
ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಮೊದಲಿನಿಂದಲೂ ಜಾರಕಿಹೊಳಿ ಸಹೋದರರು ಹೇಳುತ್ತಿದ್ದಾರೆ. ಮೂವರು ಸಹೋದರರು ಒಂದೇ ಪಕ್ಷ ಸೇರಿದರೆ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯ ಹಿಡಿತ ಅವರ ಕೈಗೆ ಬರುತ್ತದೆ.
ಲಾಭ - 5
ಜಾರಕಿಹೊಳಿ ಸಹೋದರರು ಬಿಜೆಪಿ ಸೇರಿದರೆ 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಜಾತಿ ಲೆಕ್ಕಾಚಾರ, ರಾಜಕೀಯ ಪ್ರಭಾವದ ಹಿನ್ನಲೆಯಲ್ಲಿ ಜಾರಕಿಹೊಳಿ ಸಹೋದರರಲ್ಲಿ ಒಬ್ಬರು ಕೇಂದ್ರ ಸಚಿವರಾಗುವ ಸಾಧ್ಯತೆ ಇದೆ.