ನಾಡಿನ ಮೊದಲ ಸಿಎಂ ಕೆ.ಸಿ.ರೆಡ್ಡಿಯವರ 44ನೇ ವರ್ಷದ ಸ್ಮರಣೆಯ ಸಾರ್ಥಕ ಆಚರಣೆ
ಬೆಂಗಳೂರು, ಫೆ 28: ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಚೆಂಗಲರಾಯ ರೆಡ್ಡಿಯವರ 44ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್ಫೇರ್ ಫೌಂಡೇಶನ್ ಮೂಲಕ, ಸಾರ್ಥಕ ರೀತಿಯಲ್ಲಿ ಆಚರಿಸಲಾಯಿತು.
ವಿಧಾನಸೌಧದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ (ಫೆ. 27) ಕೆ.ಸಿ.ರೆಡ್ಡಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪೊಲೀಸರಿಗೆ ಮತ್ತು ವಿಧಾನಸೌಧದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬ್ಲಾಂಕೆಟ್ ಮತ್ತು ಬ್ಯಾಗ್ ಅನ್ನು ವಿತರಿಸಲಾಯಿತು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕೆ.ಸಿ.ರೆಡ್ಡಿ ಫೌಂಡೇಶನ್ ನ ಕವಿತಾ ರೆಡ್ಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
"ರಾಜ್ಯಕ್ಕೆ ಅನೇಕ ಕೈಗಾರಿಕೆಗಳು ಬಂದಿದ್ದು ಅವರ ಕಾಲದಲ್ಲಿ. ಮೊಟ್ಟ ಮೊದಲು ಪವರ್ ಪ್ರಾಜೆಕ್ಟ್ ಗಳು ಕೆ.ಸಿ.ರೆಡ್ಡಿಯವರ ಕಾಲದಲ್ಲೇ ಬಂದಿದ್ದು. ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನ್ನ ಪುಣ್ಯ. ಅವರು ಹಾಕಿಕೊಟ್ಟಂತಹ ತತ್ವ, ಸಿದ್ದಾಂತ ನಮಗೆಲ್ಲರಿಗೂ ಮಾರ್ಗದರ್ಶನವಾಗಲಿ" ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಇನ್ನು ಟ್ರಸ್ಟಿನ ಕವಿತಾ ರೆಡ್ದಿ ಮಾತನಾಡುತ್ತಾ, " ಕೆ.ಸಿ.ರೆಡ್ಡಿಯವರು ಈ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಹೈಡ್ರೋಲಿಕ್ ಪವರ್ ಅನ್ನು ಕರ್ನಾಟಕಕ್ಕೆ ಮೊದಲು ತಂದವರು ಕೆ.ಸಿ.ರೆಡ್ಡಿಯವರು. ಯಾವುದೇ ಒಂದು ಸಂಸ್ಥೆಯನ್ನು ಅವರು ಸ್ಥಾಪಿಸಿದರೂ, ಅದರಲ್ಲಿ ದೂರದೃಷ್ಟಿ ಅಡಗಿರುತ್ತದೆ" ಎಂದು ಹೇಳಿದರು.
ಸುಮಾರು ಐವತ್ತಕ್ಕೂ ಹೆಚ್ಚು ಪೊಲೀಸರು ಮತ್ತು ಶಕ್ತಿಕೇಂದ್ರದ ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ಬ್ಲಾಂಕೆಟ್ ಮತ್ತು ಬ್ಯಾಗ್ ವಿತರಿಸಲಾಯಿತು. ಕೆ.ಸಿ.ರೆಡ್ಡಿಯವರು, ಕೋಲಾರ ಜಿಲ್ಲೆಯ ಬಂಗಾರ ಪೇಟೆ ತಾಲೂಕಿನ ಕ್ಯಾಸಂಬಳ್ಳಿ ಊರಿನವರು.