ಸಂಬಳಕ್ಕೆ ಕಾಯುತ್ತಿರುವ 42 ಸಾವಿರ ಆಶಾ ಕಾರ್ಯಕರ್ತೆಯರು
ಬೆಂಗಳೂರು, ಮೇ 22: ರಾಜ್ಯದ ಗ್ರಾಮೀಣ ಭಾಗಗಳಲ್ಲಿ ನೈಜ ಕೋವಿಡ್ ವಾರಿಯರ್ಗಳಾಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ದಿನದೂಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯದ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಮೇ ತಿಂಗಳಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗೌರವ ಧನ ರೂಪದ ಸಂಬಳ ಪಾವತಿಯಾಗಿಲ್ಲ ಎಂದು 'ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
ಬಜೆಟ್ ಹಿನ್ನೆಲೆ, ರಾಜ್ಯ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನಿಟ್ಟ ಆಶಾ ಕಾರ್ಯಕರ್ತೆಯರು
ರಾಜ್ಯ ಸರ್ಕಾರ ನೀಡುವ 4 ಸಾವಿರ ಹಾಗೂ ಕೇಂದ್ರ ಸರ್ಕಾರ ನೀಡುವ 2-3 ಸಾವಿರ ರೂ. ಹಣ ಆಶಾ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗೆ ತಲುಪಿಲ್ಲ, ಜತೆಗೆ ರಾಜ್ಯ ಸರ್ಕಾರ ಘೋಷಿಸಿದ್ದ ವಿಶೇಷ ಗೌರವ ಧನ ಕೂಡ ಕಳೆದ ಒಂದು ವರ್ಷದಿಂದ ನೀಡಲಾಗಿಲ್ಲ ಎಂದು ಕಾರ್ಯದರ್ಶಿ ನಾಗಲಕ್ಷ್ಮೀ ಆರೋಪಿಸಿದ್ದಾರೆ.
ಅದಲ್ಲದೇ ಈಗಾಗಲೇ ಸರ್ಕಾರದ ಜತೆ ಮಾತನಾಡಲಾಗಿದ್ದು, ಶೀಘ್ರವೇ ಪಾವತಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಮೇ ಅಂತ್ಯಕ್ಕೆ ಬಂದರೂ ಹಣ ಪಾವತಿಸದಿದ್ದರೆ ಆಶಾ ಕಾರ್ಯಕರ್ತೆಯರು ಮನೆ ಮನೆ ತಿರುಗಿ ಕೆಲಸ ಮಾಡುವುದು ಹೇಗೆ?, ಕುಟುಂಬವನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎನ್ನುವ ಪ್ರಶ್ನೆ ಎದುರಾಗಿದೆ.
ಕೋವಿಡ್ ವಾರಿಯರ್ಗಳ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ನಿಭಾಯಿಸಲು ಕಷ್ಟವಾಗಬಹುದು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ರಾಜ್ಯದ ನಾಗರಿಕರ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದಾರೆ. ಹಲವೆಡೆ ಜನರಿಂದ ಬೈಗುಳಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ.
ಕೊರೊನಾ ಪರೀಕ್ಷೆ, ಔಷಧೋಪಚಾರ ಹಾಗೂ ಲಸಿಕೆ ಕುರಿತು ಜಾಗೃತಿ ಮೂಡಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಬಹುದೊಡ್ಡದಿದೆ.
Recommended Video