ಪ್ರಧಾನಿ ಕಚೇರಿಗೆ 40 % ಕಮೀಷನ್ ದಂಧೆ ದಾಖಲೆಗಳು: ಬೀಳಲಿವೆಯೇ ಸರ್ಕಾರದ ವಿಕೆಟ್ಗಳು?
ಬೆಂಗಳೂರು, ಜೂ. 28: ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮೀಷನ್ ದಾಖಲೆಗಳನ್ನು ಕೇಂದ್ರ ಗೃಹ ಸಚಿವಾಲಯ ರಹಸ್ಯವಾಗಿ ಕಲೆ ಹಾಕುತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಸಂಪರ್ಕಿಸಿರುವ ಪ್ರಧಾನ ಮಂತ್ರಿಗಳ ಕಾರ್ಯಾಲಯ ತಮ್ಮ ಬಳಿ ಇರುವ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದ್ದಾರೆ ಎಂಬ ಸಂಗತಿ ಇದೀಗ ಬಿಜೆಪಿ ಪಾಳಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಕೇಂದ್ರ ಗೃಹ ಸಚಿವಾಲಯ ಹಾಗೂ ಪ್ರಧಾನಿಗಳ ಕಾರ್ಯಾಲಯದ ಕರೆ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ದಾಖಲೆಗಳನ್ನು ಸಂಗ್ರಹಿಸಿದ್ದು ಇನ್ನೆರಡು ದಿನದಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. 40 ಪರ್ಸೆಂಟ್ ಗುತ್ತಿಗೆ ಪ್ರಕರಣ ಬೊಮ್ಮಾಯಿ ಸರ್ಕಾರದ ಸಚಿವರಿಗೆ ಕಂಟಕವಾಗುವ ಲಕ್ಷಣ ಗೋಚರಿಸುತ್ತಿದೆ.
ಕರ್ನಾಟಕದ ಬೊಮ್ಮಾಯಿ ಸರ್ಕಾರದಲ್ಲಿ 40 ಪರ್ಸೆಂಟ್ ಕಮೀಷನ್ ದಂಧೆ ಬಗ್ಗೆ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೂರು ಸಲ್ಲಿಸಿದ್ದರು. ರಾಜ್ಯ ಸರ್ಕಾರದ ಕಾಮಗಾರಿಗಳಲ್ಲಿ ನಡೆಯುತ್ತಿರುವ 40 ಪರ್ಸೆಂಟ್ ಕಮೀಷನ್ ದಂಧೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಎಂದು ಕೋರಿದ್ದರು. 2021 ಡಿಸೆಂಬರ್ ನಲ್ಲಿ ಈ ವಿಷಯವನ್ನು ಕೆಂಪಣ್ಣ ಬಹಿರಂಗಪಡಿಸಿದ್ದರು. ಇದೀಗ ಕೇಂದ್ರದ ಪ್ರಧಾನಿಗಳ ಕಾರ್ಯಾಲಯ ಹಾಗೂ ಗೃಹ ಸಚಿವಾಲಯ ಮಧ್ಯ ಪ್ರವೇಶ ಮಾಡಿದ್ದು, ದಾಖಲೆಗಳನ್ನು ಒದಗಿಸುವಂತೆ ಕೇಂದ್ರದ ಪ್ರಧಾನಿಗಳ ಕಾರ್ಯಾಲಯ ಸೂಚಿಸಿದೆ.
ಪ್ರಧಾನಿಗಳ ಕಾರ್ಯಾಲಯದಿಂದ ಸೂಚನೆ ಬಂದಿರುವುದನ್ನು ಖಚಿತ ಪಡಿಸಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ, ಶೀಘ್ರದಲ್ಲಿ ಸಾಕ್ಷಾಧಾರಗಳ ಸಮೇತ ದಾಖಲೆಗಳನ್ನು ಪ್ರಧಾನಿಗಳು ಹಾಗೂ ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 40 ಪರ್ಸೆಂಟ್ ಕಮೀಷನ್ ದಂಧೆಗೆ ಬೆಳಗಾವಿ ಮೂಲದ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂತೋಷ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 40 ಪರ್ಸೆಂಟ್ ಕಮೀಷನ್ ದೊಡ್ಡ ಸದ್ದು ಮಾಡಿತ್ತು. ಪ್ರತಿ ಪಕ್ಷಗಳ ಹೋರಾಟದ ಬೆನ್ನಲ್ಲೇ ಕೆ.ಎಸ್. ಈಶ್ವರಪ್ಪ ಸಚಿವ ಸ್ಥಾನ ಕಳೆದಕೊಂಡಿದ್ದರು.
ಸಂತೋಷ್ ಆತ್ಮಹತ್ಯೆ ಬೆನ್ನಲ್ಲೇ ಸುದ್ದಿಗೋಷ್ಠಿ ಕರೆದಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, "ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಡಾ.ಕೆ. ಸುಧಾಕರ್ ಮೇಲೆ ನೇರ ಆರೋಪ ಮಾಡಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿಯೇ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘ ನೇರ ಅರೋಪ ಮಾಡಿತ್ತು. 40 ಪರ್ಸೆಂಟ್ ಕಮೀಷನ್ ದಂಧೆ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ಲೋಕೋಪಯೋಗಿ, ಅರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಮೀಷನ್ ದಂಧೆಯ ಬಗ್ಗೆ ಕೆಂಪಣ್ಣ ನೇರ ಆರೋಪ ಮಾಡಿದ್ದರು. ಸಂದರ್ಭ ಬಂದಾಗ ಸಾಕ್ಷಾಧಾರಗಳ ಸಮೇತ ಬಹಿರಂಗ ಪಡಿಸುವುದಾಗಿ," ಹೇಳಿಕೆ ನೀಡಿದ್ದರು.
ಡಿ. ಕೆಂಪಣ್ಣ ಮೋದಿಗೆ ದೂರು ನೀಡಿದ್ದರು:
ಬೊಮ್ಮಾಯಿ ಸರ್ಕಾರದ 40 ಪರ್ಸೆಂಟ್ ಕಮೀಷನ್ ಬಗ್ಗೆ ಗುತ್ತಿಗೆದಾರರ ಸಂಘ ಈ ಹಿಂದೆಯೇ ದೂರು ಸಲ್ಲಿಸಿತ್ತು. ಆ ಬಳಿಕ ರಾಜ್ಯದಲ್ಲಿ ಕಮೀಷನ್ ದಂಧೆ ದೊಡ್ಡ ವಿವಾದ ಎಬ್ಬಿಸಿತ್ತು. ಇನ್ನೇನು ಚುನಾವಣೆಗೆ 8 -9 ತಿಂಗಳು ಇರುವ ಬೆನ್ನಲ್ಲೇ ಇದೀಗ ಪ್ರಧಾನಿಗಳ ಕಾರ್ಯಲಯ ಹಾಗೂ ಗೃಹ ಸಚಿವಾಲಯ ದಾಖಲೆಗಳನ್ನು ಕಲೆ ಹಾಕಿದೆ. ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನಿಖೆಗೆ ವಹಿಸಿದಲ್ಲಿ ಬೊಮ್ಮಾಯಿ ಸರ್ಕಾರದ ಸಂಪುಟದ ಹಲವ ವಿಕೆಟ್ ಬೀಳುವ ಸಾಧ್ಯತೆಯಿದೆ.
Recommended Video