ಪ್ರತಾಪ್ ಸಿಂಹ, ರೇಣುಕಾಚಾರ್ಯ ವಿರುದ್ಧದ 4 ಪ್ರಕರಣ ವಾಪಸ್ : ಸಮಗ್ರ ಮಾಹಿತಿ ಕೇಳಿದ ಹೈಕೋರ್ಟ್
ಬೆಂಗಳೂರು, ಮಾ.8: 2020ರ ಸೆಪ್ಟೆಂಬರ್ ನಂತರ ಒಬ್ಬ ಸಂಸದರು ಮತ್ತು ಒಬ್ಬ ಶಾಸಕರ ವಿರುದ್ಧದ ನಾಲ್ಕು ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ತಿಳಿಸಿದೆ.
ಹೈಕೋರ್ಟ್ ಸ್ವತಃ ದಾಖಲಿಸಿಕೊಂಡಿರುವ ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠಕ್ಕೆ ಸರ್ಕಾರ ಈ ವಿಷಯ ತಿಳಿಸಿದೆ.
ಸಚಿವ ಸ್ಥಾನಕ್ಕಾಗಿ ಪ್ರಯತ್ನ: ಅರುಣ್ ಸಿಂಗ್ ಭೇಟಿಯಾದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ
2020ರ ಸೆಪ್ಟೆಂಬರ್ 16ರ ನಂತರ ಶಾಸಕರು, ಸಂಸದರು ಸೇರಿ ಯಾವುದೇ ಜನಪ್ರತಿನಿಧಿಗಳ ವಿರುದ್ಧ ಪ್ರಕರಣಗಳನ್ನು ಸರ್ಕಾರ ಹೈಕೋರ್ಟ್ ಅನುಮತಿಯಿಲ್ಲದೆ ಹಿಂಪಡೆಯಬಾರದು, ಆ ಬಗ್ಗೆ ಹೈಕೋರ್ಟ್ ಪರಿಶೀಲನೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿತ್ತು.
ಆ ಹಿನ್ನೆಲೆಯಲ್ಲಿ ಹೈಕೋರ್ಟ್ ಸ್ವತಃ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಸರ್ಕಾರ ನೀಡಿರುವ ಮಾಹಿತಿಯಂತೆ ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದ ಪ್ರತಾಪ್ ಸಿಂಹ ವಿರುದ್ಧ 2017ರಲ್ಲಿ ದಾಖಲಾಗಿದ್ದ ಒಂದು ಪ್ರಕರಣವನ್ನು ಹಾಗೂ ಬಿಜೆಪಿಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ 2018ರಲ್ಲಿ ದಾಖಲಾಗಿದ್ದ ಮೂರು ಪ್ರತ್ಯೇಕ ಪ್ರಕರಣಗಳನ್ನು 2020ರ ಅಕ್ಟೋಬರ್ 19ರಂದು ವಾಪಸ್ ಪಡೆಯಲಾಗಿದೆ ಎಂದು ಸರ್ಕಾರ ಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದೆ.
ಮೈಸೂರು ಅಭಿವೃದ್ಧಿ ಮಾಡಿದ್ದು ನಾನು; ಸ್ವಪಕ್ಷದ ಶಾಸಕರಿಗೆ ಪ್ರತಾಪ್ ಸಿಂಹ ಟಾಂಗ್
ರೇಣುಕಾಚಾರ್ಯ ಮತ್ತು ಪ್ರತಾಪ್ ಸಿಂಹ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲು ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಹಾಗಾಗಿ ನ್ಯಾಯಾಲಯ ಆ ಕುರಿತು ಹೆಚ್ಚಿನ ವಿವರಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಪ್ರತಾಪ್ ಸಿಂಹ ವಿರುದ್ಧ ಭಾರತೀಯ ದಂಡಸಂಹಿತೆ ಸಕ್ಷನ್ 353 ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿ ಮತ್ತು ಸಕ್ಷನ್ 279 ಸಾರ್ವಜನಿಕ ರಸ್ತೆಯಲ್ಲಿ ವೇಗವಾಗಿ ಚಾಲನೆ ಮಾಡಿದ ಪ್ರಕರಣವಿತ್ತು.
ರೇಣುಕಾಚಾರ್ಯ ವಿರುದ್ಧ ಐಪಿಸಿ ಸಕ್ಷನ್ 171 ಎಚ್ ಅನ್ವಯ ಚುನಾವಣೆಗಾಗಿ ಅಕ್ರಮ ಹಣ ಪಾವತಿ ಮತ್ತು ಸೆಕ್ಷನ್ 188ರ ಸಾರ್ವಜನಿಕ ಅಧಿಕಾರಿ ಹೊರಡಿಸಿದ ಆದೇಶ ಉಲ್ಲಂಘನೆ ಪ್ರಕರಣಗಳಿದ್ದವು. ಅಲ್ಲದೆ ಮತ್ತೆರಡು ಪ್ರಕರಣಗಳಲ್ಲಿ ಭಾರತೀಯ ದಂಡಸಂಹಿತೆ 353, 143, 341 ಹಾಗೂ 427ರ ಅಡಿ ಪ್ರಕರಣ ದಾಖಲಾಗಿದ್ದವು. ಈ ಕುರಿತು ಇನ್ನೂ ಹೆಚ್ಚಿನ ವಿವರಗಳನ್ನು ನೀಡುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿದೆ.
ಸುಪ್ರೀಂಕೋರ್ಟ್ 2021ರ ಆ.10ರಂದು ನೀಡಿರುವ ತೀರ್ಪಿನ ಪ್ರಕಾರ ರಾಜ್ಯದಲ್ಲಿ 2020ರ ಸೆ.16ರ ನಂತರ ಹಾಲಿ ಹಾಗೂ ಮಾಜಿ ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದು ಹೊರಡಿಸಿರುವ ಎಲ್ಲ ಆದೇಶಗಳನ್ನು ಪರಿಶೀಲಿಸಲು ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಜೊತೆಗೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಹಿರಿಯ ನ್ಯಾಯವಾದಿ ಆದಿತ್ಯ ಸೋಂಧಿ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಕ ಮಾಡಲಾಗಿದೆ.
Recommended Video