ಬಿಗ್ ಬ್ರೇಕಿಂಗ್: ರಾಜ್ಯದಲ್ಲಿ ಒಂದೇ ದಿನ 388 ಕೊವಿಡ್-19 ಕೇಸ್!
ಬೆಂಗಳೂರು, ಜೂನ್.02: ನೊವೆಲ್ ಕೊರೊನಾ ವೈರಸ್ ಅಟ್ಟಹಾಸಕ್ಕೆ ಕರುನಾಡು ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ಕರ್ನಾಟಕದಲ್ಲಿ ಒಂದೇ ದಿನ ದಾಖಲೆಯ ಮಟ್ಟದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ಪತ್ತೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 388 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.
ರಾಜ್ಯದ ಪಾಲಿಗೆ ಈ ಮಂಗಳವಾರ ಸಂಪೂರ್ಣ ಅಮಂಗಳವಾಗಿದೆ. ಉಡುಪಿ ಮತ್ತು ಕಲಬುರಗಿ ಎರಡು ಜಿಲ್ಲೆಗಳಲ್ಲಿ ನೂರಕ್ಕಿಂತ ಹೆಚ್ಚು ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಉಡುಪಿಯ 150 ಮಂದಿ, ಕಲಬುರಗಿಯ 100 ಮಂದಿಗೆ ಸೋಂಕು ಪತ್ತೆಯಾಗಿದೆ.
ಕೊರೊನಾ ಅಟ್ಟಹಾಸ: ಜಗತ್ತಿನ ಮುಂದೆ ರಷ್ಯಾ ಮೇಲುಗೈ, ಭಾರತಕ್ಕೂ ಹಿನ್ನಡೆ
ಮಂಗಳವಾರ ಎರಡು ಗಂಟೆಗಳ ಕಾಲ ತಡವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ರಾಜ್ಯದ ಜನರಿಗೆ ಆಘಾತವನ್ನು ನೀಡಿದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆಯಾಗಿದೆ.
ಉಡುಪಿ ಜಿಲ್ಲೆಯೊಂದರಲ್ಲೇ 150 ಜನರಿಗೆ ಕೊರೊನಾ ವೈರಸ್
ಕರ್ನಾಟಕದಲ್ಲಿ ಮೊದಲ ಬಾರಿಗೆ ಒಂದೇ ಜಿಲ್ಲೆಯಲ್ಲಿ 150 ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಬರೋಬ್ಬರಿ 150 ಜನರಿಗೆ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದ್ದು, ಎಲ್ಲ ಸೋಂಕಿತರು ಕೂಡಾ ಮುಂಬೈನಿಂದ ವಾಪಸ್ಸಾದವರು ಎಂದು ತಿಳಿದು ಬಂದಿದೆ.
ಕರ್ನಾಟಕಕ್ಕೆ ಮತ್ತೊಮ್ಮೆ ಮಗ್ಗಲು ಮುಳ್ಳಾದ ಮಹಾರಾಷ್ಟ್ರ
ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ವಿಚಾರದಲ್ಲಿ ಮಹಾರಾಷ್ಟ್ರವು ಕರ್ನಾಟಕದ ಪಾಲಿಗೆ ಮತ್ತೊಮ್ಮೆ ಮಗ್ಗಲು ಮುಳ್ಳಾಗಿದೆ. ರಾಜ್ಯದಲ್ಲಿ ಇಂದು ಪತ್ತೆಯಾಗಿರುವ 388 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳಲ್ಲಿ 363 ಮಂದಿಗೆ ಮಹಾರಾಷ್ಟ್ರದ ನಂಟು ಇರುವುದು ದೃಢಪಟ್ಟಿದೆ. ಇನ್ನು, ನವದೆಹಲಿಯಿಂದ ವಾಪಸ್ಸಾದ ನಾಲ್ವರಿಗೂ ಸೋಂಕು ಅಂಟಿಕೊಂಡಿರುವುದು ಪತ್ತೆಯಾಗಿದೆ.
ಜಿಲ್ಲಾವಾರು ಪತ್ತೆಯಾದ ಸೋಂಕಿತ ಪ್ರಕರಣಗಳು
ಕರ್ನಾಟಕದಲ್ಲಿ ಮಂಗಳವಾರ ಒಂದೇ ದಿನ 388 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿವೆ. ಈ ಪೈಕಿ ಉಡುಪಿ - 150, ಕಲಬುರಗಿ -100, ಬೆಳಗಾವಿ -51, ರಾಯಚೂರು - 16, ಬೆಂಗಳೂರು ನಗರ - 12, ಬೀದರ್ - 10, ಹಾಸನ - 9, ಬಾಗಲಕೋಟೆ - 9, ದಾವಣಗೆರೆ -7, ಯಾದಗಿರಿ - 5, ಮಂಡ್ಯ -4, ವಿಜಯಪುರ - 4, ಬೆಂಗಳೂರು ಗ್ರಾಮಾಂತರ - 3, ತುಮಕೂರು - 2, ಧಾರವಾಡ -2, ಚಿಕ್ಕಬಳ್ಳಾಪುರ -2, ಕೋಲಾರ - 1 ಮತ್ತು ಹಾವೇರಿ - 1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲಾವಾರು ಗುಣಮುಖರಾದ ಸೋಂಕಿತರ ಸಂಖ್ಯೆ?
ಇನ್ನು, ರಾಜ್ಯದಲ್ಲಿ 388 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದರೆ ಇಂದು ಒಂದೇ ದಿನ 75 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮಂಡ್ಯ - 20, ಧಾರವಾಡ -15, ಬಳ್ಳಾರಿ -11, ಬೆಳಗಾವಿ -9, ಉತ್ತರ ಕನ್ನಡ -5, ತುಮಕೂರು - 5, ಕೋಲಾರ -4, ಹಾವೇರಿ -3, ವಿಜಯಪುರ - 3 ಸೇರಿದಂತೆ ರಾಜ್ಯದಲ್ಲಿ ಇದುವರೆಗೂ 1,403 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.