ತಮಿಳುನಾಡಿಗೆ ಕರ್ನಾಟಕ ಕೊಟ್ಟ ಕಾವೇರಿ ನೀರೆಷ್ಟು?
ಬೆಂಗಳೂರು, ಆಗಸ್ಟ್ 26 : ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಾಕಷ್ಟು ಜಟಾಪಟಿ ನಡೆಯುತ್ತದೆ. ಆದರೆ, ಈ ಬಾರಿ ವರುಣ ದೇವನ ಕೃಪೆಯಿಂದಾಗಿ ನೀರಿನ ಸಮಸ್ಯೆ ಇಲ್ಲ. ಇದುವರೆಗೂ 310.549 ಟಿಎಂಸಿ ಅಡಿ ನೀರು ಪಕ್ಕದ ರಾಜ್ಯಕ್ಕೆ ಹರಿದು ಹೋಗಿದೆ.
ಈ ವರ್ಷ ಕಾವೇರಿ ಕೊಳ್ಳದಲ್ಲಿ ಭಾರಿ ಮಳೆಯಾಗಿದೆ. ಜುಲೈ ತಿಂಗಳಿನಲ್ಲಿಯೇ ಮಂಡ್ಯದಲ್ಲಿರುವ ಕೆಆರ್ಎಸ್ ಜಲಾಶಯ ಭರ್ತಿಯಾಗಿತ್ತು. ಆಗಸ್ಟ್ನಲ್ಲಿ ಮಳೆ ಹೆಚ್ಚಾದಾಗ ಸುಮಾರು 1 ಲಕ್ಷ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ.
45 ವರ್ಷದ ಬಳಿಕ ದಾಖಲೆ ಬರೆದ ಕಾವೇರಿ ಕಣಿವೆಯ 4 ಜಲಾಶಯಗಳು!
ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ನೀರನ್ನು ಕರ್ನಾಟಕ ಹರಿಸಬೇಕಿದೆ. ಆದರೆ, ಈ ಬಾರಿ ಕೇವಲ ಮೂರು ತಿಂಗಳಿನಲ್ಲಿಯೇ 310.549 ಟಿಎಂಸಿ ನೀರು ಹರಿಸಲಾಗಿದ್ದು, ತಮಿಳುನಾಡಿನ ಮೆಟ್ಟೂರು ಜಲಾಶಯ ಆಗಸ್ಟ್ ತಿಂಗಳಿನಲ್ಲಿಯೇ ಮೂರು ಬಾರಿ ಭರ್ತಿಯಾಗಿದೆ.
ಚಿತ್ರಗಳು : ಹಾರಂಗಿಯಿಂದ ಹಾಲ್ನೊರೆಯುಕ್ಕಿಸುತ್ತಾ ಹರಿದ ನೀರು
ಕಾವೇರಿ ವಿವಾದದ ಕುರಿತು ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿದಾಗ ಜೂನ್ ತಿಂಗಳಿನಲ್ಲಿ 9.23 ಟಿಎಂಸಿ, ಜುಲೈ ತಿಂಗಳಿನಲ್ಲಿ 31.93 ಟಿಎಂಸಿ, ಆಗಸ್ಟ್ ತಿಂಗಳಿನಲ್ಲಿ 46.16 ಟಿಎಂಸಿ ನೀರು ಬಿಡಬೇಕು ಎಂದು ಆದೇಶ ನೀಡಿತ್ತು. ಇದಕ್ಕಿಂತ ಮೂರು ಪಟ್ಟು ನೀರು ಈಗಾಗಲೇ ತಮಿಳುನಾಡಿಗೆ ಹರಿದು ಹೋಗಿದೆ...
ಕಾವೇರಿ ಅಂತಿಮ ತೀರ್ಪು
2007ರಲ್ಲಿ ಕಾವೇರಿ ನ್ಯಾಯಾಧೀಕರಣ ನೀಡಿದ ತೀರ್ಪಿನ ಅನ್ವಯ ವಾರ್ಷಿಕ 192 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡಬೇಕಿತ್ತು. ಆದರೆ, 2018ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ ವಾರ್ಷಿಕ 192 ಟಿಎಂಸಿ ಅಡಿ ನೀರು ಹರಿಸಬೇಕು.
ಆದರೆ, ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಕೆಆರ್ಎಸ್ನಿಂದ 149.509 ಟಿಎಂಸಿ, ಕಬಿನಿಯಿಂದ 161.04 ಟಿಎಂಸಿ ಸೇರಿ 310.549 ಟಿಎಂಸಿ ನೀರನ್ನು ಕರ್ನಾಟಕ ಹರಿಸಿದೆ. (ಚಿತ್ರ : ಮೆಟ್ಟೂರು ಡ್ಯಾಂ)
ಕೆಆರ್ಎಸ್ ಜಲಾಶಯ
ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್ಎಸ್ ಜಲಾಶಯ ಕಾವೇರಿ ಪಾತ್ರದ ಪ್ರಮುಖ ಜಲಾಶಯವಾಗಿದೆ. 124 ಅಡಿ ಸಾಮರ್ಥ್ಯದ ಜಲಾಶಯ ಭರ್ತಿಯಾದ ತಕ್ಷಣ ತಮಿಳುನಾಡಿಗೆ ನೀರನ್ನು ಬಿಡಲಾಗುತ್ತದೆ.
ಇದುವರೆಗೂ ಜಲಾಶಯದಿಂದ 149.509 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ಆ.15ರಿಂದ ನಾಲ್ಕು ದಿನಗಳ ಕಾಲ 1 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರನ್ನ ಹರಿಸಲಾಗಿದೆ.
ಆ.25ರಂದು ಕೆಆರ್ಎಸ್ ಒಳಹರಿವು 21,170 ಕ್ಯೂಸೆಕ್, ಹೊರ ಹರಿವು 19,362 ಕ್ಯೂಸೆಕ್ ಆಗಿದೆ.
86 ವರ್ಷಗಳ ಇತಿಹಾಸ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್ಎಸ್ ಜಲಾಶಯ ಜುಲೈ 20ರಂದು ಭರ್ತಿಯಾಗಿದೆ. ಜೂನ್ 1ರಿಂದ ಆ.25ರ ತನಕ 206.356 ಟಿಎಂಸಿ ಅಡಿ ನೀರು ಜಲಾಶಯಕ್ಕೆ ಹರಿದುಬಂದಿದೆ. 49.452 ಟಿಎಂಸಿ ನೀರನ್ನು ಜಲಾಶಯದಲ್ಲಿ ಸಂಗ್ರಹಿಸಬಹುದು. ಡೆಡ್ ಸ್ಟೋರೇಜ್ ಕಳೆದು 45 ಟಿಎಂಸಿ ನೀರನ್ನು ಕೃಷಿ ಮತ್ತು ಕುಡಿಯುವ ನೀರಿಗೆ ಬಳಕೆ ಮಾಡಬಹುದು.
ಯಾವ ವರ್ಷದಲ್ಲಿಯೂ ಇಷ್ಟು ಕಡಿಮೆ ಅವಧಿಯಲ್ಲಿ 100 ಕ್ಕಿಂತ ಅಧಿಕ ಟಿಎಂಸಿ ನೀರನ್ನು ಹೊರ ಬಿಟ್ಟಿರಲಿಲ್ಲ.
ಕಬಿನಿ ಡ್ಯಾಂ
ಕೊಡಗು ಮತ್ತು ಕೇರಳದಲ್ಲಿ ಸುರಿದ ಮಳೆಯಿಂದಾಗಿ ಮೈಸೂರಿನ ಎಚ್.ಡಿ.ಕೋಟೆಯಲ್ಲಿರುವ ಕಬಿನಿ ಜಲಾಶಯ ಬೇಗ ಭರ್ತಿಯಾಗಿದೆ. 161.04 ಟಿಎಂಸಿ ನೀರನ್ನು ಜಲಾಶಯದಿಂದ ಹರಿಸಲಾಗಿದೆ.
ಆ.25ರಂದು ಜಲಾಶಯದ ಒಳ ಹರಿವು 13,116 ಕ್ಯುಸೆಕ್, ಹೊರ ಹರಿವು 12,708 ಕ್ಯೂಸೆಕ್ ಆಗಿದೆ.