ಕರ್ನಾಟಕದಲ್ಲಿ 300 ಹೊಸ ಟಿಬಿ ಕಾಯಿಲೆ ಪ್ರಕರಣಗಳು ಪತ್ತೆ
ರಾಜ್ಯದಲ್ಲಿ 300 ಟಿಬಿ ಹೊಸ ಪ್ರಕರಣಗಳು ಪತ್ತೆ. ರಾಜ್ಯ ಸರ್ಕಾರದ ವೈದ್ಯಕೀಯ ಅಭಿಯಾನದ ವೇಳೆ ಪತ್ತೆ. ಎಲ್ಲಾ ಜಿಲ್ಲೆಗಳಲ್ಲಿ ಆರಂಭಗೊಂಡಿರುವ ಕ್ಷಯ ರೋಗ ನಿರ್ಮೂಲನಾ ಅಭಿಯಾನ.
ಬೆಂಗಳೂರು, ಜುಲೈ 21: ರಾಜ್ಯದಲ್ಲಿ ಹೊಸದಾಗಿ 300 ಕ್ಷಯ ರೋಗ (ಟಿಬಿ- ಟ್ಯುಬರ್ ಕ್ಲೋಸಿಸ್) ಪ್ರಕರಣಗಳು ಪತ್ತೆಯಾಗಿದ್ದು, ಶೀಘ್ರದಲ್ಲೇ ಎಲ್ಲಾ ಜಿಲ್ಲೆಗಳಲ್ಲಿ ಇವುಗಳ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗುವುದು ವೈದ್ಯರು ತಿಳಿಸಿದ್ದಾರೆ.
ಕ್ಷಯ ರೋಗಿಗಳಿಗೆ ಆಧಾರ್ ಜೋಡಣೆಗೆ ಆಗಸ್ಟ್ 30 ಕೊನೆಯ ದಿನ
2025ರ ವೇಳೆಗೆ ಟಿಬಿಯನ್ನು ಕರ್ನಾಟಕದಿಂದ ತೊಲಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸತಾಗಿ ವೈದ್ಯಕೀಯ ತಪಾಸಣಾ ಅಭಿಯಾನವನ್ನು ಆರಂಭಿಸಿದೆ. ಇದಕ್ಕೆ ಡಾ. ಸಂಜಯ್ ಗುಪ್ತಾ ಅವರು ಸಾರಥಿಯಾಗಿದ್ದಾರೆ. ಅಭಿಯಾನ ಶುರುವಾಗಿ ಕೇವಲ 3 ದಿನಗಳಲ್ಲೇ 300 ಪ್ರಕರಣಗಳು ಪತ್ತೆಯಾಗಿರುವುದು ವೈದ್ಯರನ್ನೂ ಕೊಂಚ ದಂಗುಬಡಿಸಿದೆ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಡಾ. ಗುಪ್ತಾ ಅವರು, ರಾಜ್ಯದಲ್ಲಿ ಹೊಸದಾಗಿ 300 ಟಿಬಿ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದ 11 ಜಿಲ್ಲೆಗಳಲ್ಲಿ ಟಿಬಿಯು ಮತ್ತೆ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಆದರೆ, ಆ 11 ಜಿಲ್ಲೆಗಳ ಬಗ್ಗೆ ಅವರು ಮಾಹಿತಿ ನೀಡಿಲ್ಲ.
ಪ್ರತಿಯೊಂದು ಜಿಲ್ಲೆಗಳಲ್ಲಿ ಟಿಬಿ ಶಿಬಿರಗಳನ್ನು ಆಯೋಜಿಸುವ ಮೂಲಕ ಹಳ್ಳಿಗಾಡಿನ ಜನರಿಗೂ ಇದರ ಉಪಯೋಗ ಸಿಗುವಂತೆ ಮಾಡಲಾಗುವುದು. ವಿಪರೀತ ಕೆಮ್ಮಿನಿಂದ ಬಳಲುತ್ತಿರುವ ವ್ಯಕ್ತಿಗಳ ಕಫ, ರಕ್ತ, ಮೂತ್ರಗಳ ಸ್ಯಾಂಪಲ್ ಗಳನ್ನು ಪಡೆದು ಮೂರು ಅಥವಾ ನಾಲ್ಕು ದಿನಗಳಲ್ಲಿ ಅವುಗಳ ಪರೀಕ್ಷಾ ವರದಿಯನ್ನು ಪಡೆಯಲಾಗುವುದು.
ಟಿಬಿ ಕಾಯಿಲೆ ಸೋಂಕಿಗೆ ಒಳಗಾದವರಿಗೆ ಕೂಡಲೇ ಚಿಕಿತ್ಸೆಗೆ ಒಳಗಾಗುವಂತೆ ಪ್ರೇರಿಪಿಸಿ ಅವರಿಗೆ ಅಗತ್ಯ ವೈದ್ಯಕೀಯ ನೆರವು ಕೊಡಲಾಗುವುದು ಎಂದು ಡಾ. ಗುಪ್ತಾ ತಿಳಿಸಿದ್ದಾರೆ.