'ರಾಷ್ಟ್ರಗೀತೆ'ಗೆ ಅವಮಾನಿಸಿದ್ರೆ ಮೂರು ವರ್ಷ ಜೈಲು: 'ನಾಡಗೀತೆ'ಗೆ ಅವಮಾನ ಮಾಡಿದ್ರೆ?
ಬೆಂಗಳೂರು, ಜೂ. 06: ರಾಷ್ಟ್ರಧ್ವಜ ಅಥವಾ ರಾಷ್ಟ್ರಗೀತೆ "ಜನಗನಮನ"ಕ್ಕೆ ಅವಹೇಳನ ಮಾಡಿದ್ರೆ ಅಥವಾ ಅಪಮಾನ ಮಾಡಿದರೆ ಮೂರು ವರ್ಷ ಜೈಲು ಶಿಕ್ಷೆ ಜತೆಗೆ ದಂಡ ಕಟ್ಟಬೇಕು! ಭಾರತ ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಅವಹೇಳನ ಮಾಡದಂತೆ ಭಾರತ ಸರ್ಕಾರ ದಿ ಪ್ರಿವೆಷನ್ಸನ್ ಆಫ್ ಇನ್ಸಲ್ಟ್ ಟು ನ್ಯಾಷನಲ್ ಹಾನರ್ ಅಕ್ಟ್ 1971 ಕಾಯ್ದೆ ಮೂಲಕ ಕೊಟ್ಟಿರುವ ರಕ್ಷಣೆಯಿದು. ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಭಾರತ ಧ್ವಜ, ಸಂವಿಧಾನ, ನಾಡಗೀತೆಗೆ ಪ್ರತಿಯೊಬ್ಬ ಭಾರತೀಯ ಪರಮೋಚ್ಛ ಗೌರವ ಕೊಡಬೇಕು. ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಕೂಡ.
ಕರ್ನಾಟಕ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಬೆನ್ನಲ್ಲೇ ರಾಜ್ಯದಲ್ಲಿ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವುಂಪು ಅವರು ರಚಿಸಿರುವ 'ಜಯ ಭಾರತ ಜನನಿಯ ತನುಜಾತೆ'ಗೆ ಅವಮಾನ ಮಾಡಿದ ಪ್ರಕರಣ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ರೋಹಿತ್ ಚಕ್ರತೀರ್ಥನನ್ನು ಬಂಧಿಸಬೇಕು ಎಂದು ಬಿಜೆಪಿ ವಿರೋಧಿಗಳು ಆಗ್ರಹಿಸುತ್ತಿದ್ದಾರೆ.
ಬಿಜೆಪಿಯವರು ಅಂತೂ ನಾಡಗೀತೆಗೆ ಅವಮಾನ ಮಾಡಿದ ಚಕ್ರತೀರ್ಥ ಪ್ರತಿಭೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಒಂದು ರಾಷ್ಟ್ರಕ್ಕೆ ರಾಷ್ಟ್ರಗೀತೆ ಪ್ರಶ್ನಾತೀತ. ಆದರೆ ರಾಜ್ಯದ ವಿಚಾರಕ್ಕೆ ಬಂದ್ರೆ, ನಾಡಿನ ಜಲ, ನೆಲ, ಭಾವನೆಗಳಿಗೆ ಗೌರವ ಕೊಡಲಿಕ್ಕೆ ಸಂವಿಧಾನವೇ ಅವಕಾಶ ಕೊಟ್ಟಿದೆ. ಹೀಗಾಗಿ ಒಂದು ರಾಜ್ಯದ ಭಾವನೆ ವಿಚಾರ ಬಂದಾಗ ನಾಡಗೀತೆ, ನಾಡಧ್ವಜ ಮುಖ್ಯವಾಗುತ್ತದೆ. ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ ಪ್ರಶ್ನಾತೀತ. ನಾಡಿನ ವಿಚಾರಕ್ಕೆ ಬಂದ್ರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗದಂತೆ ಸಂವಿಧಾನದ ಚೌಕಟ್ಟಿನಲ್ಲಿ ನಾಡ ಧ್ವಜ ಮತ್ತು ನಾಡಗೀತೆಗೆ ಅವಮಾನ ಮಾಡುವರನ್ನು ಪ್ರತ್ಯೇಕವಾಗಿ ದಂಡಿಸುವ ಕಾನೂನು ರೂಪಿಸುವುದರಲ್ಲಿ ತಪ್ಪೇನಿದೆ? ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ನಾಡ ಧ್ವಜಕ್ಕೆ ಅವಮಾನ ಮಾಡಿದವರು ಏನಾದರು?
2004 ರಲ್ಲಿಯೇ ಕರ್ನಾಟಕ ನಾಡಗೀತೆಯನ್ನಾಗಿ ಅಂಗೀಕರಿಸಿರುವ ಕರ್ನಾಟಕದ 'ಜಯ ಭಾರತ ಜನನಿಯ ತನುಜಾತೆ'ಗೆ ನಾಡಗೀತೆ ಯಾವ ಕಾನೂನು ರಕ್ಷಣೆ ಇದೆ? ಈ ನಾಡಗೀತೆ, ನಾಡ ಧ್ವಜಕ್ಕೆ ಅವಮಾನ ಮಾಡಿದವರನ್ನು ಕಾನೂನು ಪ್ರಕಾರ ದಂಡಿಸುವ ಒಂದು ಕಾನೂನು ರೂಪಿಸುವಲ್ಲಿ ತಪ್ಪೇನಿದೆ?
ರಾಜ್ಯದ ಧ್ವನಿಯ ಪ್ರತೀಕವಾಗಿ ನಾಡ ಧ್ವಜ ಹಾಗೂ ನಾಡಗೀತೆಯಿದೆ. 2004 ರಲ್ಲಿ ಎಸ್.ಎಂ. ಕೃಷ್ಣ ಸಿಎಂ ಆಗಿದ್ದಾಗ ಜಯ ಭಾರತ ಜನನಿಯ ತನುಜಾತೆ ಗೀತೆಯನ್ನು ನಾಡಗೀತೆಯನ್ನಾಗಿ ಅಂಗೀಕರಿಸಿ ಆದೇಶ ಹೊರಡಿಸಿದ್ದರು. ಅಂದಿನಿಂದ ಸರ್ಕಾರಿ ಕಾರ್ಯಕ್ರಮ ಹಾಗೂ ಶಾಲೆಗಳಲ್ಲಿ ಕಡ್ಡಾಯವಾಗಿ ನಾಡಗೀತೆ ಹಾಡಲಾಗುತ್ತದೆ. ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗದಂತೆ, ರಾಷ್ಟ್ರಗೀತೆ, ರಾಷ್ಟ್ರಧ್ವಜದ ಭಾವನೆಗಳಿಗೆ ಧಕ್ಕೆ ಯಾಗದಂತೆ, ಸಂವಿಧಾನದ ಚೌಕಟ್ಟಿನಲ್ಲಿ ಕನ್ನಡ ನಾಡಿನ ಧ್ವಜ ಹಾಗೂ ನಾಡಗೀತೆ ಅಪಮಾನಗೊಳಿಸುವುದನ್ನು ತಡೆಯುವ ಏಕೈಕ ಉದ್ದೇಶದಿಂದ, ನಾಡಿನ ಜಲ, ನೆಲ, ರಕ್ಷಣೆ ಭಾವನೆಗಳ ಸಂಕೇತವಾದ ನಾಡಗೀತೆ ಹಾಗೂ ನಾಡ ಧ್ವಜಕ್ಕೆ ರಾಜ್ಯ ಸರ್ಕಾರ ರಕ್ಷಣೆ ಕೊಡಬೇಕಲ್ಲವೇ ? ನಾಡ ಗೀತೆ ರಕ್ಷಣೆಗೆ ಕಾನೂನು ಇಲ್ಲದ ಕಾರಣಕ್ಕಾಗಿಯೇ ರೋಹಿತ್ ಹೆಸರಿನ ತೀರ್ಥ ತಜ್ಞ ನಾಡಗೀತೆಯನ್ನು ಧೈರ್ಯವಾಗಿ ವಿರೂಪಗೊಳಿಸಿ ಪೋಸ್ಟ್ ಮಾಡಿಕೊಂಡಿದ್ದು? ಪದೇ ಪದೇ ಬೆಳಗಾವಿಯಲ್ಲಿ ನಾಡಧ್ವಜಕ್ಕೆ ಎಂಇಎಸ್ ಕಾರ್ಯಕರ್ತರು ಅವಮಾನ ಮಾಡುವುದು ಅಲ್ಲವೇ?
ಕಾನೂನು ಏನು ಹೇಳುತ್ತದೆ?
ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಭಾರತದ ಗೌರವದ ಸಂಕೇತ. ಯಾರೇ ಆಗಲೀ ಭಾರತದ ಧ್ವಜವನ್ನಾಗಲೀ, ಭಾರತದ ಸಂವಿಧಾನಕ್ಕಾಗಲೀ ಉದ್ದೇಶ ಪೂರ್ವಕವಾಗಿ ಅವಮಾನ ಮಾಡುವಂತಿಲ್ಲ. ಸಾರ್ವಜನಿಕವಾಗಿ ರಾಷ್ಟ್ರಧ್ವಜವನ್ನು ಸುಡುವಂತಿಲ್ಲ. ಧ್ವಜವನ್ನು ವಿರೂಪಗೊಳಿಸುವಂತಿಲ್ಲ. ನಾಶ ಪಡಿಸುವಂತಿಲ್ಲ. ಅಗೌರವ ತೋರುವಂತಿಲ್ಲ. ಪದಗಳಲ್ಲಿ, ಮಾತುಗಳಲ್ಲಿ, ಬರವಣಿಗೆಯಲ್ಲಿ ರಾಷ್ಟ್ರಧ್ವಜಕ್ಕಾಗಲೀ ಭಾರತ ಸಂವಿಧಾನಕ್ಕಾಗಲೀ ಅಗೌರವ ತೋರುವಂತಿಲ್ಲ. ಒಂದು ವೇಳೆ ತೋರಿದರೆ ಉಲ್ಲೇಖಿತ ಕಾಯ್ದೆ ಸೆಕ್ಷನ್ 2 ರ ಪ್ರಕಾರ ಮೂರು ವರ್ಷದ ವರೆಗೂ ಶಿಕ್ಷೆ ಹಾಗೂ ದಂಢ, ಅಥವಾ ಎರಡನ್ನೂ ವಿಧಿಸಬಹುದು!
ಇದೇ ಕಾಯಿದೆ ಸೆಕ್ಷನ್ 3 ರ ಪ್ರಕಾರ, ಭಾರತದ ರಾಷ್ಟ್ರಗೀತೆಯನ್ನು ಹಾಡುವಾಗ ದುರುದ್ದೇಶ ಪೂರ್ವಕವಾಗಿ ಅಡ್ಡಿ ಪಡಿಸಿದರೆ, ಮೂರು ವರ್ಷ
ಜೈಲು ಶಿಕ್ಷೆ ಮತ್ತು ದಂಡಕ್ಕೆ ಗುರಿಪಡಿಸಬಹುದು. ಸೆಕ್ಷನ್ 3a ಪ್ರಕಾರ, ಈಗಾಗಲೇ ಈ ಅಪರಾಧ ಎಸಗಿ ಶಿಕ್ಷೆಗೆ ಗುರಿಯಾಗಿದ್ರೆ, ಮತ್ತೊಮ್ಮೆ ಅದೇ ಅಪರಾಧ ಎಸಗಿದರೆ ಅಂತಹವರನ್ನು ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಶಿಕ್ಷೆಗೆ ಗುರಿಪಡಿಸಬಹುದು ಎಂದು ಕಾಯ್ದೆ ಹೇಳುತ್ತದೆ.
ಕಾನೂನು ತಜ್ಞರು ಏನು ಹೇಳುತ್ತಾರೆ?
ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆ ಪ್ರಶ್ನಾತೀತ. ಭಾರತದ ಒಕ್ಕೂಟ ವ್ಯವಸ್ಥೆ, ಸಾರ್ವಭೌಮತ್ವಕ್ಕೆ ಧಕ್ಕೆ ತರುವ ರೀತಿ ಯಾವ ರಾಜ್ಯಗಳು ತಮ್ಮ ನಾಡ ಬಾವುಟ, ನಾಡ ಗೀತೆ ರಚನೆ ಮಾಡುವಂತಿಲ್ಲ. ಆದರೆ, ಒಂದು ರಾಜ್ಯದ ನೆಲ,ಜಲ ರಕ್ಷಣೆ, ಒಗ್ಗಟ್ಟು ಪ್ರದರ್ಶನ ವಿಚಾರ ಬಂದಾಗ, ಭಾರತದ ಒಕ್ಕೂಟ ವ್ಯವಸ್ಥೆಗೆ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಗೆ ಧಕ್ಕೆಯಾಗದ ರೀತಿ ನಾಡಿಗೀತೆ ಹಾಗೂ ಪ್ರಾಂತ್ಯಗೀತೆಗೆ ಅವಮಾನ ಮಾಡದಂತೆ ಆಯಾ ರಾಜ್ಯಗಳು ಕಾನೂನು ರಚನೆ ಮಾಡುವುದಲ್ಲಿ ತಪ್ಪೇನಿಲ್ಲ ಎಂದು ಹಿರಿಯ ವಕೀಲ ಶಂಕರಪ್ಪ ಅವರು 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.
ರಾಷ್ಟ್ರಧ್ವಜಕ್ಕೆ ಧಕ್ಕೆ ತರುವಂತಿರಬಾರದು
ನಾಡ ಗೀತೆ, ನಾಡ ಧ್ವಜ ಒಂದು ಸಮುದಾಯ, ಪ್ರಾಂತ್ಯದ ಭಾವನೆಗಳಿಗೆ ಸಂಬಂಧಿಸಿದ್ದು. ಜನರ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ಸಂವಿಧಾನವೇ ಹೇಳಿದೆ. ಆದ್ರೆ, ರಾಜ್ಯ ಸರ್ಕಾರಗಳು ಬಹಳ ಎಚ್ಚರಿಕೆಯಿಂದ ರಾಜ್ಯಪಟ್ಟಿಯಲ್ಲಿ ಕಾನೂನು ರಚನೆ ಮಾಡಬಹುದು. ಆದ್ರೆ, ಆ ಕಾನೂನು ಭಾರತದ ಒಕ್ಕೂಟ ವ್ಯವಸ್ಥೆ, ಸಾರ್ವಭೌಮತ್ವ, ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ ಧಕ್ಕೆ ತರುವಂತಿರಬಾರದು. ಒಂದು ರಾಜ್ಯದ ಜನರ ಭಾವನೆಗಳಿಗೆ ಅವಕಾಶ ಕೊಡುವುದು ಆ ರಾಜ್ಯಗಳ ಆಡಳಿತಕ್ಕೆ ಇದೆ. ಇಲ್ಲಿ ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರದಂತೆ ನಾಡ ಗೀತೆ ಹಾಗೂ ನಾಡಧ್ವಜಕ್ಕೆ ಅವಮಾನ ಮಾಡುವರನ್ನು ಶಿಕ್ಷಿಸುವ ಕಾನೂನು ರೂಪಿಸಬಹುದು ಎಂದು ವಕೀಲ ಶಂಕರಪ್ಪ ತಿಳಿಸಿದ್ದಾರೆ.
Recommended Video