ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೇ ಮೈಸೂರು ರಾಜಕೀಯ ಪಾರುಪತ್ಯಕ್ಕೆ ಪಕ್ಷಗಳ ಕಸರತ್ತು!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 25: ಹಳೆ ಮೈಸೂರು ಭಾಗದಲ್ಲಿ ರಾಜಕೀಯ ಪಾರುಪತ್ಯ ಸಾಧಿಸಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮುಂದಾಗಿವೆ. ಶೂನ್ಯದಲ್ಲಿದ್ದ ಬಿಜೆಪಿ ನಿಧಾನವಾಗಿ ಒಂದೊಂದೇ ಕ್ಷೇತ್ರವನ್ನು ಆವರಿಸಿಕೊಳ್ಳುತ್ತಿದ್ದರೆ, ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮ ಭದ್ರಕೋಟೆಯನ್ನು ಗಟ್ಟಿ ಮಾಡಿಕೊಳ್ಳಲು ಹೋರಾಟ ನಡೆಸುತ್ತಿವೆ.

ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಹಳೇ ಮೈಸೂರು ಭಾಗದಲ್ಲಿ ತಮ್ಮ ಹಿಡಿತವನ್ನು ಸಾಧಿಸಿಕೊಂಡೇ ಬಂದಿವೆ. ಕಾಂಗ್ರೆಸ್‌ನ ಭದ್ರಕೋಟೆಗಳಿಗೆ ಲಗ್ಗೆಯಿಟ್ಟ ಜೆಡಿಎಸ್ ಪ್ರಾಬಲ್ಯ ಸಾಧಿಸಿದೆ. ಈ ಭಾಗದಲ್ಲಿ ಮೊದಲಿನಿಂದಲೂ ಜೆಡಿಎಸ್ ಮತ್ತು ಕಾಂಗ್ರೆಸ್ ಬದ್ಧವೈರಿಗಳಾಗಿಯೇ ರಾಜಕೀಯ ಮಾಡಿಕೊಂಡು ಬಂದಿವೆ. ಅವುಗಳ ಪೈಪೋಟಿ ನಡುವೆ ಮೂರನೇ ಸ್ಥಾನದಲ್ಲಿ ಬಿಜೆಪಿ ಮುಂದುವರೆಯುವಂತಾಗಿತ್ತು.

ಇವತ್ತಿಗೂ ಬಹಳಷ್ಟು ಕಡೆಗಳಲ್ಲಿ ತಳಮಟ್ಟದಲ್ಲಿ ಜೆಡಿಎಸ್ ಬಲವಾಗಿ ನೆಲೆಯೂರಿದೆ. ಕಾಂಗ್ರೆಸ್‌ನ ಕಾರ್ಯಕರ್ತರನ್ನು ಸೆಳೆದುಕೊಂಡು ಬೆಳೆದಿದೆ. ಇದಕ್ಕೆ ಕಾರಣ ಎಚ್. ಡಿ. ದೇವೇಗೌಡರು ಮತ್ತು ಎಚ್. ಡಿ. ಕುಮಾರಸ್ವಾಮಿ ನಾಯಕತ್ವ ಹಾಗೂ ಒಂದಷ್ಟು ಈ ಭಾಗದ ನಾಯಕರ ಶ್ರಮ ಎಂದರೂ ತಪ್ಪಾಗಲಾರದು. ಹಿಂದೆ ಜನತಾ ಪರಿವಾರದಲ್ಲಿದ್ದ ಬಹಳಷ್ಟು ಘಟಾನುಘಟಿ ನಾಯಕರ ಕೃಪಾಕಟಾಕ್ಷಗಳು ಜೆಡಿಎಸ್ ಮುನ್ನಲೆಗೆ ಬರುವಂತೆ ಮಾಡಿತ್ತು ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ವದಂತಿ; ಎಚ್‌ಡಿಕೆ ಸ್ಪಷ್ಟನೆಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ವದಂತಿ; ಎಚ್‌ಡಿಕೆ ಸ್ಪಷ್ಟನೆ

ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಎದುರಾಳಿಯಾಗಿ ಜೆಡಿಎಸ್ ಬೆಳೆದು ನಿಂತಿತ್ತು. ಆಗ ಸಿದ್ದರಾಮಯ್ಯ ಜೆಡಿಎಸ್‌ನ ಹಳೆ ಮೈಸೂರು ಭಾಗದ ಪ್ರಭಾವಿ ನಾಯಕರಾಗಿದ್ದರು. ಅವರು ಪಕ್ಷ ಬಿಟ್ಟು ಹೋದರೂ, ಪಕ್ಷ ನಿಷ್ಠೆ ಹೊಂದಿರುವ ಬಹಳಷ್ಟು ಹಿರಿಯ ನಾಯಕರು ಇನ್ನು ಕೂಡ ಜೆಡಿಎಸ್‌ ಜತೆಗಿದ್ದಾರೆ. ಹೀಗಾಗಿಯೇ ಈ ಭಾಗದಲ್ಲಿ ಪಕ್ಷ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವಷ್ಟು ಗಟ್ಟಿಯಾಗಿ ಉಳಿದಿದೆ.

ಮೈಸೂರು ಭಾಗಕ್ಕೆ ನಿಧಾನವಾಗಿ ಬಿಜೆಪಿ ಲಗ್ಗೆ

ಮೈಸೂರು ಭಾಗಕ್ಕೆ ನಿಧಾನವಾಗಿ ಬಿಜೆಪಿ ಲಗ್ಗೆ

ಇತ್ತೀಚೆಗಿನ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹವಾದಿಂದಾಗಿ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಹೋಗುವಂತೆ ಮಾಡಿದೆ. ಕರಾವಳಿ ಭಾಗದಲ್ಲಿ ಬಿಜೆಪಿ ಒಂದಷ್ಟು ಪ್ರಬಲವಾಗಿತ್ತು. ಅದರ ಪ್ರಭಾವ ಕೊಡಗಿನ ಮೇಲೆ ನೇರ ಪರಿಣಾಮ ಬೀರಿತು. ಬಿಜೆಪಿಯನ್ನು ಭದ್ರಕೋಟೆಯನ್ನಾಗಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ನ್ನು ಮೂಲೆಗುಂಪು ಮಾಡಿತು. ಅಲ್ಲಿ ಜೆಡಿಎಸ್ ನೆಲೆಯೂರಲು ಸಾಧ್ಯವಾಗಲೇ ಇಲ್ಲ.

ಅತ್ತ ಹಾಸನ ಮಾಜಿ ಪ್ರಧಾನಿ ದೇವೇಗೌಡರ ತವರು ಕ್ಷೇತ್ರ, ಜತೆಗೆ ಮಾಜಿ ಸಚಿವ ಎಚ್. ಡಿ. ರೇವಣ್ಣ ಮತ್ತು ಕುಟುಂಬದ ಭದ್ರಕೋಟೆಯಾಗಿದೆ. ಇಲ್ಲಿ ಜೆಡಿಎಸ್ ನದ್ದೇ ಹವಾ. ಆದರೂ ಅಲ್ಲಿಗೆ ಬಿಜೆಪಿ ಲಗ್ಗೆಯಿಟ್ಟಿದೆ. ಹಾಗೆ ಸುಮ್ಮನೆ ಗಮನಿಸಿ ನೋಡಿದರೆ ಬಿಜೆಪಿ ನಿಧಾನವಾಗಿ ಒಂದೊಂದೇ ಜಿಲ್ಲೆಗೆ ಎಂಟ್ರಿ ಕೊಡುತ್ತಲೇ ಸಾಗುತ್ತಿದೆ. ಇದು ಜೆಡಿಎಸ್ ಮತ್ತು ಕಾಂಗ್ರೆಸ್ ಗೆ ಅಘಾತಕಾರಿ ಎಂದರೆ ತಪ್ಪಾಗಲಾರದು.

ಪಕ್ಷಾಂತರಿಗಳಿಗೆ 10 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು: ಸಿದ್ದರಾಮಯ್ಯಪಕ್ಷಾಂತರಿಗಳಿಗೆ 10 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು: ಸಿದ್ದರಾಮಯ್ಯ

ಕಾಂಗ್ರೆಸ್‌-ಜೆಡಿಎಸ್ ನಡುವಿನ ಸ್ಪರ್ಧೆ ಬಿಜೆಪಿಗೆ ಲಾಭ?

ಕಾಂಗ್ರೆಸ್‌-ಜೆಡಿಎಸ್ ನಡುವಿನ ಸ್ಪರ್ಧೆ ಬಿಜೆಪಿಗೆ ಲಾಭ?

ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಹೀಗೆ ಬಹುತೇಕ ಭಾಗಗಳಲ್ಲಿ ಬಿಜೆಪಿ ಪ್ರಬಲವಾಗಿದೆ. ಆದರೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಸ್ಪರ್ಧೆ ನೀಡುವುದು ಕಷ್ಟವಾಗಿತ್ತು. ಹೀಗಾಗಿ ಅದು ಮೂರನೇ ಸ್ಥಾನದಲ್ಲಿತ್ತು. ಆದರೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಈ ಹಿಂದಿನಿಂದಲೂ ಸಂಘಟನೆ ಮಾಡುತ್ತಲೇ ಬಂದಿದೆ. ಅದು ಕೈಕಟ್ಟಿ ಕುಳಿತಂತೆ ಕಾಣುತ್ತಿಲ್ಲ. ಅದರ ಪರಿಣಾಮವೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಒಂದಷ್ಟು ಸ್ಥಾನಗಳನ್ನು ಗೆಲ್ಲುವಂತಾಯಿತು.

ಈ ಹಿಂದೆ ರಾಜಕೀಯವಾಗಿ ಈ ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿಯಿತ್ತು. ಈಗ ಅದೆರಡು ಪಕ್ಷಗಳು ಪೈಪೋಟಿಗಿಳಿದರೆ ಅದರ ಲಾಭ ಬಿಜೆಪಿಗೆ ಆಗುವ ಮಟ್ಟಕ್ಕೆ ಬೆಳೆದು ನಿಂತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲ ವಿರೋಧಿಗಳಾದಷ್ಟು ಅದರ ಲಾಭವನ್ನು ಬಿಜೆಪಿ ಸುಲಭವಾಗಿ ಪಡೆದುಕೊಳ್ಳಲಿದೆ.

ಪ್ರಭಾವಿ ರೆಬಲ್ ನಾಯಕರನ್ನು ಸೆಳೆಯುತ್ತಿರುವ ಬಿಜೆಪಿ

ಪ್ರಭಾವಿ ರೆಬಲ್ ನಾಯಕರನ್ನು ಸೆಳೆಯುತ್ತಿರುವ ಬಿಜೆಪಿ

ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿರುವ ಬಿಜೆಪಿ ಈಗಾಗಲೇ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿದ್ದ ಕೆಲವು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಇನ್ನು ಮಂಡ್ಯದಲ್ಲಿ ಜೆಡಿಎಸ್ ಭದ್ರಕೋಟೆಗೆ ನುಗ್ಗಿ ಖಾತೆ ತೆರೆದಿದೆ. ಮುಂದಿನ ಚುನಾವಣೆ ವೇಳೆಗೆ ಸಂಘಟನೆಯ ಜೊತೆಗೆ ಪ್ರಭಾವಿ ನಾಯಕರಿಗೆ ಗಾಳ ಹಾಕುವ ಮೂಲಕ ಆಪರೇಷನ್ ಕಮಲಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಈಗಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಭುಗಿಲೆದ್ದಿವೆ. ಒಂದಷ್ಟು ನಾಯಕರು ಪಕ್ಷ ಬಿಟ್ಟು ಹೊರಬರುವ ಸಾಧ್ಯತೆಯಿದೆ. ಅವರನ್ನೆಲ್ಲ ಟಾರ್ಗೆಟ್ ಮಾಡಲಿರುವ ಬಿಜೆಪಿ ಮುಂದಿನ ಚುನಾವಣೆ ಹೊತ್ತಿಗೆ ಅಪ್ಪಿಕೊಂಡರೂ ಅಚ್ಚರಿಪಡುವಂತಿಲ್ಲ.

ಇನ್ನು ಮೈಸೂರು ಭಾಗದಲ್ಲಿ ಜೆಡಿಎಸ್‌ನ ಮತ್ತು ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿದ್ದ ಜಿ. ಟಿ. ದೇವೇಗೌಡರು ಪಕ್ಷವನ್ನು ತೊರೆಯುವುದು ದಿಟವಾಗಿದೆ. ಅವರು ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬುದರ ಬಗ್ಗೆ ಇನ್ನೆರಡು ತಿಂಗಳಲ್ಲಿ ತಿಳಿಸಲಿದ್ದಾರೆ. ಅವರಿಗೆ ಪರ್ಯಾಯವಾಗಿ ಜೆಡಿಎಸ್ ನ ಕೆ. ಆರ್. ನಗರದ ಶಾಸಕ ಸಾ.ರಾ.ಮಹೇಶ್ ಅವರಿಗೆ ಪಟ್ಟಾಭಿಷೇಕ ಮಾಡಲು ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.

ಕ್ಷೇತ್ರ ಆಯ್ಕೆಯ ಗೊಂದಲದಲ್ಲಿ ಸಿದ್ದರಾಮಯ್ಯ

ಕ್ಷೇತ್ರ ಆಯ್ಕೆಯ ಗೊಂದಲದಲ್ಲಿ ಸಿದ್ದರಾಮಯ್ಯ

ಕಾಂಗ್ರೆಸ್ ಏನೇ ಆದರೂ ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಯಲು ಬಿಡಬಾರದು ಎಂಬ ನಿರ್ಧಾರಕ್ಕೆ ಬಂದಿದೆ. ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ತವರು ಜಿಲ್ಲೆಯಾಗಿದ್ದರೂ ಮೈಸೂರಿನಲ್ಲಿ ಸ್ಪರ್ಧಿಸಲು ಸಮರ್ಪಕವಾದ ಕ್ಷೇತ್ರ ಸಿಗದ ಕಾರಣದಿಂದ ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಅವರು ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ? ಎನ್ನುವುದೇ ಗೊಂದಲದಲ್ಲಿದೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಎಲ್ಲಿಯೇ ಸ್ಪರ್ಧಿಸಿದರೂ ಅವರಿಗೆ ಜೆಡಿಎಸ್ ಮತ್ತು ಬಿಜೆಪಿ ಪ್ರಬಲ ವಿರೋಧಿಗಳಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅವರು ಮೈಸೂರು ಭಾಗದಲ್ಲಿ ಕಾಂಗ್ರೆಸ್ ಅನ್ನು ಹೇಗೆ ಗೆಲ್ಲಿಸಿಕೊಂಡು ಬರುತ್ತಾರೆ ಎಂಬುದು ಅಷ್ಟೇ ಕುತೂಹಲಕಾರಿಯಾಗಿದೆ. ಒಟ್ಟಿನಲ್ಲಿ ಹಳೇ ಮೈಸೂರು ಭಾಗದತ್ತ ಮೂರು ಪಕ್ಷಗಳು ಕಣ್ಣಿಟ್ಟಿದ್ದು, ಗೆಲುವಿಗೆ ಯಾವ ತಂತ್ರಗಳನ್ನು ಮಾಡುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

English summary
BJP, JDS and Congress planning to dominate in old Mysuru power politics know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X