3 ಮುಜರಾಯಿ ದೇವಾಲಯಗಳಲ್ಲಿ 'ಸಪ್ತಪದಿ' ವಿವಾಹವಿಲ್ಲ
ಬೆಂಗಳೂರು, ಫೆಬ್ರವರಿ 20: ಕರ್ನಾಟಕ ರಾಜ್ಯ ಮುಜರಾಯಿ ಇಲಾಖೆ ವತಿಯಿಂದ ಏಪ್ರಿಲ್ 26 ಹಾಗೂ ಮೇ 25ರಂದು 'ಸಪ್ತಪದಿ' ಸರಳ ಸಾಮೂಹಿಕ ವಿವಾಹ ನಡೆಸಲಾಗುತ್ತದೆ. ಆದರೆ, ಕೆಲವು ದೇವಾಲಯಗಳು ಸಾಮೂಹಿಕ ವಿವಾಹ ಆಯೋಜನೆ ಮಾಡಲು ಸಾಧ್ಯವಿಲ್ಲ ಎಂದು ಇಲಾಖೆಗೆ ಪತ್ರ ಬರೆದಿವೆ.
ಉತ್ತರ ಕನ್ನಡ ಜಿಲ್ಲೆಯ ಎರಡು ದೇವಾಲಯಗಳು ಸೇರಿದಂತೆ ಒಟ್ಟು 3 ದೇವಾಲಯಗಳು ಸಾಮೂಹಿಕ ವಿವಾಹ ಆಯೋಜನೆ ಮಾಡುವುದಿಲ್ಲ ಎಂದು ಹೇಳಿವೆ. ಎರಡು ದೇವಾಲಯಗಳು ಮಾತ್ರ ಏಕೆ ಆಯೋಜನೆ ಮಾಡಲು ಸಾಧ್ಯವಿಲ್ಲ? ಎಂದು ಸರ್ಕಾರಕ್ಕೆ ಪತ್ರ ಬರೆದಿವೆ.
ಸರ್ಕಾರದಿಂದ ಸಾಮೂಹಿಕ ವಿವಾಹ; ನೋಂದಣಿ ಹೇಗೆ?
ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ 'ಎ' ವರ್ಗದ ದೇವಾಲಯಗಳಲ್ಲಿ ಸಾಮೂಹಿಕ ವಿವಾಹವನ್ನು ಆಯೋಜನೆ ಮಾಡುವ ಕುರಿತು ಸಭೆಗಳನ್ನು ನಡೆಸುತ್ತಿದ್ದಾರೆ.
ಮುಜರಾಯಿ ದೇವಾಲಯದಲ್ಲಿ ಸಾಮೂಹಿಕ ವಿವಾಹ; ಮುಹೂರ್ತ ನಿಗದಿ
ಏಪ್ರಿಲ್ 26 ಮತ್ತು ಮೇ 25ರಂದು ನಡೆಯಲಿರುವ ಸಾಮೂಹಿಕ ವಿವಾಹಕ್ಕೆ 'ಸಪ್ತಪದಿ' ಎಂದು ಹೆಸರು ಇಡಲಾಗಿದೆ. ಮುಜರಾಯಿ ಇಲಾಖೆ ಈ ಕಾರ್ಯಕ್ರಮದ ಲಾಂಛನವನ್ನು ಸಹ ಬಿಡುಗಡೆ ಮಾಡಿದೆ.
ಸರಳವಾಗಿ ನಡೆದ ಇನ್ಫೋಸಿಸ್ ನಾರಾಯಣಮೂರ್ತಿ ಮಗನ ವಿವಾಹ
ಯಾವ-ಯಾವ ದೇವಾಲಯಗಳು
ಒಟ್ಟು ಮೂರು ದೇವಾಲಯಗಳು ಸಾಮೂಹಿಕ ವಿವಾಹ ಆಯೋಜನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿವೆ. ಇಡಗುಂಜಿ ದೇವಾಲಯ, ಭಟ್ಕಳದ ಅಳ್ವೆಕೋಡಿ ದುರ್ಗಾ ಪರಮೇಶ್ವರಿ ದೇವಾಲಯ, ಶಿರಸಿಯ ಮಾರಿಕಾಂಬ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಯುವುದಿಲ್ಲ.
ನ್ಯಾಯಾಲಯದ ಅನುಮತಿ ಬೇಕು
ಇಡಗುಂಜಿ ದೇವಾಲಯದ ವಿವಾದ ಸುಪ್ರೀಂಕೋರ್ಟ್ನಲ್ಲಿದೆ. ಯಾವುದೇ ಹೊಸ ಕಾರ್ಯಕ್ರಮ ಆಯೋಜನೆ ಮಾಡಲು ನ್ಯಾಯಾಲಯದ ಅನುಮತಿ ಪಡೆಯಬೇಕಿದೆ. ಆದ್ದರಿಂದ, ನಾವು ವಿವಾಹ ನಡೆಸಲು ಸಾಧ್ಯವಿಲ್ಲ ಎಂದು ಮುಜರಾಯಿ ಇಲಾಖೆಗೆ ದೇವಾಲಯದ ಆಡಳಿತ ಮಂಡಳಿ ಪತ್ರ ಬರೆದಿದೆ.
ಏಕೆ ವಿವಾಹ ನಡೆಸುವುದಿಲ್ಲ
ಭಟ್ಕಳದ ಅಳ್ವೆಕೋಡಿ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಕಟ್ಟಡ ನವೀಕರಣ ಕಾರ್ಯ ನಡೆಯುತ್ತಿದೆ. ಆದ್ದರಿಂದ, ಸಾಮೂಹಿಕ ವಿವಾಹ ನಡೆಸಲಾಗುತ್ತಿಲ್ಲ. ಶಿರಸಿ ಮಾರಿಕಾಂಬ ದೇವಾಲಯ ಈ ಬಗ್ಗೆ ಯಾವುದೇ ಉತ್ತರ ನೀಡಿಲ್ಲ.
ಸರ್ಕಾರದಿಂದ ಪ್ರೋತ್ಸಾಹ ಧನ
'ಸಪ್ತಪದಿ' ಕಾರ್ಯಕ್ರಮದ ಮೂಲಕ ವಿವಾಹವಾಗುವ ವರನಿಗೆ ಪೋತ್ಸಾಹಧನವಾಗಿ 5000 ರೂ. ವಧು 10000 ರೂ. ನೀಡಲಾಗುತ್ತದೆ. ವಧುವಿಗೆ ಚಿನ್ನದ ತಾಳಿ, ಚಿನ್ನದ ಗುಂಡು (ಅಂದಾಜು 8 ಗ್ರಾಂ ತೂಕ) ಇದಕ್ಕಾಗಿ 40000 ಕೊಡಲಾಗುತ್ತದೆ. ಹಣವನ್ನು ವಿವಾಹವಾದ ದಿನವೇ ಸಂಬಂಧಪಟ್ಟ ವಧು-ವರರ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಜಮೆ ಮಾಡಲಾಗುತ್ತದೆ.