ಕನಕಪುರ ಮಾರ್ಗದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ 3 ಅಡಿ ನೀರು
ರಾಮನಗರ, ಅಕ್ಟೋಬರ್ 11: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುರಿದ ಜೋರು ಮಳೆಯಿಂದ ಬಹುತೇಕ ಕೆರೆ- ಕಟ್ಟೆಗಳು ಭರ್ತಿಯಾಗಿ ಕೋಡಿ ಹರಿದಿವೆ. ಕನಕಪುರ ತಾಲೂಕಿನ ಹಾರೋಹಳ್ಳಿ ಸಮೀಪದ ಗಾಣಾಳುದೊಡ್ಡಿ ಕೆರೆ ಕೋಡಿ ಒಡೆದ ಪರಿಣಾಮ ಬೆಂಗಳೂರು- ಕನಕಪುರ-ಮೈಸೂರು ಹೆದ್ದಾರಿ ನದಿಯಂತಾಗಿದೆ.
ಭೈರವಾಡಗಿಯಲ್ಲಿ ಗೋಡೆ ಕುಸಿದು ತಾಯಿ-ಮಗಳ ಸಾವು
ರಸ್ತೆಯಲ್ಲಿ ಮೂರು ಅಡಿಯಷ್ಟು ನೀರು ಹರಿಯುತ್ತಿದೆ. ಇದರಿಂದಾಗಿ ಕನಕಪುರ ಮಾರ್ಗದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಕೆರೆ ಕೋಡಿ ಸಮೀಪ ನಾಲ್ಕು ಅಡಿಯಷ್ಟು ನೀರು ಹರಿಯುತ್ತಿದ್ದು, ರಸ್ತೆಯ ಎರಡೂ ಕಡೆ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ.
ನೀರು ಸರಾಗವಾಗಿ ಹರಿದು ಹೊರಹೋಗದ ಪರಿಣಾಮ ರಸ್ತೆಯ ತುಂಬ ನಿಂತಿರುವುದು ಕಂಡುಬಂದಿದೆ. ಶಾಲೆ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಗಳಿಗೆ ಹೊರಟ ಜನರಿಗೆ ತೊಂದರೆಯಾಗಿದೆ. ಸ್ಥಳಕ್ಕೆ ಹಾರೋಹಳ್ಳಿ ಪೋಲಿಸರು ಭೇಟಿ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ನೀರಿನ ಹರಿವು ಕಡಿಮೆಯಾಗುವ ತನಕ ಸಂಚಾರ ನಿಲ್ಲಿಸಲಾಗಿದೆ.