ತಜ್ಞರ ಸಮಿತಿ ವರದಿ ಆಧರಿಸಿ PUC ಫಲಿತಾಂಶ ಪ್ರಕಟ: ಸುರೇಶ್ ಕುಮಾರ್
ಬೆಂಗಳೂರು, ಜೂ. 28: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜುಲೈ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆ ಇಲ್ಲದೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪಾಸು ಮಾಡುವ ತೀರ್ಮಾನವನ್ನು ಶಿಕ್ಷಣ ಇಲಾಖೆ ಪ್ರಕಟಿಸಿತ್ತು. ಶಿಕ್ಷಣ ಇಲಾಖೆಯ ತೀರ್ಮಾನವನ್ನು ಪ್ರಶ್ನಿಸಿ ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಫರೀಕ್ಷಾ ಫಲಿತಾಂಶ ಕುರಿತು ಹೈಕೋರ್ಟ್ ಗಡುವು ನೀಡಿತ್ತು. ಈ ಹಿನ್ನೆಲೆಯಲ್ಲಿ ಜುಲೈ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ನಿರ್ಧಾರವನ್ನು ಶಿಕ್ಷಣ ಸಚಿವರು ಪ್ರಕಟಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ಹಾಗೂ ಪಿಯುಸಿ ಫಲಿತಾಂಶ ಕುರಿತ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವರು, ಪಿಯುಸಿ ಫಲಿತಾಂಶ ಮಾನದಂಡ ಕುರಿತು ಹದಿನೆಂಟು ತಜ್ಞರುಗಳುಳ್ಳ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸಮಿತಿ ವರದಿಯನ್ನು ನೀಡಿದೆ. ಅದರಂತೆ ಜುಲೈ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ 2021 ದಿನಾಂಕ ಪ್ರಕಟ
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ದೇಶದಲ್ಲಿ ಸಿಬಿಎಸ್ಇ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಇದರ ಬೆನ್ನಲ್ಲೇ ಅನೇಕ ರಾಜ್ಯಗಳಲ್ಲಿ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿತ್ತು. ಅದರಂತೆ ರಾಜ್ಯದಲ್ಲಿ ಕೂಡ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿ ಶಿಕ್ಷಣ ಇಲಾಖೆ ತೀರ್ಮಾನ ಪ್ರಕಟಿಸಿತ್ತು. ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಮಾಡುವುದನ್ನು ಪ್ರಶ್ನಿಸಿ ಪೋಷಕರು ಹೈಕೋರ್ಟ್ ಮೊರೆ ಹೊಗಿದ್ದರು. ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತ್ತು. ರೆಗ್ಯುಲರ್ ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಬೇಕು. ತಾರತಮ್ಯಕ್ಕೆ ಅವಕಾಶವಿಲ್ಲ. ಯಾವ ಮಾನದಂಡ ಇಟ್ಟುಕೊಂಡು ಪಿಯುಸಿ ಫಲಿತಾಂಶ ಪ್ರಕಟಿಸುತ್ತೀರಿ ಎಂದು ಕೋರ್ಟ್ ಪ್ರಶ್ನೆ ಮಾಡಿತ್ತು.
ಈ ಹಿನ್ನೆಲೆಯಲ್ಲಿ ರಚನೆಯಾಗಿದ್ದ ಹದಿನೆಂಟು ಸದಸ್ಯರ ತಜ್ಞರ ಸಮಿತಿ ವರದಿಯನ್ನು ಸಿದ್ಧಪಡಿಸಿದೆ. ಎಸ್ಎಸ್ಎಲ್ಸಿ ಹಾಗೂ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಳಿಸಿರುವ ಅಂಕ ಆಧರಿಸಿ ಫಲಿತಾಂಶ ನೀಡಲು ತಜ್ಞರ ಸಮಿತಿ ಶಿಫಾರಸು ಮಾಡಿದೆ ಎನ್ನಲಾಗಿದೆ. ಆದರೆ ಎಸ್ಎಸ್ಎಲ್ಸಿ ಎಷ್ಟು ಪ್ರಮಾಣ ಸ್ವೀಕರಿಸಬೇಕು? ಪ್ರಥಮ ಪಿಯುಸಿ ಎಷ್ಟು ಪ್ರಮಾಣವನ್ನು ಪರಿಗಣಿಸಬೇಕು ಎಂಬುದರ ಬಗ್ಗೆ ಸಮಿತಿ ಸಿಫಾರಸಿನಲ್ಲಿ ಉಲ್ಲೇಖಿಸಿದೆ.
Recommended Video
ಆದರೆ, ಈಗಾಗಲೇ ಪಿಯುಸಿ ಪರೀಕ್ಷೆ ಬರೆದು ಫೇಲ್ ಆಗಿರುವ ಪುನರಾವರ್ತಿತ ಅಭ್ಯರ್ಥಿಗಳನ್ನು ಪಾಸು ಮಾಡುವ ವಿಚಾರದಲ್ಲಿ ಸರ್ಕಾರ ಗೊಂದಲಕ್ಕೀಡಾಗಿದೆ ಎನ್ನಲಾಗಿದೆ. ಅಂತೂ ಎಸ್ಎಸ್ಎಲ್ಸಿ ಪರೀಕ್ಷೆ ಮೊದಲೇ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ಆ ಬಳಿಕ ಸಿಇಟಿ ನಡೆಯಲಿದ್ದು, ಅದರ ಆಧಾರದ ಮೇಲೆ ಇಂಜಿನಿಯರಿಂಗ್ ಹಾಗೂ ವೈದ್ಯ ಪದವಿ ವೃತ್ತಿಪರ ಕೋರ್ಸ್ ಗಳ ದಾಖಲಾಗಿ ಪ್ರತಿಕ್ರಿಯೆ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.