ಫಲಿತಾಂಶ ತಿರಸ್ಕರಿಸಿ ಪರೀಕ್ಷೆ ಬರೆದಿದ್ದ ಶೇ.93.92 ವಿದ್ಯಾರ್ಥಿಗಳು ಪಾಸ್
ಬೆಂಗಳೂರು, ಸೆ. 20: ಪಿಯುಸಿ ಪರೀಕ್ಷಾ ಮಂಡಳಿ ಫಲಿತಾಂಶ ತಿರಸ್ಕರಿಸಿ ಪರೀಕ್ಷೆ ಬರೆದಿದ್ದ 592 ಅಭ್ಯರ್ಥಿಗಳ ಪೈಕಿ 556 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. 36 ಅಭ್ಯರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಎಸ್ಎಸ್ಎಲ್ಸಿ ಹಾಗೂ ಪ್ರಥಮ ಪಿಯುಸಿ ಪರೀಕ್ಷಾ ಅಂಕಗಳ ಮಾನದಂಡ ಆಧರಿಸಿ ನೀಡಿದ್ದ ಫಲಿತಾಂಶ ಒಪ್ಪಿಕೊಳ್ಳದ ವಿದ್ಯಾರ್ಥಿಗಳ ಪೈಕಿ 36 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಇನ್ನು ಖಾಸಗಿ ಅಭ್ಯರ್ಥಿಗಳು ಸೇರಿದಂತೆ ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 18,413 ಅಭ್ಯರ್ಥಿಗಳು ಹಾಜರಾಗಿದ್ದರು. ಅದರಲ್ಲಿ 5,507 ಅಭ್ಯರ್ಥಿಗಳು (ಶೇ.29.91) ತೇರ್ಗಡೆಗೊಂಡಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶದ ವಿವರಗಳನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸೋಮವಾರ ವಿಧಾನಸೌಧದ ಕಚೇರಿಯಲ್ಲಿ ಪ್ರಕಟಿಸಿದರು.
KCET Result 2021: ಸಿಇಟಿ ಫಲಿತಾಂಶ ಪ್ರಕಟ, ಇಲ್ಲಿದೆ ಟಾಪರ್ಸ್ ಲಿಸ್ಟ್
ನಾಲ್ಕು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಸಲಾಗಿದೆ. ಪಿ.ಯು ಮಂಡಳಿಯಿಂದ ನೀಡಲಾಗಿದ್ದ ಫಲಿತಾಂಶವನ್ನು ತಿರಸ್ಕರಿಸಿ 592 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 556 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. 36 ಅಭ್ಯರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಪುನರಾವರ್ತಿತ 351 ಅಭ್ಯರ್ಥಿಗಳ ಪೈಕಿ 183 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. 168 ಅಭ್ಯರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. 17,470 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 4,768 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಖಾಸಗಿ ಅಭ್ಯರ್ಥಿಗಳಲ್ಲಿ ಶೇ. 25 ರಷ್ಟು ವಿದ್ಯಾರ್ಥಿಗಳಷ್ಟೇ ಉತ್ತೀರ್ಣರಾಗಿದ್ದು, ಉಳಿದವರು ಅನುತ್ತೀರ್ಣರಾಗಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆ ರದ್ದುಗೊಳಿಸಿದ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಆಧಾರದ ಮೇಲೆ ಅಂಕ ನೀಡಿ ತೇರ್ಗಡೆಗೊಳಿಸಲಾಗಿತ್ತು. ಎಲ್ಲರನ್ನು ಉತ್ತೀರ್ಣಗೊಳಿಸಿ ಪಿಯು ಮಂಡಳಿ ಪ್ರಕಟಿಸಿದ್ದ ಫಲಿತಾಂಶ ತೃಪ್ತಿಕರವಾಗಿಲ್ಲ ಎಂದು ಕೆಲವು ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಇದಕ್ಕೆ ಪಿಯು ಪರೀಕ್ಷಾ ಮಂಡಳಿಯೂ ಅವಕಾಶ ಕಲ್ಪಿಸಿತ್ತು. ಕಲಾ ವಿಭಾಗದಲ್ಲಿ ಶೇ.32.06ರಷ್ಟು ಅಭ್ಯರ್ಥಿಗಳು, ವಾಣಿಜ್ಯ ವಿಭಾಗದಲ್ಲಿ ಶೇ.24.98 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.70.83ರಷ್ಟು ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದಾರೆ. ತೇರ್ಗಡೆಗೊಂಡವರಲ್ಲಿ ಬಾಲಕಿಯರ ಪ್ರಮಾಣ ಶೇ.36.72ರಷ್ಟು ಇದೆ. ಬಾಲಕರ ತೇರ್ಗಡೆ ಪ್ರಮಾಣ ಶೇ.26.02ರಷ್ಟು ಇದೆ.
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಗ್ರಾಮಾಂತರ ಉತ್ತೀರ್ಣ ಫಲಿತಾಂಶ: ಗ್ರಾಮಾಂತರ ಪ್ರದೇಶದ ಶೇ.32.59 ಅಭ್ಯರ್ಥಿಗಳು ಮತ್ತು ನಗರ ಪ್ರದೇಶದ ಶೇ.28.62ರಷ್ಟು ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ತೆಗೆದುಕೊಂಡ ಶೇ.31.72ರಷ್ಟು ಅಭ್ಯರ್ಥಿಗಳು ಮತ್ತು ಇಂಗ್ಲೀಷ್ನಲ್ಲಿ ಪರೀಕ್ಷೆ ತೆಗೆದುಕೊಂಡ ಶೇ.26.08ರಷ್ಟು ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದಾರೆ. ಕಲಾ ವಿಭಾಗದಲ್ಲಿ ಗರಿಷ್ಠ 592 ಅಂಕ ಸಾಧನೆ ಮಾಡಲಾಗಿದೆ. ವಾಣಿಜ್ಯ ಸಂಯೋಜನೆಯಲ್ಲಿ ಗರಿಷ್ಠ 594 ಅಂಕ ಮತ್ತು ವಿಜ್ಞಾನ ಸಂಯೋಜನೆಯಲ್ಲಿ ಗರಿಷ್ಠ 568 ಅಂಕ ಗಳಿಸಿದ್ದಾರೆ. ಅದರಲ್ಲಿ ಉನ್ನತ ಶ್ರೇಣಿಯಲ್ಲಿ (ಶೇ.85ಕ್ಕಿಂತ ಹೆಚ್ಚು ಅಂಕ) 580 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಪ್ರಥಮ ದರ್ಜೆಯಲ್ಲಿ 1,939, ದ್ವಿತೀಯ ದರ್ಜೆ 1,578 ಮತ್ತು ಶೇ.50ಕ್ಕಿಂತ ಕಡಿಮೆ ಅಂಕಗಳೊಂದಿಗೆ 1,410 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
Recommended Video
ಪರೀಕ್ಷೆ ಬರೆದವರಿಗೆ ಮರು ಮೌಲ್ಯಮಾಪನಕ್ಕೆ ಅವಕಾಶ: ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಸೆ.20ರಿಂದ ಸೆ.25ರವರೆಗೆ ಅವಕಾಶವಿದೆ. ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬಹುದು' ಎಂದು ಸಚಿವ ನಾಗೇಶ್ ತಿಳಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಆರ್.ಸ್ನೇಹಲ್ ಉಪಸ್ಥಿತರಿದ್ದರು.