ಬ್ರೇಕಿಂಗ್: ಕರ್ನಾಟಕದಲ್ಲಿ ಕೊವಿಡ್-19ಗೆ ನಾಲ್ಕು ಮಂದಿ ಬಲಿ!
ಬೆಂಗಳೂರು, ಜೂನ್.04: ರಾಜ್ಯದಲ್ಲಿ ಗುರುವಾರ ಕೂಡಾ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಸ್ಫೋಟವಾಗಿದೆ. ಕಳೆದ 24 ಗಂಟೆಗಳಲ್ಲಿ 257ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯು 4,320ಕ್ಕೆ ಏರಿಕೆಯಾಗಿದೆ.
Recommended Video
ಗುರುವಾರ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ರಾಜ್ಯದ ಜನರಿಗೆ ಆಘಾತವನ್ನು ನೀಡಿದೆ. ಕಳೆದ 24 ಗಂಟೆಗಳಲ್ಲಿ ಕೊವಿಡ್-19 ಸೋಂಕಿನಿಂದ ನಾಲ್ವರು ಪ್ರಾಣ ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ಕೊರೊನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆಯು 57ಕ್ಕೆ ಏರಿಕೆಯಾಗಿದೆ.
ಭಾರತವನ್ನು 2019ರಲ್ಲೇ ಪ್ರವೇಶಿಸಿತ್ತು ಕೊರೊನಾವೈರಸ್!
ಕೃಷ್ಣನಗರಿಯಲ್ಲಿ ಮತ್ತೊಮ್ಮೆ ನೊವೆಲ್ ಕೊರೊನಾ ವೈರಸ್ ಮಹಾಸ್ಫೋಟ ಸಂಭವಿಸಿದೆ. ಇಂದು ಬಿಡುಗಡೆಯಾದ ಹೆಲ್ತ್ ಬುಲೆಟಿನ್ ನಲ್ಲಿ ಉಡುಪಿ ಜಿಲ್ಲೆ ಒಂದರಲ್ಲೇ ಬರೋಬ್ಬರಿ 92 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವುದು ದೃಢಪಟ್ಟಿದೆ.
24 ಗಂಟೆಗಳಲ್ಲಿ ಕೊರೊನಾ ವೈರಸ್ ನಿಂದ ನಾಲ್ವರು ಸಾವು
ಕರ್ನಾಟಕದಲ್ಲಿ ಕೊರೊನಾ ವೈರಸ್ ನಿಂದ ಒಂದೇ ದಿನ ನಾಲ್ವರು ಬಲಿಯಾಗಿದ್ದಾರೆ. 4,220ನೇ ರೋಗಿ ಆಗಿರುವ ಬೆಂಗಳೂರಿನ ನಿವಾಸಿ 65 ವರ್ಷದ ಮಹಿಳೆ ತೀವ್ರ ಉಸಿರಾಟ ತೊಂದರೆಯಿಂದ ಪ್ರಾಣ ಬಿಟ್ಟಿದ್ದಾರೆ. ಬೆಂಗಳೂರಿನ ಮತ್ತೊಬ್ಬ ನಿವಾಸಿ 4,317ನೇ ರೋಗಿ ಆಗಿರುವ 60 ವರ್ಷದ ಮಹಿಳೆ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ. ದಾವಣಗೆರೆ ಜಿಲ್ಲೆಯ ನಿವಾಸಿಯಾಗಿರುವ 4,093ನೇ ರೋಗಿ ಆಗಿದ್ದ 83 ವರ್ಷದ ವೃದ್ಧೆ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಗದಗ ಜಿಲ್ಲೆಯಲ್ಲಿ 4,082ನೇ ರೋಗಿಯಾಗಿದ್ದ 44 ವರ್ಷದ ಪುರುಷ ಮಹಾಮಾರಿಯಿಂದ ಅಸುನೀಗಿದ್ದಾರೆ.
ಒಬ್ಬರಿಂದ 30 ಮಂದಿಗೆ ಕೊರೊನಾ ವೈರಸ್ ಸೋಂಕು
ರಾಯಚೂರಿನಲ್ಲಿ ಒಂದೇ ದಿನ 88 ಮಂದಿಗೆ ನೊವೆಲ್ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವುದು ದೃಢಪಟ್ಟಿದೆ. ಈ ಪೈಕಿ ಕೊರೊನಾ ವೈರಸ್ ರೋಗಿ ಸಂಖ್ಯೆ 2612ರ ಸಂಪರ್ಕದಿಂದ ಬರೋಬ್ಬರಿ 30 ಮಂದಿಗೆ ಸೋಂಕು ಅಂಟಿಕೊಂಡಿರುವುದು ಪತ್ತೆಯಾಗಿದೆ.
ರಾಜ್ಯದಲ್ಲಿ ಜಿಲ್ಲಾವಾರು ಕೊವಿಡ್-19 ಸೋಂಕಿತ ಪ್ರಕರಣ
ಕರ್ನಾಟಕದಲ್ಲಿ ಗುರುವಾರ ಒಂದೇ ದಿನ 257 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಉಡುಪಿ -92, ರಾಯಚೂರು - 88, ಮಂಡ್ಯ - 15, ಹಾಸನ - 15, ದಾವಣಗೆರೆ - 13, ಬೆಳಗಾವಿ- 12, ಬೆಂಗಳೂರು ನಗರ - 9, ದಕ್ಷಿಣ ಕನ್ನಡ - 4, ಗದಗ - 2, ಚಿಕ್ಕಬಳ್ಳಾಪುರ - 2, ವಿಜಯಪುರ - 1, ಮೈಸೂರು -1, ಬಳ್ಳಾರಿ -1, ತುಮಕೂರು - 1, ಹಾವೇರಿ - 1 ಮಂದಿಗೆ ಸೋಂಕು ದೃಢಪಟ್ಟಿದೆ.
ಕರ್ನಾಟಕದಲ್ಲಿ ಗುರುವಾರ ಗುಣಮುಖರಾದ ಸೋಂಕಿತರೆಷ್ಟು?
ರಾಜ್ಯದಲ್ಲಿ 267 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದರೆ ಇಂದು ಒಂದೇ ದಿನ 106 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮಂಡ್ಯ - 52, ಉಡುಪಿ - 20, ದಕ್ಷಿಣ ಕನ್ನಡ - 11, ದಾವಣಗೆರೆ -7, ಚಿಕ್ಕಮಗಳೂರು - 5, ಶಿವಮೊಗ್ಗ -4, ಬಳ್ಳಾರಿ - 3, ಧಾರವಾಡ - 2, ವಿಜಯಪುರ - 1, ಮೈಸೂರು - 1 ಸೇರಿದಂತೆ ರಾಜ್ಯದಲ್ಲಿ ಒಟ್ಟು 1,610 ಸೋಂಕಿತರು ಗುಣಮುಖರಾಗಿದ್ದಾರೆ.