ನಾಳೆ ರಾಜ್ಯದ ಮೊದಲ ಹಂತದ ಚುನಾವಣೆ: ಇಂದು 'ಕತ್ತಲೆ ರಾತ್ರಿ'
ಹದಿನೇಳನೇ ಲೋಕಸಭೆಗಾಗಿ ಎರಡನೇ ಹಂತದ ಚುನಾವಣೆ (ರಾಜ್ಯದ ಮೊದಲ ಹಂತ) ಗುರುವಾರ, ಏಪ್ರಿಲ್ ಹದಿನೆಂಟರಂದು ನಡೆಯಲಿದೆ. ಬಹಿರಂಗ ಪ್ರಚಾರ ಮಂಗಳವಾರ ಅಂತ್ಯಗೊಂಡಿದ್ದು, ಮನೆಮನೆ ಪ್ರಚಾರವನ್ನು ಎಲ್ಲಾ ಅಭ್ಯರ್ಥಿಗಳು ನಡೆಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಒಟ್ಟಾರೆಯಾಗಿ ದೇಶದಲ್ಲಿ ಇದುವರೆಗೆ ಚುನಾವಣಾ ಸಂಬಂಧ ಅಕ್ರಮವಾಗಿ ಇಟ್ಟುಕೊಂಡಿದ್ದ ಹಣವನ್ನು ವಶಪಡಿಸಿಕೊಂಡಿರುವ ಮೊತ್ತ ಸುಮಾರು 630 ಕೋಟಿಗೂ ಹೆಚ್ಚು. ಇನ್ನು ಮದ್ಯ, ಚಿನ್ನ, ಮತದಾರರನ್ನು ಓಲೈಸಲು ಶೇಖರಿಸಿಟ್ಟುಕೊಂಡಿದ್ದ ಗೃಹೋಪಯೋಗಿ ವಸ್ತುಗಳೂ ಸೇರಿದಂತೆ ಲೆಕ್ಕವಿಲ್ಲದಷ್ಟು ವಸ್ತುಗಳನ್ನು ಜಫ್ತಿಮಾಡಲಾಗಿದೆ.
ಕೆಲವು ದಿನಗಳ ಹಿಂದೆ ಹೀಗೊಂದು ಮಾತು ಕೇಳಿಬಂದಿತ್ತು, ಪ್ರಚಾರ ಮಾಡ್ಲಿ..ಮಾಡ್ಲಿ.. ನಮ್ ಚುನಾವಣೆ ಆರಂಭವಾಗುವುದೇ ಇಲೆಕ್ಷನಿಗೆ 24ಗಂಟೆಗೆ ಇರಬೇಕಾದರೆ ಎಂದು. ಚುನಾವಣೆಗೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು, ತಿಂಗಳುಗಟ್ಟಲೆ ಬಿಸಿಲು, ಧೂಳು ಲೆಕ್ಕಿಸದೇ ಕ್ಷೇತ್ರವನ್ನು ಸುತ್ತಿ, ಮತದಾರರ ಕಷ್ಟಸುಖವನ್ನು ಅರಿತು, ಕೊನೆಯ ದಿನದವರೆಗೂ ಪ್ರಚಾರ ನಡೆಸಿ ಉಸ್ಸಪ್ಪಾ ಎಂದು ಸುಧಾರಿಸಿ ಕೂತಾಗ, ಇವೆಲ್ಲವನ್ನೂ ಮೀರಿಸುವ ಚುನಾವಣಾ ತಂತ್ರಗಾರಿಕೆಯನ್ನು ವಿರೋಧಿಗಳು ಹಣೆದಿರುತ್ತಾರೆ. ಇದೇ ರಾಜಕೀಯ..
ಕೋಲಾರ: ಕೊನೇ ಕ್ಷಣದಲ್ಲಿ ಕೆ ಎಚ್ ಮುನಿಯಪ್ಪಗೆ ಭಾರೀ ಹಿನ್ನಡೆ
ಚುನಾವಣೆ ಎನ್ನುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಬ್ಬ ಎನ್ನುವ ಮಾತಿತ್ತು. ಆದರೆ, ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತದಾರರನ್ನು ಓಲೈಸದೇ ಚುನಾವಣೆ ಗೆಲ್ಲಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಮತದಾರರೋ ಅಥವಾ ನಮ್ಮ ರಾಜಕೀಯ ವ್ಯವಸ್ಥೆಯೋ? ಮತದಾನದ ಹಿಂದಿನ ದಿನವನ್ನು 'ಕತ್ತಲೆರಾತ್ರಿ' ಎಂದು ಕರೆಯುವ ರಾಜಕೀಯ ಭಾಷೆಯಿದೆ.
ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನೇ ಮುಂದಕ್ಕೆ ಹಾಕಲಾಯಿತು
ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆಯುವ ದಿನವಾದ ಏಪ್ರಿಲ್ 18ರಂದು ತಮಿಳುನಾಡಿನಲ್ಲೂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಕೋಟ್ಯಾಂತರ ರೂಪಾಯಿ ಅಕ್ರಮ ಹಣವನ್ನು ಐಟಿ ಇಲಾಖೆ/ ಚುನಾವಣಾ ಆಯೋಗ ಜಫ್ತಿ ಮಾಡಿದ ನಂತರ, ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನೇ ಮುಂದಕ್ಕೆ ಹಾಕಲಾಯಿತು. ತಲಾ ಮುನ್ನೂರು ರೂಪಾಯಿಯಂತೆ ಮತದಾರರಿಗೆ ಚುನಾವಣೆಯ ಹಿಂದಿನ ದಿನ ನೀಡಲು ಈ ಹಣವನ್ನು ಸಂಗ್ರಹಿಸಿಡಲಾಗಿತ್ತು.
ಚುನಾವಣಾ ಕಾಲೇ ಬಹುಕೃತ ವೇಷಂ: 'ಕೇಸರಿ' ಮೊರೆಹೋದ ಕಾಂಗ್ರೆಸ್
ಮತದಾನದ ಹಿಂದಿನ ರಾತ್ರಿ ನಡೆಯುವ 'ಹಂಚುವಿಕೆ' ಕ್ಷೇತ್ರದ ಸಮೀಕರಣವನ್ನೇ ಬದಲಾಯಿಸಿತ್ತದೆ
ಕ್ಷೇತ್ರದ ಅಭಿವೃದ್ದಿ, ದರ್ಶ ನಾಯಕತ್ವಕ್ಕೆ ಆದ್ಯತೆ ಕೊಡದೇ, ಯಾವ ಪಕ್ಷದವರು ಎಷ್ಟು ಕೊಟ್ಟರು, ಅವರೆಷ್ಟು ಕೊಡುತ್ತಾರೆ ಎನ್ನುವುದೇ ಮಹತ್ವ ಪಡೆದುಕೊಂಡಿರುವುದಕ್ಕೋ ಏನೋ, ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಹಣಹೆಂಡ ಹಂಚುವ ಬಹಳಷ್ಟು ಉದಾಹರಣೆಗಳು ಈ ಲೋಕಸಭಾ ಚುನಾವಣೆಯಲ್ಲೂ ಸಿಗುತ್ತಿವೆ. ಇದೆಷ್ಟು ಪ್ರಭಾವಶಾಲಿಯಾಗಿರುತ್ತದೆ ಎಂದರೆ, ಮತದಾನದ ಹಿಂದಿನ ರಾತ್ರಿ ನಡೆಯುವ 'ಹಂಚುವಿಕೆ' ಕ್ಷೇತ್ರದ ಸಮೀಕರಣವನ್ನೇ ಬದಲಾಯಿಸುವಷ್ಟರ ಮಟ್ಟಿಗೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಒಂದು ವೋಟಿಗೆ ಎಷ್ಟು ದುಡ್ಡು ಹೊಡೀತಾರೆ ಎನ್ನುವ ಲೆಕ್ಕಾಚಾರ
ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳಲ್ಲಿ ಅದೆಷ್ಟೋ ಚುನಾವಣೆಗಳು ನಡೆದು ಹೋಗಿವೆ. ಬ್ಯಾಲೆಟ್ ಪೇಪರ್ ನಿಂದ, ಇವಿಎಂಗೆ ಬಂದಿರವುದಷ್ಟೇ ಸಾಧನೆ ಎನ್ನಬಹುದೇ ಹೊರತು, ರಾಜಕೀಯ ಪಕ್ಷಗಳು ಆಮಿಷವೊಡ್ಡುವುದು, ಮತದಾರ ಅದಕ್ಕಾಗಿಯೇ ಬಾಯಿಬಿಡುವ ಹತ್ತು ಹಲವಾರು ಉದಾಹರಣೆಗಳು ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಈಗಲೂ ಇದೆ. ಒಂದು ವೋಟಿಗೆ ಎಷ್ಟು ದುಡ್ಡು ಹೊಡೀತಾರೆ ಎನ್ನುವ ಲೆಕ್ಕಾಚಾರ ಬರೀ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲದೇ ನಗರಭಾಗದಲ್ಲೂ ಇತ್ತೀಚಿನ ದಿನಗಳಲ್ಲಿ ಮಾಮೂಲಿಯಾಗಿರುವುದು ಗೊತ್ತಿರುವ ವಿಚಾರ.
ರಾಜಕೀಯ ಪಕ್ಷಗಳು ಇನ್ನೊಂದು ದಾರಿಯನ್ನು ಹುಡುಕಿರುತ್ತವೆ
ಅರ್ಹ ಅಭ್ಯರ್ಥಿಯನ್ನು ಆಯ್ಕೆಮಾಡಿದರೆ ಕ್ಷೇತ್ರಕ್ಕೇ ಮುಂದಿನ ದಿನಗಳಲ್ಲಿ ಒಳ್ಲೆಯದು ಎನ್ನುವ ಯಾವ ಆಲೋಚನೆಯನ್ನೂ ಮಾಡದ ಕೆಲವು ಮತದಾರರು ಇನ್ನೂ ಆಮಿಷಕ್ಕೆ ಒಳಗಾಗುತ್ತಲೇ ಇದ್ದಾರೆ. ಅದಕ್ಕೇ, ನೀ ಚಾಪೆ ಕೆಳಗೆ ನುಗ್ಗಿದರೆ, ನಾ ರಂಗೋಲಿ ಕೆಳಗೆ ನುಗ್ಗುತ್ತೇನೆ ಎನ್ನುವಂತೆ, ಚುನಾವಣಾ ಆಯೋಗ ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ, ರಾಜಕೀಯ ಪಕ್ಷಗಳು ಇನ್ನೊಂದು ದಾರಿಯನ್ನು ಹುಡುಕಿರುತ್ತವೆ.
ಚುನಾವಣೆ ನಡೆಯುವ ಹಿಂದಿನ ದಿನದ ಕತ್ತಲೆ ರಾತ್ರಿ
ಚುನಾವಣೆ ನಡೆಯುವ ಹಿಂದಿನ ದಿನದ ಕತ್ತಲೆ ರಾತ್ರಿಯಲ್ಲಿ ನಡೆಯುವ ವಹಿವಾಟುಗಳೇ ಬೇರೆ. ಧರ್ಮಸ್ಥಳ, ತಿರುಪತಿ ದೇವರ ಮೇಲೆ ಪ್ರಮಾಣ ಮಾಡಿಸಿ ದುಡ್ಡು ಹಂಚುವುದು, ಗ್ರಾಮದ ಮುಖಂಡರ ಮುಖಾಂತರ ಹೆಂಡ ಹಂಚುವುದು, ಮಹಿಳೆ ಮತ್ತು ಪುರುಷರನ್ನು ಓಲೈಸಲು ಇನ್ನೇನೇನೋ ಆಮಿಷಗಳು ನಡೆಯುವುದು, ಇವೆಲ್ಲವೂ ಬಹುತೇಕ ನಡೆಯುವುದು ಮತದಾನದ ಹಿಂದಿನ ದಿನ. ಈ ಕತ್ತಲೆರಾತ್ರಿ, ಕ್ಷೇತ್ರದ ಲೆಕ್ಕಾಚಾರವನ್ನೇ ಬದಲಾಯಿಸಬಲ್ಲದು. ಅದಕ್ಕೇ ಹೇಳುವುದು, ರಾಜಕೀಯ ಎಲ್ಲರಿಗೂ ಮಾಡಲು ಸಾಧ್ಯವಿಲ್ಲ ಎಂದು.