ಕರ್ನಾಟಕದಲ್ಲಿ ಡೆಡ್ಲಿ ಕೊರೊನಾವೈರಸ್ ನಿಂದ 12 ಮಂದಿ ಸಾವು!
ಬೆಂಗಳೂರು, ಜೂನ್.18: ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ತಗಲಿದವರೆಲ್ಲ ಸಾವಿನ ಮನೆ ಸೇರುವುದಿಲ್ಲ ಎಂದು ಜನರು ನಿರಾತಂಕವಾಗಿದ್ದರು. ಆದರೆ ರಾಜ್ಯದಲ್ಲಿನ ಪರಿಸ್ಥಿತಿ ಬದಲಾಗುತ್ತಿದೆ. ಡೆಡ್ಲಿ ವೈರಸ್ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ.
Recommended Video
ಕರ್ನಾಟಕದಲ್ಲಿ ಕೊವಿಡ್-19 ಮಹಾಮಾರಿಯು ಮರಣ ಮೃದಂಗವನ್ನು ಬಾರಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ 12 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರು ಒಂದರಲ್ಲೇ 8 ಮಂದಿ ಉಸಿರು ಚೆಲ್ಲಿದ್ದಾರೆ.
ಭಾರತದಲ್ಲಿ ಸಾವಿನ ಮನೆ ಸೇರುತ್ತಿರುವ ಕೊರೊನಾವೈರಸ್ ಸೋಂಕಿತರೆಷ್ಟು?
ರಾಜ್ಯದಲ್ಲಿ ಒಂದೇ ದಿನ 210 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆಯು ಬರೋಬ್ಬರಿ 7944ಕ್ಕೆ ಏರಿಕೆಯಾಗಿದೆ. ಇನ್ನು, ಮಹಾಮಾರಿಗೆ ಬಲಿಯಾದವರ ಸಂಖ್ಯೆಯೂ ಏರುಮುಖವಾಗುತ್ತಿದೆ. ಇದುವರೆಗೂ ಕರ್ನಾಟಕದಲ್ಲಿ ಕೊರೊನಾವೈರಸ್ ಗೆ 114 ಮಂದಿ ಬಲಿಯಾಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿಗೆ ಎಂಟು ಜನರು ಬಲಿ
ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಮೊದಲ ದಿನದಿಂದಲೂ ಬೆಂಗಳೂರಿಗರಿಗೆ ಆತಂಕ ಕಾಡುತ್ತಿದೆ. ಸಿಲಿಕಾನ್ ಸಿಟಿಯಲ್ಲೇ ಅತಿಹೆಚ್ಚು ಮಂದಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿದ್ದು, ಇದೀಗ ಮಹಾಮಾರಿಗೆ ಅತಿಹೆಚ್ಚು ಬಲಿಯಾದವರ ಸಂಖ್ಯೆಯಲ್ಲೂ ಕೂಡಾ ರಾಜಧಾನಿ ಅಗ್ರಸ್ಥಾನದಲ್ಲಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ಒಂದರಲ್ಲೇ 8 ಮಂದಿ ಕೊರೊನಾವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಇದುವರೆಗೂ ಮಹಾಮಾರಿಗೆ 51 ಮಂದಿ ಉಸಿರು ಚೆಲ್ಲಿದ್ದಾರೆ.
ಕೊರೊನಾವೈರಸ್ ನಿಂದ ನಾಲ್ಕು ಜಿಲ್ಲೆಗಳಲ್ಲಿ ನಾಲ್ಕು ಮಂದಿ ಬಲಿ
ಬೆಂಗಳೂರಿನಲ್ಲಿ ಒಂದೇ ದಿನ ಎಂಟು ಮಂದಿಗೆ ಕೊರೊನಾವೈರಸ್ ಗೆ ಬಲಿಯಾಗಿದ್ದಾರೆ. ಉಳಿದಂತೆ ಕಲಬುರಗಿ, ಕೊಪ್ಪಳ, ಬೀದರ್ ಮತ್ತು ವಿಜಯಪುರದಲ್ಲಿ ಒಬ್ಬೊಬ್ಬರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ಕಲಬುರಗಿಯಲ್ಲಿ 50 ವರ್ಷದ ಪುರುಷ, ವಿಜಯಪುರದಲ್ಲಿ 66 ವರ್ಷದ ಮಹಿಳೆ, ಬೀದರ್ ನಲ್ಲಿ 55 ವರ್ಷದ ಪುರುಷ ಹಾಗೂ ಕೊಪ್ಪಳದಲ್ಲಿ 50 ವರ್ಷದ ಮಹಿಳೆಯು ಕೊರೊನಾವೈರಸ್ ನಿಂದ ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 210 ಮಂದಿಗೆ ಕೊರೊನಾವೈರಸ್ ಪಾಸಿಟಿವ್
ನೊವೆಲ್ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ರಾಜ್ಯದಲ್ಲಿ 7944ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಒಂದೇ ದಿನ 210 ಮಂದಿಗೆ ಸೋಂಕು ದೃಢಪಟ್ಟಿದೆ. ಬಳ್ಳಾರಿ - 48, ಕಲಬುರಗಿ -48, ದಕ್ಷಿಣ ಕನ್ನಡ - 23, ರಾಮನಗರ - 21, ಬೆಂಗಳೂರು ನಗರ -17, ಯಾದಗಿರಿ -8, ಮಂಡ್ಯ -7, ಬೀದರ್ -6, ಗದಗ - 5, ರಾಯಚೂರು - 4, ಹಾಸನ - 4, ಧಾರವಾಡ - 4, ದಾವಣಗೆರೆ - 3, ಚಿಕ್ಕಮಗಳೂರು - 3, ವಿಜಯಪುರ - 2, ಉತ್ತರ ಕನ್ನಡ -2, ಮೈಸೂರು - 2, ಬಾಗಲಕೋಟೆ - 1, ಶಿವಮೊಗ್ಗ - 1, ಕೊಪ್ಪಳ -1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಗುರುವಾರ 179 ಸೋಂಕಿತರು ಗುಣಮುಖ
ಇನ್ನು, ರಾಜ್ಯದಲ್ಲಿ 210 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದರೆ, ಒಂದೇ ದಿನ 179 ಸೋಂಕಿತರು ಗುಣಮುಖರಾಗಿದ್ದಾರೆ. ಉಡುಪಿ - 38, ಬಳ್ಳಾರಿ - 37, ಕಲಬುರಗಿ -32, ಮಂಡ್ಯ -15, ಬೆಂಗಳೂರು ನಗರ -14, ಬೀದರ್ -12, ದಾವಣಗೆರೆ - 8, ದಕ್ಷಿಣ ಕನ್ನಡ -6, ಮೈಸೂರು - 6, ಚಿಕ್ಕಬಳ್ಳಾಪುರ -5, ಹಾಸನ - 4, ರಾಮನಗರ - 2 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.