ಸರ್ಕಾರದ ಆದೇಶದಂತೆ 21 ಕೋಮು ಹಿಂಸಾಚಾರ ಪ್ರಕರಣಗಳು ರದ್ದು
ಬೆಂಗಳೂರು, ಜನವರಿ 29: ಕಳೆದ ಆಗಸ್ಟ್ 31ರಂದು ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶದಂತೆ ಅಕ್ಟೋಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ ಕೋಮು ಗಲಭೆ, ಗೋ ರಕ್ಷಣೆ ಸಂದರ್ಭದ ಹಿಂಸಾಚಾರಗಳಿಗೆ ಸಂಬಂಧಿಸಿದ ಸುಮಾರು 21 ಪ್ರಕರಣಗಳನ್ನು ನ್ಯಾಯಾಲಯಗಳಿಂದ ಕೈಬಿಡಲಾಗಿದೆ.
ಸರ್ಕಾರದ ಆದೇಶದ ವಿರುದ್ಧ ಮಾನವ ಹಕ್ಕುಗಳ ಸಂಸ್ಥೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣಗಳ ವಿಚಾರಣೆಯನ್ನು ಸ್ಥಗಿತಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ಡಿಸೆಂಬರ್ 21ರಂದು ಹೈಕೋರ್ಟ್ ಆದೇಶಿಸಿತ್ತು. ಅದಕ್ಕೂ ಮೊದಲೇ ರಾಜ್ಯ ಸರ್ಕಾರ 21 ಪ್ರಕರಣಗಳನ್ನು ಕೈಬಿಟ್ಟಿದೆ. ಬಿಜೆಪಿ ಸಂಸದ ಪ್ರತಾಪ್ ಸಿಂಹ, ಹಿಂದೂ ಸಂಘಟನೆಗಳ 206 ಸದಸ್ಯರು ಮತ್ತು 106 ಮುಸ್ಲಿಮರ ವಿರುದ್ಧದ ಪ್ರಕರಣಗಳನ್ನು ರದ್ದುಗೊಳಿಸಲಾಗಿದೆ.
ಜನಪ್ರತಿನಿಧಿಗಳ ಪ್ರಕರಣದಲ್ಲಿ ಸಾಕ್ಷಿಗಳಿಗೆ ರಕ್ಷಣೆ: ಹೈಕೋರ್ಟ್ ಸೂಚನೆ
2020ರ ಆಗಸ್ಟ್ 31ರಂದು ಆದೇಶ ಹೊರಡಿಸಿದ ಕೂಡಲೇ ರಾಜ್ಯ ಸರ್ಕಾರವು ವಿಚಾರಣಾ ನ್ಯಾಯಾಲಯಗಳನ್ನು ಸಂಪರ್ಕಿಸಿ 2014-2019ರ ಅವಧಿಯಲ್ಲಿ ದಾಖಲಾದ 21 ವಿವಿಧ ಕೋಮು ಹಿಂಸಾಚಾರ ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಮುಂದಾಗಿತ್ತು. ಅದರಂತೆ ಅಕ್ಟೋಬರ್ 10ರಿಂದ ಡಿಸೆಂಬರ್ 10ರ ಅವಧಿಯಲ್ಲಿ 21 ಪ್ರಕರಣಗಳನ್ನು ಕೈಬಿಡಲಾಗಿದೆ. ಮುಂದೆ ಓದಿ.
ಇಲಾಖೆಗಳ ಆಕ್ಷೇಪಣೆ
ಮಾಜಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಬಿಜೆಪಿ ಶಾಸಕ ಸುನಿಲ್ ನಾಯ್ಕ್ ಮತ್ತು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರ ಮನವಿ ಮೇರೆಗೆ ಈ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ರಾಜ್ಯ ಪೊಲೀಸರು, ವಿಚಾರಣೆ ಮತ್ತು ಕಾನೂನು ಇಲಾಖೆಗಳ ಲಿಖಿತ ಆಕ್ಷೇಪಣೆ ನಡುವೆಯೂ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪ್ರತಾಪ್ ಸಿಂಹ ವಿರುದ್ಧ ಪ್ರಕರಣ
2017ರ ಡಿಸೆಂಬರ್ನಲ್ಲಿ ಮೈಸೂರಿನ ಹುಣಸೂರಿನಲ್ಲಿ ಹನುಮಾನ್ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಪೊಲೀಸ್ ಬ್ಯಾರಿಕೇಡ್ಗೆ ಜೀಪ್ ಗುದ್ದಿಸಿದ ಆರೋಪದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಹುಣಸೂರು ನ್ಯಾಯಾಲಯವು ಅ. 10ರಂದು ಕೈಬಿಟ್ಟಿದೆ.
ಹಿಂದೂ, ಮುಸ್ಲಿಂ ಖುಲಾಸೆ
ಹುಣಸೂರು ಕೋಮು ಘಟನೆಯ ಇತರೆ ಪ್ರಕರಣಗಳನ್ನು ಕಳೆದ ವರ್ಷದ ನವೆಂಬರ್ 26ರಂದು ಹಿಂಪಡೆಯಲಾಗಿದೆ. ಇದು ಹಿಂದೂ ಮತ್ತು ಮುಸ್ಲಿಂ ಎರಡು ಗುಂಪುಗಳ ನಡುವಿನ ಸಂಘರ್ಷದ ಪ್ರಕರಣವಾಗಿದೆ. 142 ಹಿಂದೂ ಮತ್ತು 40 ಮುಸ್ಲಿಂ ಯುವಕರ ಮೇಲಿನ ಪ್ರಕರಣಗಳನ್ನು ರದ್ದುಗೊಳಿಸಲಾಗಿದೆ.
ಹೊನ್ನಾವರ ಸಂಘರ್ಷ
2018ರ ವಿಧಾನಸಭೆ ಚುನಾವಣೆಗೂ ಮುನ್ನ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ದಾಖಲಾಗಿದ್ದ ಐದು ಪ್ರಕರಣಗಳಲ್ಲಿ 110 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. 2017ರ ಡಿಸೆಂಬರ್ನಲ್ಲಿ ನಡೆದ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ನಡೆಸಲಾಗಿದ್ದ ಮೆರವಣಿಗೆ ವೇಳೆ ಸಂಘರ್ಷ ನಡೆದಿತ್ತು.
ಬೀದರ್, ಧಾರವಾಡ ಪ್ರಕರಣ
2018ರಲ್ಲಿ ಬೀದರ್ನಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಉಂಟಾದ ಕೋಮು ಗಲಭೆಯ ಪ್ರಕರಣ, ಗೋರಕ್ಷರ ವಿರುದ್ಧ ದಾಖಲಾದ ಕೇಸ್ಗಳನ್ನು ಮತ್ತು 2015ರ ಧಾರವಾಡದಲ್ಲಿ ನಡೆದ ಕೋಮು ಗಲಭೆ ಪ್ರಕರಣಗಳನ್ನು ಕೈಬಿಡಲಾಗಿದೆ.