2022 ಹೊಸ ವರ್ಷ: ರಿಲಾಕ್ಸ್ ಆದ ರಾಜಕೀಯ ನಾಯಕರು, ಯಡಿಯೂರಪ್ಪ ಮನೆಯಲ್ಲಿ ಉಪಾಹಾರ
ಬೆಂಗಳೂರು, ಜನವರಿ 1: ಹೊಸ ವರ್ಷದ ದಿನ ರಾಜಕೀಯ ನಾಯಕರು ರಿಲಾಕ್ಸ್ ಆಗಿದ್ದಾರೆ. ದೈನಂದಿನ ರಾಜಕೀಯ ಚಟುವಟಿಕೆಗಳನ್ನು ಬದಿಗಿಟ್ಟು, ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಯಾವುದೇ ನಾಯಕರು ವರ್ಷದ ಆರಂಭದ ದಿನ ಯಾವುದೇ ಅಧಿಕೃತ ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲ. ಬದಲಿಗೆ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದು, ಹಿರಿಯ ನಾಯಕರು, ಸ್ನೇಹಿತರ ಮನೆಗಳಿಗೆ ಭೇಟಿ, ಉಪಾಹಾರ- ಊಟದಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವರ್ಷದ ಆರಂಭದ ದಿನವನ್ನು ಸಂತಸದಲ್ಲಿಯೇ ಕಳೆಯುತ್ತಿದ್ದಾರೆ.
ಮುಖ್ಯಮಂತ್ರಿ ಮನೆಗೆ ಎಂದಿನಂತೆ ಮಾಧ್ಯಮ ಪ್ರತಿನಿಧಿಗಳು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಹೊಸ ವರ್ಷ ಎಲ್ಲರಿಗೂ ಶುಭ ತರಲಿ. ಎಲ್ಲರೂ ಹೊಸ ವರ್ಷ ಆಚರಣೆ ಮಾಡಿ. ಇಂದು ಯಾವುದೇ ರಾಜಕೀಯ ಮಾತನಾಡುವುದು ಬೇಡ ಎಂದು ಹೇಳಿಕೆ ನಿಡಿದರು.
ವರ್ಷದ ಮೊದಲ ದಿನ ಸಿಎಂ ದೇವಸ್ಥಾನಕ್ಕೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರ್ಷದ ಮೊದಲ ದಿನ ದೇವಸ್ಥಾನಕ್ಕೆ ಭೇಟಿ ನೀಡಿ ನಾಡಿಗೆ ಒಳಿತಾಗಲಿ ಎಂದು ಪೂಜೆ ಸಲ್ಲಿಸಿದರು.
ವೈಯಾಲಿಕಾವಲ್ ಬಡಾವಣೆಯಲ್ಲಿರುವ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವ ಮುನಿರತ್ನ ಟಿಟಿಡಿ ನಿರ್ದೇಶಕ ಶಶಿಧರ ಸಾತ್ ನೀಡಿದ್ದರು.
ಬಿ.ಎಸ್. ಯಡಿಯೂರಪ್ಪ ಮನೆಗೆ ಭೇಟಿ
ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿದರು. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹೂ ಗುಚ್ಛ ನೀಡುವ ಮೂಲಕ ಹೊಸ ವರ್ಷಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ ಅವರೂ ಸಹ ಯಡಿಯೂರಪ್ಪ ಅವರ ಮನೆಗೆ ಧಾವಿಸಿ ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪ ಅವರಿಗೆ ಶುಭ ಕೋರಿದರು.
ಯಡಿಯೂರಪ್ಪನವರ ಜೊತೆ ಉಪಾಹಾರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ನಿವಾಸದಲ್ಲಿಯೇ ಉಪಾಹಾರ ಸೇವನೆ ಮಾಡಿದರು.
ಸಚಿವರಾದ ಗೋವಿಂದ ಕಾರಜೋಳ, ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರೂ ಸಹ ಯಡಿಯೂರಪ್ಪ ಅವರೊಟ್ಟಿಗೆ ಕುಳಿತು ಉಪಾಹಾರ ಸೇವನೆ ಮಡಿದರು. ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆಗೆ ಅವಕಾಶ ಮಾಡಿಕೊಡದೆ ಪರಸ್ಪರ ಶುಭಾಶಯ ವಿನಿಮಯ, ಆರೋಗ್ಯ ವಿಚಾರಣೆ, ಕುಟುಂಬದವರ ಭೇಟಿ ಹೀಗೆ ಸಂತಸದಿಂದಲ್ಲಿಯೇ ಕಾಲ ಕಳೆದರು.
ಅಧಿಕಾರಿಗಳಿಂದ ಸಿಎಂಗೆ ಶುಭಾಶಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹೊಸ ವರ್ಷದ ಅಂಗವಾಗಿ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಹೊಸ ವರ್ಷದ ಶುಭಾಷಯಗಳನ್ನು ಕೋರಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ರಾಜ್ಯ ಪೊಲೀಸ ಮಹಾ ನಿರ್ದೇಶಕ ಪ್ರವೀಣ ಸೂದ್ ಮತ್ತು ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಎಚ್.ಡಿ. ಕುಮಾರಸ್ವಾಮಿ ಅವರಿಂದ ಹೊಸ ವರ್ಷಕ್ಕೆ ಶುಭಾಶಯ
ಬಿಡದಿಯ ನಿವಾಸಲ್ಲಿಯೇ ಸಮಯ ಕಳೆಯುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೂ ಸಹ ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.
'ಸಮಸ್ತ ಕನ್ನಡಿಗರಿಗೆ ಹೊಸ ವರ್ಷದ ಶುಭಾಶಯಗಳು. 2022ರಲ್ಲಿ ಎಲ್ಲರಿಗೂ ನವಚೈತನ್ಯ ತುಂಬಿ, ಉತ್ತಮ ಆಯುರಾರೋಗ್ಯವನ್ನು ಆ ಭಗವಂತ ಕರುಣಿಸಲಿ. ಕರುನಾಡಿನಲ್ಲಿ ಸುಖ-ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ.ಮಾರಕ ವೈರಸ್ ಮಾರಿ ಮತ್ತೆ ವಿಜೃಂಭಿಸುತ್ತಿದ್ದು, ಯಾರೂ ಎಚ್ಚರ ತಪ್ಪುವುದು ಬೇಡ ಎನ್ನುವುದು ನನ್ನ ಕಳಕಳಿ' ಎಂದು ಹೇಳಿದ್ದಾರೆ.
Recommended Video