2021-22 ನೇ ಸಾಲಿನ SSLC ಪರೀಕ್ಷಾ ಮಾದರಿ ಕುರಿತು ಶಿಕ್ಷಣ ಸಚಿವರು ಹೇಳಿದ್ದೇನು?
ಬೆಂಗಳೂರು, ಸೆ. 21: ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 2021-22ನೇ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮೂರು ಮಾದರಿಯ ಪರೀಕ್ಷೆಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಕಳೆದ ವರ್ಷದಂತೆ ಬಹು ಆಯ್ಕೆ ಪ್ರಶ್ನೆ ಪ್ರತ್ರಿಕೆ ಇರಲಿದೆಯೇ? ಇಲ್ಲವೇ ಹಳೇ ಪದ್ಧತಿಯಂತೆ ಪರೀಕ್ಷೆ ನಡೆಯಲಿದೆಯಾ? ಅಥವಾ ಭೌತಿಕ ತರಗತಿಗಳಲ್ಲಿ ಮೂರು ತಿಂಗಳಿಗೆ ನಡೆಯುವ ಪರೀಕ್ಷೆಯ ಅಂಕವನ್ನೇ ಪರಿಗಣಿಸಿ ಫಲಿತಾಂಶ ನೀಡಲಿದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಉತ್ತರ ನೀಡಿದ್ದಾರೆ.
ಕೊರೊನಾ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ 2020-21 ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಪಿಯುಸಿ ಪರೀಕ್ಷೆ ರದ್ದು ಪಡಿಸಲಾಗಿತ್ತು. ಎಸ್ಎಸ್ಎಲ್ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳನ್ನು ಆಧರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮಹತ್ವದ ತೀರ್ಮಾನ ಕೈಗೊಂಡಿತ್ತು. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಲು ಯಾವ ಮಾನದಂಡವೂ ಅನುಸರಿಸಲು ಸಾಧ್ಯವಾಗಿರಲಿಲ್ಲ.
ಹೀಗಾಗಿ ಆರು ವಿಷಯಗಳಿಗೆ ಎರಡು ದಿನ ಪರೀಕ್ಷೆ ನಿಗದಿ ಪಡಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳನ್ನು ಕನಿಷ್ಠ ಅಂಕ ನೀಡಿ ಪಾಸು ಮಾಡುವ ಷರತ್ತಿನೊಂದಿಗೆ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಮಾದರಿ ಪರೀಕ್ಷೆ ನಡೆಸುವಲ್ಲಿ ಹಿಂದಿನ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಯಶಸ್ವಿಯಾಗಿದ್ದರು. ಇದೀಗ 2021-22 ನೇ ಶೈಕ್ಷಣಿಕ ಸಾಲಿನ ಕಥೆಯೇನು ಎಂಬ ಪ್ರಶ್ನೆ ಎದ್ದಿದೆ.
ಭೌತಿಕ ತರಗತಿಗಳು ಆರಂಭ
ಪ್ರಸಕ್ತ ಸಾಲಿನಲ್ಲಿ ಕಳೆದ ಒಂದು ತಿಂಗಳ ಹಿಂದಷ್ಟೇ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಿವೆ. ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಶಾಲೆಗಳು ಇನ್ನೂ ತೆರೆದಿಲ್ಲ. ತಿಂಗಳ ಹಿಂದಷ್ಟೇ ತರಗತಿಗಳ ಪಾಠ ಆರಂಭಿಸಲಾಗಿದೆ. ಇದರ ನಡುವೆ ಕೊರೊನಾ ಮೂರನೇ ಅಲೆ ಭೀತಿಯೂ ದೂರವಾಗಿಲ್ಲ. ಹೀಗಾಗಿ ಈ ವರ್ಷ ಈ ಮೊದಲಿದ್ದ ಆರು ವಿಷಯಗಳಿಗೆ ಉತ್ತರ ಬರೆಯುವ ಪರೀಕ್ಷೆಯನ್ನು ನಡೆಸುತ್ತಾರಾ? ಇಲ್ಲವೇ ಕಳೆದ ವರ್ಷದಂತೆ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಮಾದರಿ ಪರೀಕ್ಷೆ ನಡೆಸುತ್ತಾರಾ ಎಂಬುದರ ಬಗ್ಗೆ ಶಾಲಾ ವಲಯದಲ್ಲಿ ಗೊಂದಲ ನಿರ್ಮಾಣವಾಗಿದೆ.
ಪರೀಕ್ಷಾ ಪದ್ಧತಿ, ಸಿದ್ದತೆ
ಪರೀಕ್ಷಾ ಪದ್ಧತಿ ಮೊದಲೇ ಗೊತ್ತಾದರೆ, ಅದಕ್ಕೆ ತಕ್ಕ ಹಾಗೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಲು ಶಿಕ್ಷಕರಿಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಇರುವ ಗೊಂದಲವೂ ದೂರವಾಗಲಿದೆ. ಆದರೆ ಶಿಕ್ಷಣ ಇಲಾಖೆ ಪರೀಕ್ಷಾ ಮಾದರಿ ಬಗ್ಗೆಯಾಗಲೀ, ಪಠ್ಯ ಕಡಿತದ ಬಗ್ಗೆಯಾಗಲೀ ಯಾವುದೇ ಆದೇಶ ಹೊರಡಿಸಿಲ್ಲ. ಹೀಗಾಗಿ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳಲ್ಲಿ ಗೊಂದಲ ಏರ್ಪಟ್ಟಿದೆ. ಈ ಬಗ್ಗೆ ಶಿಕ್ಷಣ ಸಚಿವರು ಮೊದಲೇ ತೀರ್ಮಾನ ಪ್ರಕಟಿಸುವುದು ಸೂಕ್ತ. ಕಳೆದ ವರ್ಷ ಪರೀಕ್ಷಾ ವಿಚಾರವಾಗಿ ಸಾಕಷ್ಟು ಗೊಂದಲಗಳಿಗೆ ಎಡೆ ಮಾಡಿಕೊಡಲಾಗಿತ್ತು. ಈ ವರ್ಷ ಆ ಗೊಂದಲಗಳಿಗೆ ಅವಕಾಶ ಕೊಡಬಾರದು ಎಂದು ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು "ಒನ್ಇಂಡಿಯಾ ಕನ್ನಡ'ಕ್ಕೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಡಿಸೆಂಬರ್ ತಿಂಗಳಲ್ಲಿ ಪರೀಕ್ಷಾ ಪದ್ಧತಿ ನಿರ್ಣಯ
2021-22 ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಕುರಿತು ಎದ್ದಿರುವ ಗೊಂದಲ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಒನ್ಇಂಡಿಯಾ ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಪ್ರಾರಂಭಿಸಲಾಗಿದೆ. ಕೊರೊನಾ ಮೂರನೇ ಅಲೆ ಭೀತಿಯಿಂದ ಸಮಾಜ ದೂರವಾಗಿಲ್ಲ. ಹೀಗಾಗಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಯಾವ ಮಾದರಿ ಪರೀಕ್ಷೆ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿದ್ದು, ಡಿಸೆಂಬರ್ ತಿಂಗಳ ಒಳಗೆ ಪರೀಕ್ಷಾ ಮಾದರಿಯ ಬಗ್ಗೆ ವಿವರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
Recommended Video
ಮೂರು ಮಾದರಿಯ ಪರೀಕ್ಷೆ
ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳದೇ ಇದ್ದ ಪಕ್ಷದಲ್ಲಿ ಮೊದಲಿನಂತೆ ಆರು ವಿಷಯಗಳಿಗೆ ತಲಾ 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಯಲು ತೀರ್ಮಾನಿಸಿದ್ದೇವೆ. ಒಂದು ವೇಳೆ ಕೊರೊನಾ ಮೂರನೇ ಅಲೆ ಕಾಣಿಸಿಕೊಂಡು ಹೆಚ್ಚು ಪರಿಣಾಮ ಬೀರದಿದ್ದಲ್ಲಿ ಕಳೆದ ವರ್ಷ ಶಿಕ್ಷಣ ಇಲಾಖೆ ಪರಿಚಯಿಸಿದ ಬಹು ಆಯ್ಕೆ ಪ್ರಶ್ನೆ ಮಾದರಿಯ ಪರೀಕ್ಷೆ ನಡೆಸುತ್ತೇವೆ. ಒಂದು ವೇಳೆ ಕೊರೊನಾ ಮೂರನೇ ಅಲೆ ಪರಿಣಾಮ ತುಂಬಾ ಬಿದ್ದು, ತರಗತಿಗಳನ್ನು ರದ್ದು ಮಾಡಿದ್ದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಈಗಾಗಲೇ ಶಾಲಾ ಹಂತದಲ್ಲಿ ಮೂರು ತಿಂಗಳಿಗೊಮ್ಮೆ ಬರೆದಿರುವ ಪರೀಕ್ಷೆಗಳ ಅಂಕಗಳನ್ನು ಮಾನದಂಡ ಇಟ್ಟುಕೊಂಡು ಫಲಿತಾಂಶ ಪ್ರಕಟಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಈ ಬಗ್ಗೆ ತಜ್ಞರ ಹಾಗೂ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಬೇಕಿದೆ. ಡಿಸೆಂಬರ್ ತಿಂಗಳ ಒಳಗೆ ಈ ಗೊಂದಲಗಳಿಗೆ ಪೂರ್ಣ ಪ್ರಮಾಣದಲ್ಲಿ ತೆರೆ ಬೀಳಲಿದೆ. ಕೊರೊನಾ ಮೂರನೇ ಅಲೆ ಭೀತಿ ಇರುವುದರಿಂದ ಈ ಹಂತದಲ್ಲಿ ಯಾವ ತೀರ್ಮಾನ ಕೈಗೊಳ್ಳುವುದು ಸೂಕ್ತವಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.